ಆರ್ಥಿಕ ಪ್ಯಾಕೇಜ್ ನಲ್ಲಿ ರೈತರಿಗೆ ಸಾಲ: ನಿಜವಾಗಿಯೂ ಅನ್ನದಾತನ ಕೈ ಸೇರುತ್ತಾ.?
ಬೆಂಗಳೂರು, ಮೇ 15: ಕೋವಿಡ್-19 ವಿರುದ್ಧ ಹೋರಾಡಲು ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಈ ವಿಶೇಷ ಆರ್ಥಿಕ ಪ್ಯಾಕೇಜ್ ನಲ್ಲಿ ಸಣ್ಣ ರೈತರಿಗೆ ಕೆಲವು ಕೊಡುಗೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ.
''ಅನ್ನದಾತರಿಗೆ ನಬಾರ್ಡ್ ಮೂಲಕ 30 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ತುರ್ತು ಸಾಲ ನೀಡಲಾಗುವುದು. ಇದರಿಂದ 3 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲ ಅಗಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಇಲ್ಲದ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು'' ಎಂದು ನಿನ್ನೆ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಅನೌನ್ಸ್ ಮಾಡಿದರು.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ದುಡಿಯುವ ಕೈಗಳಿಗೆ ಸಿಕ್ಕಿತೇ ಲಾಭ.?
ಆದರೆ, ''ಈ ಆರ್ಥಿಕ ಪ್ಯಾಕೇಜ್ ನಿಂದ ಅನ್ನದಾತರಿಗೆ ಲಾಭವಿಲ್ಲ. ರೈತರಿಗೆ ಕೇಂದ್ರ ಸರ್ಕಾರ ದ್ರೋಹ ಮಾಡಿದೆ'' ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ನ ಅಧ್ಯಕ್ಷ ಸಚಿನ್ ಮೀಗಾ ಕಟು ಟೀಕೆ ಮಾಡಿದ್ದಾರೆ.
ಅಸಲಿಗೆ, ಈಗಾಗಲೇ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3 ಲಕ್ಷದ ಒಳಗೆ ಶೂನ್ಯ ಬಡ್ಡಿಯ ಸಾಲ ಲಭ್ಯವಿದೆ. ಆದರೆ, ಈ 3 ಲಕ್ಷದ ಪೂರ್ಣ ಪ್ರಮಾಣದ ಸಾಲ ರೈತರಿಗಿನ್ನೂ ಲಭ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಸಾಲದ ರೂಪುರೇಷೆ. ಹೀಗಿರುವಾಗ, ನಿನ್ನೆ ಘೋಷಿಸಿದ ಆರ್ಥಿಕ ಪ್ಯಾಕೇಜ್ ನಲ್ಲಿ ಹೆಚ್ಚುವರಿ ಸಾಂಸ್ಥಿಕ ಸಾಲ ಬಡ್ಡಿರಹಿತವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರ ಕೈ ಸೇರುತ್ತಾ.? ಎಂಬ ಪ್ರಶ್ನೆ ಉದ್ಭವವಾಗಿದೆ.
''ಸಂಕಷ್ಟದಲ್ಲಿ ಇರುವ ರೈತರಿಗೆ ಸಾಲ ಕೊಡುವ ಬದಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಪರಿಹಾರ ಕೊಟ್ಟಿದ್ದರೆ, ರೈತರು ನಿಶ್ಚಿಂತರಾಗಿರುತ್ತಿದ್ದರು'' ಎಂದಿದ್ದಾರೆ ಸಚಿನ್ ಮೀಗಾ.
''ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜ್ ರೈತರಿಗೆ ಕಣ್ಣೀರು ಒರೆಸುವ ತಂತ್ರ ಅಷ್ಟೆ. ರೈತರಿಗಿಂತ ವಿದ್ಯುತ್ ಕಂಪನಿಗಳಿಗೆ ಹೆಚ್ಚು ಪ್ಯಾಕೇಜ್ ಘೋಷಿಸಿದ್ದಾರೆ. ಪ್ಯಾಕೇಜ್ ನೋಡಲು ಚೆಂದ ಕಾಣುತ್ತೆ ಅನ್ನೋದು ಬಿಟ್ಟರೆ, ಎಲ್ಲರ ಕೈಗೆ ಎಟಕುವುದು ದೂರದ ಸಂಗತಿ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸಚಿನ್ ಮೀಗಾ.