ಎಕರೆಗಟ್ಟಲೆ ಕಲ್ಲಂಗಡಿ ಕಿತ್ತು ಬೇರೆ ಬೆಳೆಯತ್ತ ಚಿತ್ತ ಹರಿಸಿದ ಗುಂಡ್ಲುಪೇಟೆ ರೈತ
ಚಾಮರಾಜನಗರ, ಏಪ್ರಿಲ್ 14: ಇಷ್ಟರಲ್ಲಿಯೇ ಕೊಯ್ಲಿಗೆ ಬಂದಿದ್ದ ಕಲ್ಲಂಗಡಿಯನ್ನು ಮಾರಾಟ ಮಾಡಿದ್ದರೆ ಈ ರೈತನಿಗೆ ಒಂದಷ್ಟು ಆದಾಯ ಸಿಗುತ್ತಿತ್ತು. ಆದರೆ ಅದೇ ಸಮಯಕ್ಕೆ ಲಾಕ್ ಡೌನ್ ಆಗಿದ್ದರಿಂದಾಗಿ ಕಲ್ಲಂಗಡಿಯನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಜಮೀನಿನಲ್ಲಿಯೇ ಅವು ಕೊಳೆತು ಹೋಗಿವೆ.
ಸಾಮಾನ್ಯವಾಗಿ ಕಲ್ಲಂಗಡಿ ಬೆಳೆ ಬೆಳೆದ ಜಮೀನಿನಲ್ಲಿ ಕೊಯ್ಲು ಮುಗಿದ ಬಳಿಕ ಬೇರೆ ಬೆಳೆಯನ್ನು ಬೆಳೆಯುವತ್ತ ರೈತರು ಚಿತ್ತ ಹರಿಸುತ್ತಾರೆ. ಅದರಂತೆ ಈಗಲೂ ರೈತರು ಕೊಯ್ಲು ಮಾಡದ ಕಲ್ಲಂಗಡಿಯನ್ನು ಉಳುಮೆ ಮಾಡಿ ನಾಶ ಮಾಡುವುದರೊಂದಿಗೆ ಸಹಸ್ರಾರು ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ಅಂತರ್ಜಲ ವೃದ್ಧಿಯಾಗಿತ್ತು
ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ಕೆಲವು ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದ ನೀರಿನ ಸಮಸ್ಯೆ ಪರಿಹಾರವಾಗಿ ಅಂತರ್ಜಲವೃದ್ಧಿಯಾಗಿತ್ತು. ಹೀಗಾಗಿ ರೈತರು ಕಲ್ಲಂಗಡಿ ಬೆಳೆಯುವ ಮನಸ್ಸು ಮಾಡಿದ್ದರು. ಹೇಗೋ ಬೇಸಿಗೆ ಹೊತ್ತಿಗೆ ಕಲ್ಲಂಗಡಿ ಕೊಯ್ಲಿಗೆ ಬಂದರೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುವುದರೊಂದಿಗೆ ಆದಾಯ ಪಡೆಯಬಹುದೆಂದು ಆಲೋಚನೆ ಮಾಡಿದ್ದರು.
ಫಲ ತುಂಬಿದ ದಾಳಿಂಬೆ ಮರಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿದ ಬಳ್ಳಾರಿ ರೈತ ಮಹಿಳೆ
ಎರಡು ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿ
ಕಲ್ಲಂಗಡಿ ಬೆಳೆಯೂ ಉತ್ತಮವಾಗಿಯೇ ಬಂದಿತ್ತು. ಆದರೆ ಕೊಯ್ಲಿನ ಸಮಯಕ್ಕೆ ಸರಿಯಾಗಿ ಲಾಕ್ ಡೌನ್ ಆಗಿದ್ದರಿಂದ ಕಲ್ಲಂಗಡಿಯನ್ನು ಕೇಳುವವರೇ ಇಲ್ಲದಂತಾಗಿ ರೈತರು ಕಂಗಾಲಾಗಿಬಿಟ್ಟರು. ಇದರ ಪರಿಣಾಮವನ್ನು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದ ರೈತ ಶಿವು ಕೂಡ ಅನುಭವಿಸಬೇಕಾಯಿತು. ರೈತ ಶಿವು ಎರಡು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು.
