ಶಾರ್ಟ್ ಸರ್ಕ್ಯೂಟ್: ಲೊಕನಹಳ್ಳಿಯಲ್ಲಿ 20 ಹೆಕ್ಟೇರ್ಗೂ ಹೆಚ್ಚು ಕಬ್ಬು ಬೆಳೆ, 150ಕ್ಕೂ ಹೆಚ್ಚು ತೆಂಗಿನ ಮರಗಳು ಭಸ್ಮ
ಹನೂರು, ಜನವರಿ, 29: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ 20 ಹೆಕ್ಟೇರ್ಗೂ ಹೆಚ್ಚು ಕಬ್ಬು ಹಾಗೂ 150ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಲೊಕನಹಳ್ಳಿಯಲ್ಲಿ ನಡೆದಿದೆ. ಬೆಳೆ ಹಾನಿಯಾಗಿರುವುದನ್ನು ಖಂಡಿಸಿ ಲೊಕನಹಳ್ಳಿ ರೈತರು ರಸ್ತೆ ತಡೆದು ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಲೊಕ್ಕನಹಳ್ಳಿ ಗ್ರಾಮದ ಮೇಲು ಸ್ವಾಮಿ, ರುಕ್ಮಿಣಿ, ಸತೀಶ್ ಕುಮಾರ್ ಅವರು ತಮ್ಮ ಜಮೀನುಗಳಲ್ಲಿ ಕಬ್ಬು ಬೆಳೆದಿದ್ದರು. ಕಬ್ಬು ಬೆಳೆದು 18 ತಿಂಗಳಾಗಿದ್ದರೂ ಸಹ ಬಣ್ಣಾರಿ ಅಮ್ಮನ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಮಾಡದೇ ಇರುವುದರಿಂದ ಈ ದುರ್ಘಟನೆ ನಡೆದಿದೆ. ನಮ್ಮ ಈ ನಷ್ಟಕ್ಕೆ ಬಣ್ಣಾರಿ ಅಮ್ಮನ ಸಕ್ಕರೆ ಕಾರ್ಖಾನೆಯವರೇ ಪರಿಹಾರ ನೀಡಬೇಕು. ಚಾಮರಾಜನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ತಹಶೀಲ್ದಾರ್ ಅವರು ಸ್ಥಳಕ್ಕೆ ಆಗಮಿಸಿ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ ಸ್ಥಳದಲ್ಲೇ ಸೀಮೆಎಣ್ಣೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಹೋರಾತ್ರಿ ಪ್ರತಿಭಟನೆಯ ಎಚ್ಚರಿಕೆ
ರೈತ ಸತೀಶ್ ಕುಮಾರ್ ಮಾತನಾಡಿ, ನಾವು ಕಬ್ಬು ಬೆಳೆದು 18 ತಿಂಗಳಗಳಾಗಿವೆ. ಆದರೂ ಸಹ ಇದುವರೆಗೂ ಕಬ್ಬು ಕಟಾವು ಮಾಡಿಲ್ಲ. ಈ ಘಟನೆಗೆ ಬಣ್ಣಾರಿ ಅಮ್ಮನ ಕಾರ್ಖಾನೆಯವರೇ ನೇರ ಹೊಣೆ. ಜಮೀನಿನಲ್ಲಿದ್ದ ಹನಿ ನೀರಾವರಿ ಪೈಪ್, ಸ್ಟಾರ್ಟರ್, ಸ್ಪಿಂಕ್ಲರ್ ಪೈಪ್, ಮೋಟಾರ್ ಕೇಬಲ್ಗಳು ಸುಟ್ಟು ಹೋಗಿದ್ದು, ಸುಮಾರು 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ಕೊಡದಿದ್ದರೆ ಅಹೋರಾತ್ರಿ ಪ್ರತಿಭಟನೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ
ಕಾರ್ಖಾನೆಯವರ ನಿರ್ಲಕ್ಷ್ಯದಿಂದ ಲೊಕ್ಕನಹಳ್ಳಿ ಗ್ರಾಮದ ರೈತರ ಇಪ್ಪತ್ತಕ್ಕೂ ಹೆಚ್ಚು ಹೆಕ್ಟೇರ್ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದೆ. ಇದನ್ನು ಖಂಡಿಸಿದ ರೈತರು ಲೋಕನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಶಾಮಿಯಾನ ಹಾಕಿ ಪ್ರತಿಭಟಿಸುತ್ತಿದ್ದರು. ಈ ಹಿನ್ನೆಲೆ ನೂರಾರು ವಾಹನಗಳು ನಿಂತಲ್ಲೇ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಕೂಡ ಉಂಟಾಯಿತು. ಇದು ಅಂತರರಾಜ್ಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರಿಂದ ತುಂಬಾ ತೊಂದರೆ ಉಂಟಾಗಿತ್ತು. ತರಕಾರಿ ವಾಹನಗಳು, ಬಸ್ಗಳು, ದ್ವಿಚಕ್ರ ವಾಹನ, ಕಾರುಗಳು ಸುಮಾರು ಒಂದು ಕಿಲೋ ಮೀಟರ್ವರೆಗೂ ನಿಂತಿದ್ದು, ಇದರಿಂದ ಕೆಲ ಕಾಲ ವಾಹನ ಸವಾರರು ಪರದಾಡುವಂತಾಯಿತು.












Click it and Unblock the Notifications