ಸಿದ್ದರಾಮಯ್ಯ ತವರಲ್ಲಿ ನಿಲ್ಲದ ರೈತರ ಆತ್ಮಹತ್ಯೆ
ಮೈಸೂರು, ಜುಲೈ 23: ಸಾಲಬಾಧೆಯಿಂದ ರೈತನೊಬ್ಬ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನ ಹೊಸಅಗ್ರಹಾರ ಹೋಬಳಿಯ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ದಿ.ಯೋಗೇಶ್ ಅವರ ಪುತ್ರ ಡಿ.ವೈ.ಹೇಮಂತ್ (26) ಆತ್ಮಹತ್ಯೆ ಮಾಡಿಕೊಂಡ ದುದೈರ್ವಿ. ಪಿತ್ರಾಜಿತ ಆಸ್ತಿಯಾಗಿ ಬಂದಿದ್ದ ಒಂದು ಎಕರೆ ಜಮೀನಿನಲ್ಲಿ ತಂದೆ ಸಾವನ್ನಪ್ಪಿದ್ದ ನಂತರ ಕಳೆದ ಆರೇಳು ವರ್ಷದಿಂದ ರೈತ ಹೇಮಂತ್ ವ್ಯವಸಾಯ ಮಾಡುತ್ತಿದ್ದರು. ಅದರಂತೆ ಜಮೀನಿನಲ್ಲಿ ಸಣ್ಣದಾಗಿ ಕೋಳಿ ಫಾರಂ ಕೃಷಿ ಮಾಡಲು ಕೆ.ಆರ್.ನಗರದ ವಿಜಯ ಬ್ಯಾಂಕ್ನಿಂದ 10 ಲಕ್ಷ ಸಾಲ ಪಡೆದಿದ್ದರು.

ಪ್ರತಿ ವರ್ಷಕ್ಕೊಮ್ಮೆ ಸಾಲ ಮರು ಪಾವತಿ ಮಾಡಿ ಸಾಲವನ್ನು ನವೀಕರಿಸುತ್ತಾ ಬಂದಿದ್ದು, ಕಳೆದ ವರ್ಷದಿಂದ ಕೋಳಿ ಫಾರಂಗೆ ನೀರಿನ ಕೊರತೆ ಕಂಡು ಬಂದಿದೆ. ಇದರಿಂದ ಕೋಳಿ ಸಾಕಾಣಿಗೆ ಬಹಳಷ್ಟು ತೊಂದರೆಯಾಗಿ ನಷ್ಟವುಂಟಾಗಿತ್ತು. ಇದರಿಂದ ಸಾಲ ಕಟ್ಟಲಾಗದೆ ಸಾಲದ ಬಡ್ಡಿ ಹೆಚ್ಚಾಗಿದಲ್ಲದೆ, ಬ್ಯಾಂಕ್ನ ಅಧಿಕಾರಿಗಳು ತೋಟ ಮತ್ತು ಕೋಳಿಫಾರಂ ಜಪ್ತಿ ಮಾಡುವುದಾಗಿ ನೋಟೀಸ್ ನೀಡಿದ್ದರು.
ಇದರಿಂದಾಗಿ ಮನನೊಂದು ಕಳೆದ ರಾತ್ರಿ ಕೋಳಿಪಾರಂ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಕುರಿತು ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರ ಸಾಂತ್ವನ
ಸಾಲಬಾಧೆಯಿಂದ ಯುವ ರೈತರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡ ಕುಟುಂಬದವರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಶಾಸಕ ಸಾ.ರಾ.ಮಹೇಶ್ ಸಾಂತ್ವನ ಹೇಳಿದರಲ್ಲದೆ, ತಾಲೂಕಿನ ರೈತರಿಗೆ ಯಾವುದೇ ಬ್ಯಾಂಕ್ನ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಾಲ ವಸೂಲಾತಿಗಾಗಿ ನೋಟಿಸ್ ನೀಡಬಾರದು ಎಂದಿದ್ದಾರೆ.
ಒಂದು ವೇಳೆ ನೋಟಿಸ್ ನೀಡಿದ್ದೇ ಆದಲ್ಲಿ ಬ್ಯಾಂಕ್ನ ಎದುರು ತಮಟೆ ಚಳುವಳಿ ಮಾಡಿ ಬ್ಯಾಂಕ್ಗೆ ಬೀಗ ಹಾಕುವುದಾಗಿ ಬ್ಯಾಂಕ್ನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸಾಲ ವಸೂಲಾತಿಗಾಗಿ ನೀವು ಕೊಡುವ ನೋಟೀಸ್ನಿಂದಾಗಿ ರೈತರು ತಾಲೂಕಿನಲ್ಲಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಆದ್ದರಿಂದ ರೈತರ ಮೇಲೆ ಸಾಲ ವಸೂಲಿಗಾಗಿ ಹೆಚ್ಚು ಒತ್ತಡ ಹೇರಬಾರದು ಎಂದು ಬ್ಯಾಂಕ್ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications