ನಕಲಿ ಬೀಜ, ಗೊಬ್ಬರ ಪೂರೈಕೆ; ಕೃಷಿ ಸಚಿವರ ಖಡಕ್ ಎಚ್ಚರಿಕೆ
ಬೆಂಗಳೂರು, ಜೂನ್ 28: "ರೈತರಿಗೆ ಯಾವುದೇ ಕಾರಣಕ್ಕೂ ನಕಲಿ ಬೀಜ, ನಕಲಿ ಗೊಬ್ಬರ ಪೂರೈಕೆಯಾಗಲೇಬಾರದು. ಇಲಿ ಹಿಡಿಯುವುದಕ್ಕಿಂತ ಹುಲಿಯನ್ನು ಹಿಡಿಯಬೇಕು. ನಕಲಿ ಜಾಲದ ಬುಡವನ್ನೇ ಕತ್ತರಿಸಿ ಹಾಕಬೇಕು" ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಕೃಷಿ ವಿಚಕ್ಷಣಾ ದಳ (ಜಾಗೃತ ಕೋಶ)ವನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಸಚಿವರು ಅಧಿಕಾರಿಗಳ ಸಭೆ ನಡೆಸಿದರು.
ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ. ಇಂಥಹ ಸಮಯದಲ್ಲಿ ರೈತರನ್ನು ವಂಚಿಸುವ ಕಾರ್ಯಗಳು ನಡೆಯುತ್ತವೆ. ಬಿತ್ತನೆ ಬೀಜ ವಂಚನೆಯನ್ನು ಮಾಡುವುದು ಮತ್ತು ಕಾಳ ಸಂತೆಯಲ್ಲಿ ಮಾರಾಟ ಮಾಡುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಇದರಿಂದಾಗಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿರುವ ಉತ್ತಮ ಬೆಳೆ ಬರದೇ ತಾವು ಮೋಸ ಹೋಗಿರುವುದು ತಿಳಿಯುತ್ತದೆ. ರೈತರಿಗೆ ಮೋಸವಾಗದಂತೆ ವಿಚಕ್ಷಣಾ ದಳ ಕಣ್ಣಿಡಬೇಕಿದೆ ಎಂದರು.
ಬಿತ್ತನೆ ಚುರುಕುಗೊಳ್ಳುತ್ತಿದ್ದು, ಕಾಳಸಂತೆ ಮಾರಾಟಗರರು ರೈತರಿಗೆ ಮೋಸ ಮಾಡಲೆಂದೇ ನಕಲಿ ಬೀಜ, ನಕಲಿ ಗೊಬ್ಬರ ಮಾರಾಟದ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಇಂಥವರ ಮೇಲೆ ಕೃಷಿ ವಿಚಕ್ಷಣಾ ದಳ ಹದ್ದಿನ ಕಣ್ಣು ಸದಾ ಜಾಗೃತಗೊಳಿಸಿರಬೇಕು ಎಂದು ತಿಳಿಸಿದರು.
ನಕಲಿಕೋರರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು
ರೈತರು ಮುಂಗಾರು ಮಳೆಯಿಂದಾಗಿ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ರೈತರು ಮೋಸ ಹೋಗದಂತೆ ತಡೆವು ನಿಟ್ಟಿನಲ್ಲಿ ಜಾಗೃತ ಕೋಶ ಸದಾ ಎಚ್ಚರಿಕೆಯಿಂದಿರಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವಂತಾಗದೇ ನಕಲಿ ಜಾಲದ ಮೂಲವನ್ನೇ ನಾಶಪಡಿಸಬೇಕು. ಬರೀ ಚಾರ್ಜ್ ಶೀಟ್ ಹಾಕಿ ಸುಮ್ಮನಾದರೆ ಸಾಲದು. ನಕಲಿಕೋರರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ನಕಲಿ ಕಂಪನಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ
ಯಾವುದೇ ಕಂಪನಿ ಅದು ಎಷ್ಟೇ ಹೆಸರು ಮಾಡಿರಲಿ, ಆ ಕಂಪೆನಿ ರೈತರಿಗೆ ಮಾರುವ ಉತ್ಪನ್ನ, ಬೀಜ, ಗೊಬ್ಬರ ಅಧಿಕೃತವಾಗಿರಲೇಬೇಕು. ಎಲ್ಲಾ ಉತ್ಪನ್ನಗಳ ಮಾರಾಟಕ್ಕೆ ಪರವಾನಿಗೆ ಹೊಂದಿರಲೇಬೇಕು. ಯಾವುದೋ ಒಂದಕ್ಕೆ ಪರವಾನಿಗೆ ಪಡೆದು ಅದರ ಹೆಸರಿನಲ್ಲಿ ಮತ್ತೊಂದು ಉತ್ಪನ್ನ ಮಾರಾಟ ಮಾಡಿದರಾಯಿತು ಎನ್ನುವುದನ್ನು ತಪ್ಪಿಸಬೇಕು.ಇಂತಹ ಕಂಪನಿಗಳು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ನೊಟೀಸ್ ನೀಡಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು.
