ಕರ್ನಾಟಕದಲ್ಲಿ ಸ್ಟ್ರಾಬೆರಿ ಬೆಳೆದರೆ 10 ಲಕ್ಷ ರೂಪಾಯಿ ಆದಾಯ!
ಧಾರವಾಡ: ಡಿಸೆಂಬರ್.25: ಮನಸ್ಸು ಮಾಡಿದರೆ ಯಾವುದು ಅಸಾಧ್ಯ ಅಲ್ಲಾ. ಈ ಮಾತನ್ನು ಧಾರವಾಡ ಜಿಲ್ಲೆಯ ರೈತ ಸಾಬೀತು ಮಾಡಿದ್ದಾನೆ. ಯಾವ ರೈತರೂ ಉಹಿಸದ ರೀತಿಯಲ್ಲಿ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾನೆ.
ಇಡೀ ರಾಜ್ಯದಲ್ಲಿ ಮೊದಲ ಪ್ರಯತ್ನ ನಡೆಸಿ, ಕೈ ತುಂಬು ಆದಾಯ ಗಳಿಸುತ್ತಿದ್ದಾರೆ ಈ ಅನ್ನದಾತ. ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಟ್ರಾಬೆರಿ ಹಣ್ಣು ಬೆಳೆದು ಮಾದರಿ ರೈತನಾಗಿ ಹೊರ ಹೊಮ್ಮಿದ್ದಾರೆ. ಹೌದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲ್ಲಕುಂಬಿ ಗ್ರಾಮದಲ್ಲಿ ಶಶಿಧರ ಗೊರವರ ಎಂಬ ರೈತ 1 ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಬೆಳೆದಿದ್ದಾರೆ.
ಅಂದಹಾಗೆ ಶಶಿಧರ ಗೊರವರ ಮೂಲತ ಹಾವೇರಿ ಜಿಲ್ಲೆಯವರು. ಆದರೆ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲ್ಲಕುಂಬಿ ಗ್ರಾಮದಲ್ಲಿ 6 ಎಕರೆ ಜಮೀನು ಖರೀದಿ ಮಾಡಿದ್ದರು. ಈ ಪೈಕಿ 1 ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಬೆಳದಿದ್ದಾರೆ.
ಇನ್ನು, ಶಶಿಧರ ಗೊರವರ ಎಸ್ಎಸ್ಎಲ್ ಸಿ ವರಿಗೆ ಮಾತ್ರ ಓದಿದ್ದು, ಉದ್ಯೋಗ ಅರಿಸಿಕೊಂಡು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡಿದ್ದರು. ಆದರೂ, ಮನಸ್ಸು ಮಾತ್ರ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹಂಬಲಿಸುತ್ತಲೇ ಇತ್ತು. ಸ್ಟ್ರಾಬೆರಿ ವ್ಯವಸಾಯ ಕುರಿತು ಅಲ್ಪಸ್ವಲ್ಪ ಮಾಹಿತಿಯನ್ನು ಮಹಾಬಲೇಶ್ವರದ ಸ್ಟ್ರಾಬೆರಿ ಬೆಳೆದ ರೈತರಿಂದ ಪಡೆದು ಕೊಂಡಿದ್ದಾರೆ. ನಂತರ ರಾಜ್ಯದಲ್ಲಿ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಕ್ಯಾಲಿಪೋರ್ನಿಯಾದಿಂದ ಸ್ಟ್ರಾಬೆರಿ ಸಸಿ ಆಮದು
45 ರೂಪಾಯಿಗೆ ಒಂದರಂತೆ 700 ಸ್ಟ್ರಾಬೆರಿ ಸಸಿಗಳನ್ನು ಕ್ಯಾಲಿಫೋರ್ನಿಯಾದಿಂದ ತೆಗೆದುಕೊಂಡು ಬಂದು ಅವುಗಳಿಗೆ ಸರ್ಜರಿ ಮಾಡಿಸಿದ್ದಾರೆ. ನಂತರ 35 ಸಾವಿರ ಸಸಿಗಳನ್ನು ತಯಾರಿಸಿದ್ದಾರೆ. ಆ ಸಸಿಗಳನ್ನು ತಮ್ಮ 1 ಎಕರೆ ಜಮೀನಿನಲ್ಲಿ ನೆಟ್ಟು ಸ್ಟ್ರಾಬೆರಿ ಕೃಷಿ ಆರಂಭಿಸಲು ಮುಂದಾದರು. ಆದರೆ, ಜಮೀನಿನಲ್ಲಿ ಕ್ಯಾಲ್ಸಿಯಂ ಕಡಿಮೆ ಇರುವುದು ಮಣ್ಣು ಪರೀಕ್ಷೆ ವೇಳೆ ಗೊತ್ತಾಯಿತು. ಅದಾಗಿಯೂ ಎದೆಗುಂದದ ಶಶಿಧರ ಗೊರವರ ಕ್ಯಾಲ್ಸಿಯಂ ಹೆಚ್ಚಳಕ್ಕಾಗಿ ಇಸ್ರೇಲ್ ಮಾದರಿ ಕೃಷಿ ಅಳವಡಿಸಿಕೊಂಡು ಸಮೃದ್ಧವಾಗಿ ಸ್ಟ್ರಾಬೆರಿ ಬೆಳೆಸಿದ್ದಾರೆ.

