ವಿದ್ಯುತ್ ತಂತಿ ತಗುಲಿ ಬೆಂಕಿ; ಕಟಾವಿಗೆ ಬಂದಿದ್ದ 8 ಎಕರೆ ಕಬ್ಬು ಭಸ್ಮ
ಬೆಳಗಾವಿ, ನವೆಂಬರ್ 12: ವಿದ್ಯುತ್ ತಂತಿ ತುಂಡಾಗಿ ಗದ್ದೆ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಟಾವಿಗೆ ಬಂದಿದ್ದ ಎಂಟು ಎಕರೆ ಕಬ್ಬು ನಾಶವಾಗಿರುವ ಘಟನೆ ಬೆಳಗಾವಿಯಲ್ಲಿ ಗುರುವಾರ ನಡೆದಿದೆ.
ಬೆಳಗಾವಿಯ ಬೈಲಹೊಂಗಲ ತಾಲೂಕಿನ ತಿಗಡಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಬೈಲಹೊಂಗಲದ ಸಂಪಗಾಂವ ಗ್ರಾಮದ ರೈತ ಸಂಗಪ್ಪ ಕಾದ್ರೊಳ್ಳಿ ಅವರಿಗೆ ಸೇರಿದ ಕಬ್ಬು ಬೆಳೆಯು ಸಂಪೂರ್ಣ ಅಗ್ನಿಗೆ ಆಹುತಿಯಾಗಿದೆ.
ಗದ್ದೆ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಅರೆಕ್ಷಣದಲ್ಲಿ ಇಡೀ ಜಮೀನನ್ನು ಬೆಂಕಿ ಆವರಿಸಿಕೊಂಡಿದೆ. ಇದರ ಪರಿಣಾಮ, ಕಟಾವಿಗೆ ಬಂದಿದ್ದ ಎಂಟು ಎಕರೆಯಲ್ಲಿನ ಕಬ್ಬಿನ ಬೆಳೆ ಸುಟ್ಟು ನಾಶವಾಗಿದೆ.

ತಕ್ಷಣವೇ ಬೆಂಕಿಯನ್ನು ನಂದಿಸಲು ಸ್ಥಳೀಯರೆಲ್ಲ ಸೇರಿ ಪ್ರಯತ್ನಿಸಿದರಾದರೂ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ನಂತರ ಬೈಲಹೊಂಗಲ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಇಷ್ಟು ಪ್ರಮಾಣದ ಕಬ್ಬಿನ ಬೆಳೆಯನ್ನು ಕಳೆದುಕೊಂಡಿರುವ ರೈತ ಸಂಗಪ್ಪ ಕಾದ್ರೋಳಿ ಅವರು ನಷ್ಟದಿಂದ ಕಂಗಾಲಾಗಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.











Click it and Unblock the Notifications