ದಾಳಿಂಬೆ ಬೆಳೆಗೆ ತಪ್ಪದ ರೋಗ ಬಾಧೆ: ಲಿಂಗಸೂಗೂರು ತಾಲೂಕಿನ ರೈತರು ಕಂಗಾಲು
ರಾಯಚೂರು, ಡಿಸೆಂಬರ್, 30: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದ್ಗಲ್ನಲ್ಲಿ ದಾಳಿಂಬೆ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದ್ದು, ರೈತರು ಪರ್ಯಾಯ ಬೆಳೆಗಳನ್ನು ಬೆಳೆಯಲು ಚಿಂತನೆ ನಡೆಸಿದ್ದಾರೆ.
ದಾಳೆಂಬೆಯನ್ನು 2021-22ನೇ ಸಾಲಿನಲ್ಲಿ 288 ಹೆಕ್ಟೇರ್ ಬೆಳೆಯಲಾಗಿತ್ತು. 2022-23ನೇ ಸಾಲಿನಲ್ಲಿ 225 ಹೆಕ್ಟೇರ್ಗೆ ಇಳಿಕೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ದಾಳಿಂಬೆ ಬೆಳೆಗೆ ಹಾನಿಯಾಗುತ್ತಿದ್ದು, ರೋಗಗಳು ಕೂಡ ಹೆಚ್ಚಾಗಿ ಕಾಡುತ್ತಿವೆ. ಇದಕ್ಕೆ ಪರ್ಯಾಯವಾಗಿ ಪಪ್ಪಾಯಿ, ಮಾವು, ಕಬ್ಬು, ಸೂರ್ಯಕಾಂತಿ, ಶೇಂಗಾ ಬೆಳೆಗಳತ್ತ ರೈತರು ಚಿತ್ತ ನೆಟ್ಟಿದ್ದಾರೆ. ದುಂಡಾಣು ಅಂಗಮಾರಿ (ಚುಕ್ಕಿ) ರೋಗವು ಅನೇಕ ವರ್ಷಗಳಿಂದ ದಾಳಿಂಬೆ ಬೆಳೆ ಬೇಸಾಯ ಮಾಡುತ್ತಿರುವವನ್ನು ಕಂಗಾಲಾಗುವಂತೆ ಮಾಡಿದೆ. ದಾಳಿಂಬೆ ಬೆಳೆಯ ಕಾಂಡ, ಎಲೆ, ಹೂವು, ಕಾಯಿ ಕಟ್ಟುವ ವೇಳೆಯಲ್ಲೂ ಅಂಗಮಾರಿ ರೋಗವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಅಗತ್ಯ ಔಷಧಿ ಸಿಂಪಡಣೆಯ ಬಗ್ಗೆ ರೈತರಿಗೆ ಸೂಕ್ತ ಮಾರ್ಗದರ್ಶನವೂ ಇಲ್ಲ. ಕೆಲ ಕೀಟನಾಶಕ ಔಷಧ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ರೈತರ ನಿರೀಕ್ಷಿತ ಮಟ್ಟದ ಇಳುವರಿ ಸಾಧ್ಯವಿಲ್ಲದಂತಾಗಿದೆ.
ರೈತರಿಗೆ ಸಿಹಿ ಸುದ್ದಿ: ಕಬ್ಬು ಬೆಳೆಗಾರರಿಗೆ ಟನ್ಗೆ 100 ರೂ. ಮೊಲ್ಯಾಸಿಸ್ ಲಾಭ ನೀಡಲು ಸರ್ಕಾರ ಆದೇಶ
ಜಿಲ್ಲೆಯಲ್ಲಿ ದಾಳಿಂಬೆ ಬೆಳೆದ ರೈತರು ಕಂಗಾಲು
ಹಳೆಯ ಗಿಡ ತೆಗೆದು ಹೊಸದಾಗಿ ದಾಳಿಂಬೆ ನೆಟ್ಟರೂ ರೋಗ ಬಾಧೆ ತಪ್ಪಿಲ್ಲ. ತಾಲೂಕಿನ ಅಡವಿಬಾವಿ, ಯರದಿಹಾಳ, ಬನ್ನಿಗೋಳ, ಆಶಿಹಾಳ, ಛತ್ತರ, ಛತ್ತರ ತಾಂಡಾ, ವಿವಿಧ ಭಾಗದಲ್ಲಿ ಹೆಚ್ಚಾಗಿ ದಾಳಿಂಬೆ ಬೆಳೆಯಲಾಗುತ್ತಿದೆ. ಇದು ಒಣಹವೆಯಲ್ಲಿ ಉತ್ತಮವಾಗಿ ಇಳುವರಿ ನೀಡುವ ಬೆಳೆಯಾಗಿದೆ. ಆದರೆ, ಈ ಭಾಗದಲ್ಲಿ ಇತ್ತೀಚೆಗೆ ಹೆಚ್ಚಿನ ಮಳೆಯಾಗುತ್ತಿರುವುದು ದಾಳಿಂಬೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಒಂದು