ಕಾಶ್ಮೀರದಲ್ಲಿ ಅವಧಿಗೆ ಮುನ್ನವೇ ಹಿಮಪಾತ; ಸೇಬು ಬೆಳೆಗಾರರ ಕಣ್ಣೀರು
ಶ್ರೀನಗರ್, ನವೆಂಬರ್ 6: "ಬೆಳೆ-ಬೆಲೆ ಯಾವುದೂ ನಮ್ಮ ಕೈಲಿ ಇರುವುದಿಲ್ಲ. ಶ್ರಮ ಹಾಕುವುದು ಮಾತ್ರ ನಿಶ್ಚಿತ. ಅದು ಹೆಚ್ಚಾಗಬಹುದೇ ವಿನಾ ಕಡಿಮೆ ಆಗಲ್ಲ" ಎನ್ನುವ ರೈತರ ಮಾತು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ನಿಜವೆನ್ನುವುದು ಪದೇಪದೇ ಸಾಬೀತಾಗುತ್ತಲೇ ಇರುತ್ತದೆ. ಇಲ್ಲಿರುವ ಉದಾಹರಣೆ ಕಾಶ್ಮೀರದ ಸೇಬು ಬೆಳೆಗಾರರದು.
ಕಳೆದ ಶನಿವಾರ ಸುರಿದ ಹಿಮಕ್ಕೆ ಅಲ್ಲಿನ ರೈತರು ಕಂಗಾಲಾಗಿ ಕುಳಿತಿದ್ದಾರೆ. ಅಲ್ಲಿ ಹಿಮ ಸುರಿಯುವುದು ಹೊಸದಲ್ಲ. ಆದರೆ ಈ ಬಾರಿ ಅವಧಿಗೂ ಮುನ್ನವೇ ಹೀಗಾಗಿದೆ. ಮಂಜಿನಡಿ ಸಿಲುಕಿರುವ ಸೇಬನ್ನು ಹೆಕ್ಕಿ ತೆಗೆಯುತ್ತಿರುವ ರೈತರೊಬ್ಬರ ವಿಡಿಯೋವೊಂದು ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.
ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ: 3 ಉಗ್ರರ ಹತ್ಯೆ
ಅಬ್ದುಲ್ ಘನಿ ಮೀರ್ ಎಂಬುವವರು ಶನಿವಾರಕ್ಕೆ ಒಂದು ದಿನ ಮೊದಲು ಕೂಡ ಬಹಳ ನೆಮ್ಮದಿಯಲ್ಲಿದ್ದರು. ಆದರೆ ಶನಿವಾರ ಹಿಮ ಸುರಿದಿದ್ದಕ್ಕೆ ಸೇಬು ಮರಗಳಿಗೆ ಹಾನಿಯಾಗಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳು ಬಂದ್ ಆಗಿವೆ. ನನಗೆ ಆಗಿರುವ ಹಾನಿ ಎಷ್ಟು ಎಂಬ ಅಂದಾಜು ಕೂಡ ನನಗಿಲ್ಲ. ಕನಿಷ್ಠ ಹತ್ತು ಲಕ್ಷ ನಷ್ಟವಾಗಿರಬಹುದು. ನಾವು ಕಷ್ಟಪಟ್ಟು ಬೆಳೆದ ಬೆಳೆ ಹಿಮದ ಅಡಿ ಹೋಗಿದೆ ಎನ್ನುತ್ತಾರೆ.
ಶನಿವಾರ ಸುರಿದ ಹಿಮಕ್ಕೆ ಕಣಿವೆಯು ಕತ್ತಲಲ್ಲಿ ಮುಳುಗಿದೆ. ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರಿದ್ದು, ದೇಶದ ಇತರ ಭಾಗಗಳಿಂದ ಸಂಪರ್ಕ ಕಳೆದುಕೊಂಡಿದೆ. ಶ್ರೀನಗರ್ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನ ಹಾರಾಟ ನಡೆಸುತ್ತಿಲ್ಲ. ಶ್ರೀನಗರ್-ಜಮ್ಮು ಹೆದ್ದಾರಿ ಬಳಸಲು ಸಾಧ್ಯವಿಲ್ಲದಂಥ ಸ್ಥಿತಿ ತಲುಪಿದೆ.
ಮೂಲ ಸೌಕರ್ಯಗಳು ನಿಧಾನಕ್ಕೆ ಮಾಮೂಲಿ ಸ್ಥಿತಿಯಲ್ಲಿ ದೊರಕುತ್ತಿವೆ. ಆದರೆ ಸೇಬು ಬೆಳೆಗಾರರ ಸ್ಥಿತಿ ಮಾತ್ರ ಚಿಂತಾಜನಕವಾಗಿದೆ.