ಚುನಾವಣಾ ಸಮಯದಲ್ಲಿಯೇ ಮಂಡ್ಯದಲ್ಲಿ ರೈತ ಆತ್ಮಹತ್ಯೆ
ಮಂಡ್ಯ, ಮಾರ್ಚ್ 21: ಮಂಡ್ಯದಲ್ಲಿ ಆಡಳಿತ ಯಂತ್ರವೇ ಬೀಡುಬಿಟ್ಟು ರೈತರ ಪರವಾಗಿ ಮಾತನಾಡುತ್ತಾ ಮಣ್ಣಿನ ಮಕ್ಕಳ ರಕ್ಷಣೆ ಮಾಡುವ ಫೋಸ್ ನೀಡುತ್ತಿದ್ದರೆ ಇತ್ತ ಬಡ ರೈತನೊಬ್ಬ ಸಾಲ ತೀರಿಸಲಾಗದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳಿನಲ್ಲಿ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ತೇಗನಹಳ್ಳಿ ಗ್ರಾಮದ ರೈತ ರಂಗಣ್ಣ(55) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಈತ ತೇಗನಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಮೀನು ಹೊಂದಿದ್ದು,ಅದರಲ್ಲಿ ಬೇಸಾಯ ಮಾಡುವ ಸಲುವಾಗಿ ಸ್ಟೇಟ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸೊಸೈಟಿಗಳಿಂದ ಸುಮಾರು ಐದಾರು ಲಕ್ಷ ಸಾಲ ಮಾಡಿದ್ದರು.
ಸಾಲದ ಹಣದಲ್ಲಿ ಕಬ್ಬು ಮತ್ತು ಬಾಳೆ ಬೆಳೆಯನ್ನು ಬೆಳೆದಿದ್ದರು. ಆದರೆ ಫಸಲು ಬರುವ ವೇಳೆಗೆ ನೀರಿಲ್ಲದೆ ಒಣಗಿ ಹೋಗಿ ನಾಶವಾಗಿದ್ದರಿಂದ ಸಾಲ ಕಟ್ಟುವುದು ಹೇಗೆ ಎಂಬ ಚಿಂತೆಗೊಳಗಾದ ರೈತ ರಂಗಣ್ಣ ಕಳೆದ ಎರಡು ದಿನಗಳ ಹಿಂದೆ ಗ್ರಾಮದಿಂದ ನಾಪತ್ತೆಯಾಗಿದ್ದರಲ್ಲದೆ, ಅಕ್ಕಿಹೆಬ್ಬಾಳು ಬಳಿ ಹರಿಯುವ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇತ್ತ ಮನೆಯಲ್ಲಿ ಅವರಿಗಾಗಿ ಹುಡುಕಾಟ ನಡೆಸಲಾಗಿತ್ತಾದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಬುಧವಾರ ರೈತನ ಮೃತ ದೇಹ ಹೇಮಾವತಿ ನದಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ನದಿಯಿಂದ ಹೊರತೆಗೆದು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಾಸುದಾರರಿಗೆ ನೀಡಲಾಗಿದೆ.












Click it and Unblock the Notifications