“ಡಿಜಿಟಲ್ ಕೃಷಿ”; ಕೇಂದ್ರ ಕೃಷಿ ಸಚಿವಾಲಯ ಮತ್ತು ಮೈಕ್ರೋಸಾಫ್ಟ್ ನಡುವೆ ಒಪ್ಪಂದ
ಕೇಂದ್ರ ಕೃಷಿ ಸಚಿವಾಲಯವು ಮೈಕ್ರೋಸಾಫ್ಟ್ ಕಂಪನಿಯೊಂದಿಗೆ ಮೊನ್ನೆಯಷ್ಟೇ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ದೇಶದ ಆರು ರಾಜ್ಯಗಳ ನೂರು ಹಳ್ಳಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ "ಡಿಜಿಟಲ್ ಕೃಷಿ"ಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಯೋಜನೆ ಇದಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಕೃಷಿ ಕ್ಷೇತ್ರದಲ್ಲಿ ವಿನೂತನ ತಂತ್ರಜ್ಞಾನಗಳಿಗೆ ಹೆಚ್ಚು ಒತ್ತುಕೊಡುತ್ತಿರುವುದಾಗಿ ತಿಳಿಸಿರುವ ಸಚಿವರು, ರೈತರು ಇದರಿಂದ ಹೆಚ್ಚಿನ ಆದಾಯ ಪಡೆಯುವಂತಾಗಲಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಹೊಸ ಪೀಳಿಗೆಯ ಯುವಕರೂ ಕೂಡಾ ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳುವವರಿದ್ದಾರೆ ಎಂಬುದು ಅವರ ನಿರೀಕ್ಷೆಯಾಗಿದೆ.
ನೇರ ಫಲಾನುಭವಿ ಖಾತೆಗೆ ಹಣ ವರ್ಗಾವಣೆ
ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಸರ್ಕಾರದ ಅನೇಕ ಯೋಜನೆಗಳ ಸವಲತ್ತುಗಳನ್ನು ಫಲಾನುಭವಿಗಳ ಅಕೌಂಟಿಗೆ ನೇರವಾಗಿ ತಲುಪಿಸುವ ಕೆಲಸ ನಡೆಯುತ್ತಿದೆ. ಅದೇ ರೀತಿ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೂ ನೇರವಾಗಿ ತಲುಪಿಸುವ ಯೋಚನೆ ಆದ್ಯತೆಯಲ್ಲಿದೆ. ಹಿಂದೆ ಈ ಬಗ್ಗೆ ಕೆಲಸ ನಡೆದಿತ್ತಾದರೂ ಊರ್ಜಿತವಾಗದ್ದಕ್ಕೆ ಕಾರಣಗಳನ್ನು ಹೇಳುವುದು ಕೊಂಚ ಕಷ್ಟದ ಕೆಲಸ.
ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡಿದ್ರೆ ಕಠಿಣ ಕ್ರಮ
ಇದೀಗ ಪ್ರಧಾನಮಂತ್ರಿ ಅವರ ಕಾಳಜಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಬರುವ ಎಲ್ಲರ ಡಾಟಾ ಸರ್ಕಾರದ ಬಳಿ ಇದೆ. ಇದನ್ನು ಬಳಸಿಕೊಂಡು ಫಲಾನುಭವಿಗಳಿಗೆ ತಲುಪಬೇಕಾದ ಹಣವನ್ನು(ಸಂಭಾವನೆ-ಕೂಲಿ) ನೇರ ಅವರ ಖಾತೆಗಳಿಗೆ ಕಳುಹಿಸಬಹುದಾಗಿದೆ. ಇದೀಗ ದೇಶದಲ್ಲಿ 12 ಕೋಟಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯ ಕಾರ್ಡ್ ಉಳ್ಳವರಾಗಿದ್ದಾರೆ. ಇದರಲ್ಲಿ 7 ಕೋಟಿ ಮಂದಿ ಕೆಲಸಕ್ಕಾಗಿ ಕೇಳಿಕೊಂಡು ಬರುವವರಿದ್ದಾರೆ ಎಂದು ಕೃಷಿ ಸಚಿವ ತೋಮರ್ ಹೇಳಿದ್ದಾರೆ.