ದಾಳಿಂಬೆ ತೋಟ ಮಾಡಿದ ನಂತರ ಕನಿಷ್ಠ ಅಂದರೆ 20 ವರ್ಷಗಳ ಕಾಲ ಅದು ಹಾಗೆ ಇರಲಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ನಾಲ್ಕೈದು ವರ್ಷಕ್ಕೆ ಗಿಡಗಳನ್ನು ತೆಗೆದು, ಮತ್ತೆ ಹೊಸದಾಗಿ ಗಿಡಗಳನ್ನು ನೆಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭೂಮಿಯ ಫಲವತ್ತತೆ ನಾಶ
ಅತಿಯಾದ ರಾಸಾಯನಿಕಗಳ ಬಳಕೆಯಿಂದ ಭೂಮಿಯ ಫಲವತ್ತತೆಯೂ ನಾಶವಾಗಿದೆ. ವರ್ಷಪೂರ್ತಿ ಫಸಲು ನೀಡುವ ಬೆಳೆಯನ್ನು ರೈತರು ಕೈ ಬಿಡುತ್ತಿದ್ದಾರೆ. ದಾಳಿಂಬೆ ಇತರೆ ಹಣ್ಣಿನ ಬೆಳೆಗಳಂತಲ್ಲ. ಇದಕ್ಕೆ ಪ್ರತಿ ತಿಂಗಳು ಗೊಬ್ಬರ ನೀಡಬೇಕು. ಹಂತ ಹಂತವಾಗಿ ಔಷಧಿ ಸಿಂಪಡಣೆ ಮಾಡಬೇಕು.
ಹವಾಮಾನ ವೈಪರೀತ್ಯದಿಂದ ಬೆಳೆಗಳಿಗೆ ಹಾನಿ
ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕು. ಇಳುವರಿ ಬರುವವರೆಗೂ ಜೋಪಾನವಾಗಿ ಕಾಪಾಡಿಕೊಂಡು ಬರಬೇಕು. ದಾಳಿಂಬೆ ತುಂಬಾ ಸೂಕ್ಷ್ಮವಾದ ಬೆಳೆಯಾಗಿದೆ. ಹೆಚ್ಚಿನ ಮಳೆಯಾದರೆ, ಇಳುವರಿ ಸರಿಯಾಗಿ ಬರುವುದಿಲ್ಲ. ಇತ್ತೀಚೆಗೆ ರೋಗಗಳು ಜಾಸ್ತಿಯಾಗಿದ್ದು, ಹವಾಮಾನ ವೈಪರೀತ್ಯ ಉಂಟಾಗಿ ಬೆಳೆ ಹಾನಿಯಾಗುತ್ತಿದೆ. ಇದರಿಂದ ದಾಳಿಂಬೆ ಬೆಳೆಗಾರರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.
ಮಾರುಕಟ್ಟೆಯಲ್ಲಿಯೂ ಸಿಗದ ಉತ್ತಮ ಬೆಲೆ
ಚುಕ್ಕಿ ರೋಗದಿಂದ ಬಣ್ಣ ಮತ್ತು ಕಳೆ ಹಾಳಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ. ಕೆಲವೊಮ್ಮೆ ಗುಣಮಟ್ಟದ ಬೆಳೆ ಬಂದಿದ್ದರೂ, ಸರಿಯಾದ ಬೆಲೆಯೂ ಸಿಗುವುದಿಲ್ಲ. ಅರ್ಕ ಜೈವಿಕ ಮಿಶ್ರಣ ಗೊಬ್ಬರವು (ಎಎಂಸಿ) ದಾಳಿಂಬೆ ಬೆಳೆಯಲ್ಲಿ ಕಾಣಿಸಿಕೊಳ್ಳುವ ರೋಗಗಳ ಕಡಿವಾಣಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೆಚ್ಚಿನ ರೈತರು ಇದನ್ನೇ ಬಳಸುತ್ತಿದ್ದಾರೆ ಎಂದು ರೈತ ಭೀಮಪ್ಪ ಹೇಳಿದರು. ವರ್ಷದಿಂದ ವರ್ಷಕ್ಕೆ ದಾಳಿಂಬೆ ಬೆಳೆಯ ವಿಸ್ತೀರ್ಣ ಕುಸಿಯುತ್ತಿದೆ. ಬೆಳೆಗೆ ರೋಗದ ಭೀತಿಯಿಂದ ಈ ವರ್ಷ ದಾಳಿಂಬೆ ಬೆಳೆಯುವವರ ಸಂಖ್ಯೆ ಕಡಿಮೆ ಆಗಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಸುರೇಶ್ ಕುಮಾರ್ ಹೇಳಿದರು.