ಸರ್ಕಾರ ನಮ್ಮನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ದೂರಿದ ಡಿಕೆಶಿ
ಕೋಲಾರ, ಏಪ್ರಿಲ್ 16: "ಕೆಲ ಶಾಸಕರ ಹೇಳಿಕೆಯಿಂದ ಕೋಮು ಸಂಘರ್ಷ ನಡೆಯುತ್ತಿದೆ. ಹಿಂದೆಂದೂ ಆಗದ ರೀತಿಯಲ್ಲಿ ಸಾಮಾಜಿಕ ಬಹಿಷ್ಕಾರ ನಡೆಯುತ್ತಿದೆ" ಎಂದು ಆರೋಪಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.
ಕೋಲಾರದ ಮಾಲೂರು ತಾಲೂಕಿನ ಕೊಮ್ಮನಹಳ್ಳಿಗೆ ಇಂದು ಭೇಟಿ ನೀಡಿದ್ದ ಸಂದರ್ಭ ಮಾತನಾಡಿದ ಡಿ.ಕೆ.ಶಿವಕುಮಾರ್, "ಬಿಜೆಪಿಯ ಶಾಸಕರು, ನಾಯಕರು ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದಾರೆ" ಎಂದು ಆರೋಪ ಮಾಡಿದ್ದಾರೆ. "ಬೆಂಗಳೂರಿನಲ್ಲಿ ತಪಾಸಣೆ ಸರಿಯಾಗಿ ನಡೆಯುತ್ತಿಲ್ಲ.
ಕೇವಲ ಪೇಪರ್ ನಲ್ಲಿ ಎಲ್ಲ ನಿಯಮಗಳೂ ಇವೆ. ಎಲ್ಲೆಲ್ಲಿ ರೆಡ್ ಅಲರ್ಟ್ ಘೋಷಿಸಿದ್ದೀರಿ ಅಲ್ಲಿ ಹೆಚ್ಚಿನ ತಪಾಸಣೆ ನಡೆಸಬೇಕು. ಅವೆಲ್ಲ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ತಜ್ಞರ ತಂಡ, ವೈದ್ಯರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ನಮ್ಮನ್ನು ರಾಜ್ಯ ಸರ್ಕಾರ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ಕೇವಲ ಬಿಜೆಪಿ ಪಕ್ಷಕ್ಕೆ ಬೆಂಬಲವಾಗಿರುವವರನ್ನು ಉಪಯೋಗಿಸಿಕೊಳ್ಳುತ್ತಿದ್ದೀರಿ" ಎಂದು ದೂರಿದ್ದಾರೆ.

ಇಂದು ಕೋಲಾರದ ಮಾಲೂರಿನ ರೈತರ ತೋಟಗಳಿಗೆ ಡಿಕೆಶಿ ಭೇಟಿ ನೀಡಿದ್ದು, ರೈತರ ಸಮಸ್ಯೆಗಳನ್ನು ಆಲಿಸಿದರು. ಬಾಳಿಗಾನಹಳ್ಳಿ ಹಾಗೂ ಓಜರ ಹಳ್ಳಿ ಗ್ರಾಮಕ್ಕೆ ಹೋಗಿ ಎಲೆ ಕೋಸು ಹಾಗೂ ಕ್ಯಾರೆಟ್ ಬೆಳೆಗಾರರ ಸಮಸ್ಯೆಯನ್ನು ಕೇಳಿದರು. ಡಿಕೆಶಿ ಜೊತೆ ಸ್ಥಳೀಯ ಶಾಸಕ ಕೆ.ವೈ ನಂಜೇಗೌಡ, ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಇದ್ದರು.












Click it and Unblock the Notifications