ರೈತರು ಮೋಸ ಹೋಗುವ ಮುನ್ನ ತಡೆಯಿರಿ
ರೈತರಿಗೆ ನಿಗದಿತ ಸೂಚಿತ ಪ್ರದೇಶಗಳಲ್ಲಿ ಸೂಚಿಸಿದ ಕಂಪೆನಿ ಮಾರಾಟಗಾರರು ಮಾತ್ರ ಕೃಷಿ ಉತ್ಪನ್ನ, ಬೀಜ ಗೊಬ್ಬರ ಪರವಾನಿಗೆಯುತವಾಗಿ ಮಾರಾಟ ಮಾಡಬೇಕು. ರೈತರಿಗೆ ಇಂಥವರಿಂದ ಮೋಸವಾದ ಮೇಲೆ ಎಚ್ಚೆತ್ತುಕೊಂಡು ಪರಿಹಾರ ನೀಡುವುದಕ್ಕಿಂತ ಪ್ರಿವೆನ್ಷನ್ ಈಸ್ ದ್ಯಾನ್ ಕ್ಯೂರ್ ಎಂಬ ಮಾತಿನಂತೆ ರೈತರಿಗೆ ಅನ್ಯಾಯವಾಗುವ ಮೊದಲೇ ಕೃಷಿ ವಿಚಕ್ಷಣಾ ದಳ ಸನ್ನದ್ಧವಾಗಿರಬೇಕು ಎಂದರು.
ಜುಲೈ 5ಕ್ಕೆ ಮೈಸೂರಿನಲ್ಲಿ ನೂತನ ಕಚೇರಿ ಉದ್ಘಾಟನೆ
ಕೃಷಿ ವಿಚಕ್ಷಣಾ ದಳವನ್ನು ಇನ್ನಷ್ಟು ಬಲಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿಚಕ್ಷಣಾ ದಳದ ಕಚೇರಿಯನ್ನು ವಿಸ್ತರಿಸಲಾಗಿದ್ದು, ಹೊಸದಾಗಿ ಮೈಸೂರು ಹಾಗೂ ಕಲಬುರಗಿಯಲ್ಲಿ ಕೃಷಿ ವಿಚಕ್ಷಣಾ ದಳದ ನೂತನ ಕಚೇರಿಯನ್ನು ಆರಂಭಿಸಲಾಗುವುದು. ಮುಂದಿನ ಜುಲೈ 5ರಂದು ಮೈಸೂರಿನಲ್ಲಿ ಕೃಷಿ ವಿಚಕ್ಷಣಾ ದಳದ ನೂತನ ಕಚೇರಿ ಉದ್ಘಾಟನೆಗೊಳ್ಳಲಿದೆ ಎಂದು ಬಿ. ಸಿ. ಪಾಟೀಲ್ ಹೇಳಿದರು.
ಸಚಿವ ಬಿಸಿ ಪಾಟೀಲ್ ನಡೆಸಿದ ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತರಾದ ಶರತ್ ಪಿ., ವಿಚಕ್ಷಣಾ ದಳದ ಅನೂಪ್ ಸೇರಿಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.