ಕೇರಳಕ್ಕೆ ಸರಬರಾಜಾಗುತ್ತಿದ್ದ ಹಣ್ಣುಗಳು
ಮೊದಲಾಗಿದ್ದರೆ ಇಲ್ಲಿಂದ ಕೇರಳಕ್ಕೆ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಆಗುತ್ತಿದ್ದವು. ಜತೆಗೆ ಜ್ಯೂಸ್ ಗೆ ಹೆಚ್ಚು ಬಳಕೆಯಾಗುತ್ತಿತ್ತು. ಹೀಗಾಗಿ ಕೊಯ್ಲು ಮಾಡಿ ಮಾರುಕಟ್ಟೆಗೆ ಕೊಂಡೊಯ್ದರೆ ಒಂದಷ್ಟು ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಅದ್ಯಾವುದೂ ನಡೆಯದೆ ಶಿವು ಅವರು ಬೆಳೆದ ಕಲ್ಲಂಗಡಿ ಜಮೀನಿನಲ್ಲಿಯೇ ಉಳಿಯುವಂತಾಯಿತು. ಅಲ್ಲದೆ ಕೊಳೆಯಲು ಆರಂಭಿಸಿತು.
ಹೊಲದಲ್ಲೇ ಕೊಳೆಯುತ್ತಿದೆ ಕಲ್ಲಂಗಡಿ; ಚಾಮರಾಜನಗರ ರೈತರ ಗೋಳು
ಕಲ್ಲಂಗಡಿ ಬೆಳೆದಿದ್ದ ಜಾಗ ಉಳುಮೆ ಮಾಡಿದ ರೈತ
ಇದರಿಂದ ನೊಂದ ರೈತ ಶಿವು ಆಗಿರುವ ನಷ್ಟ ಆಗಿ ಹೋಯಿತು, ಅದರ ಕೊರಗಿನಲ್ಲಿ ಕಾಲ ಕಳೆಯುವ ಬದಲಿಗೆ ಅದೇ ಜಮೀನಿನಲ್ಲಿ ಉಳುಮೆ ಮಾಡಿ ಬೇರೆ ಬೆಳೆ ಬೆಳೆಯುವತ್ತ ಚಿತ್ತ ಹರಿಸಿದ್ದು ಕಣ್ಣೀರಿಡುತ್ತಾ ಉಳುಮೆ ಮಾಡಿದ್ದಾರೆ. ಒಂದು ಬೆಳೆ ಬೆಳೆಯುವುದರ ಹಿಂದೆ ಅದೆಷ್ಟು ಶ್ರಮ ಪಡಬೇಕೆಂಬುದು ಬೆಳೆ ಬೆಳೆದವರಿಗೆ ಮಾತ್ರ ಗೊತ್ತಾಗುತ್ತದೆ. ಅಂತಹ ಬೆಳೆಯನ್ನು ತನ್ನ ಕೈಯಿಂದಲೇ ನಾಶ ಮಾಡುವುದೆಂದರೆ ಸುಲಭದ ಮಾತಲ್ಲ. ಆದರೆ ಪರಿಸ್ಥಿತಿ ಹೀಗಿರುವುದರಿಂದ ಆಗಿರುವ ನಷ್ಟಕ್ಕೆ ಕೊರಗುವ ಬದಲಿಗೆ ಮುಂದೆ ಬೇರೆ ಬೆಳೆದು ಬದುಕು ಕಟ್ಟಿಕೊಳ್ಳುವತ್ತ ಮುಂದಾಗಿದ್ದಾರೆ.