ಕೃಷಿ ಆರ್ಥಿಕತೆ ಈ ದೇಶದ ಬೆನ್ನೆಲುಬು
ಮುಂದುವರೆದು ಮಾತನಾಡಿದ ಅವರು "ಕೃಷಿ ಆರ್ಥಿಕತೆ ಈ ದೇಶದ ಬೆನ್ನೆಲುಬು'. ಕೊರೊನಾದಂತಹ ಸಾಂಕ್ರಾಮಿಕದ ನಡುವೆಯೂ ಕೃಷಿ ಕ್ಷೇತ್ರವು ಸಕಾರಾತ್ಮಕವಾದ ಕೊಡುಗೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಆಗುವ ಎಲ್ಲಾ ನಷ್ಟವೂ ದೇಶಕ್ಕಾಗುವ ನಷ್ಟ, ಹಾಗಾಗಿ ಪ್ರಧಾನಮಂತ್ರಿ ಅವರು ಕೃಷಿ ಕ್ಷೇತ್ರದ ಚಟುವಟಿಕೆಗಳನ್ನು ಆದ್ಯತೆಯ ಮೇಲೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಯೋಜನೆಗಳನ್ನು ಒಂದಾದ ಮೇಲೊಂದರಂತೆ ಆದ್ಯತೆಯ ಮೇಲೆ ತೆಗೆದುಕೊಂಡು ಸಣ್ಣ ರೈತರಿಗೆ ಅನುಕೂಲ ಮಾಡುವ ಕೆಲಸಕ್ಕೆ ಒತ್ತು ನೀಡಲಾಗುವುದೆಂದೂ ಹೇಳಿದರು. ಈ ಕೆಲಸಕ್ಕಾಗಿ ಮೈಕ್ರೋಸಾಫ್ಟ್ ಮುಂದೆ ಬಂದಿದೆ. ಕಂಪನಿಯ ಸಹಯೋಗದೊಂದಿಗೆ ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ರಾಜಸ್ಥಾನ ಮತ್ತು ಆಂಧ್ರಪ್ರದೇಶದ ಒಟ್ಟು ಹತ್ತು ಜಿಲ್ಲೆಗಳ ನೂರು ಹಳ್ಳಿಗಳಲ್ಲಿ ರೈತರೊಂದಿಗೆ ತಂತ್ರಜ್ಞಾನದ ಸಂಪರ್ಕ ಏರ್ಪಡಿಸಿ ಸುಸಜ್ಜಿತ ಕೃಷಿ ಮಾಡಲು ನೆರವು ನೀಡುವುದರ ಜೊತೆಗೆ ಕೊಯ್ಲೋತ್ತರ ನಿರ್ವಹಣೆ ಹಾಗೂ ಸರಬರಾಜುವಿನಲ್ಲಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.
ರೈತರ ಆದಾಯವನ್ನು ದ್ವಿಗುಣ
ಈ ಯೋಜನೆಗೆ ಸ್ಥಳೀಯ ಭಾಗಿದಾರರಾಗಿ ಕ್ರಾಪ್ ಡಾಟಾ ಸಂಸ್ಥೆಯೂ ಇದೆ. ಈ ಪ್ರಾಯೋಗಿಕ ಯೋಜನೆಯು ಒಂದು ವರ್ಷದ ಅವಧಿಯವರೆಗೆ ಜಾರಿಯಲ್ಲಿರುತ್ತದೆ. ಯೋಜನೆಯ ಅಂಗವಾಗಿ ಹಳ್ಳಿಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಬೇಕಾದ ಹೊಸ ಹೊಸ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು. ಯೋಜನೆಯಿಂದ ಕೃಷಿ ಒಳಸುರಿಗಳ ಬೆಲೆಯೂ ಕಡಿಮೆ ಆಗಲಿದೆ ಎಂದೂ ಪ್ರಕಟಣೆ ತಿಳಿಸಿದೆ. ದೇಶದಲ್ಲಿ ಡಿಜಿಟಲ್ ಕೃಷಿಯನ್ನು ಪ್ರೋತ್ಸಾಹಿಸಲು ಸರ್ಕಾರ ಹಾಗೂ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಇನ್ನೂ ಹೆಚ್ಚಿನ ಪ್ರಾಯೋಗಿಕ ಯೋಜನೆಗಳನ್ನು ಮಾಡುವ ಉದ್ದೇಶವಿದೆ ಎಂದೂ ಹೇಳಿದ್ದಾರೆ.
ರೈತರಿಗೆ ಸಲ್ಲಬೇಕಾದ ಆದಾಯ ತಲುಪಬೇಕು
ರೈತರಿಗೆ ಸಲ್ಲಬೇಕಾದ ಆದಾಯವನ್ನು ಅವರಿಗೆ ತಲುಪಿಸಲು ಅನೇಕ ಹೊಸ ಯೋಜನೆಗಳನ್ನು ಚಿಂತಿಸಲಾಗಿದೆ. ಹೊಸ ಯೋಜನೆಗಳಲ್ಲಿ ಪ್ರಮುಖವಾಗಿ "ದೇಶದ ರೈತರ ಡಾಟಾ ಬೇಸ್ ಆಧಾರದ ಮೇಲೆ -ಅಗ್ರಿ ಫಂಡ್ಸ್" ಕ್ರಿಯೇಟ್ ಮಾಡುವುದೊಂದು. ಸರ್ಕಾರವು ರೈತರ ಭೂಮಿ ಪತ್ರಗಳ ಆಧಾರದ ಮೇಲೆ ಡೇಟಾ ಬೇಸ್ ಅನ್ನು ಮಾಡುತ್ತಿದೆ. ಪಿಎಂ ಕಿಸಾನ್, ಮಣ್ಣು ಆರೋಗ್ಯ ಕಾರ್ಡ್, ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯ ಡಾಟಾ ಇಟ್ಟುಕೊಂಡು ಸಮಗ್ರವಾದ ಡಾಟಾ ಬೇಸ್ ರೂಪಿಸಲಾಗುತ್ತಿದೆ. ಆ ಕೆಲಸ ಭರದಿಂದ ಸಾಗುತ್ತಿದೆ ಎಂದೂ ಸಚಿವರು ಹೇಳಿದರು.
ಈ ಒಪ್ಪಂದದ ಬಗ್ಗೆ ಒಳನೋಟ ಮುಂದಿನ ಕಂತಿನಲ್ಲಿ ನಿರೀಕ್ಷಿಸಿ...