ಧಾರವಾಡದಲ್ಲಿ ಬೆಳೆದ ಸ್ಟ್ರಾಬೆರಿ ಬೆಂಗಳೂರಿಗೆ ರಫ್ತು
ತಮ್ಮ ಜಮೀನಿನಲ್ಲಿ ಬೆಳೆದ ಸ್ಟ್ರಾಬೆರಿಯನ್ನು ಚಿಕ್ಕ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಹಾಕಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಗೆ ದಲ್ಲಾಳಿಗಳ ಸಹಾಯದಿಂದ ಕೆ.ಜಿ.ಗೆ 200 ರಿಂದ 250 ರೂಪಾಯಿ ಮಾರಾಟ ಮಾಡುತ್ತಿದ್ದಾರೆ. ಈಗಷ್ಟೇ ಇಳುವರಿ ಆರಂಭವಾಗಿದ್ದು ಹೆಚ್ಚು ಹೆಚ್ಚು ಸ್ಟ್ರಾಬೆರಿ ಬಂದರೆ ಬೇರೆ ಬೇರೆ ಮಾರುಕಟ್ಟೆ ಸರಬರಾಜು ಮಾಡುವ ಪ್ಲಾನ್ ಶಶಿಧರ ಗೊರವರ ಅವರದ್ದಾಗಿದೆ.

5 ಲಕ್ಷ ರೂಪಾಯಿ ಖರ್ಚಿನಲ್ಲಿ ಸ್ಟ್ರಾಬರಿ ಬೆಳೆದ ರೈತ
ಈ ಸ್ಟ್ರಾಬೆರಿ ಬೆಳೆಯು ಚಳಿಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. 45 ದಿನಗಳಿಗೆ ಸ್ಟ್ರಾಬೆರಿಯ ಫಸಲು ಬರುತ್ತದೆ. ಇನ್ನು, ಒಂದು ಎಕರೆ ಸ್ಟ್ರಾಬೆರಿ ಬೆಳೆಯಲು 4 ರಿಂದ 5 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಆದರೆ, ಇದರಿಂದ 9 ರಿಂದ 10 ಲಕ್ಷ ರೂಪಾಯಿವರಿಗೆ ಲಾಭ ಪಡೆಯಬಹುದು ಅಂತಾರೆ ಶಶಿಧರ ಗೊರವರ ಅವರ ಮಾತು.

ನಕ್ಕವರ ಎದುರು ಮಾದರಿ ರೈತರಾದ ಶಶಿಧರ
ಮೊದಲು ಶಶಿಧರ ಗೊರವರ ತಮ್ಮ ಜಮೀನಿನಲ್ಲಿ ಸ್ಟ್ರಾಬೆರಿ ಬೆಳೆಯಲು ಮುಂದಾದಾಗ ಅಕ್ಕಪಕ್ಕದ ರೈತರು ನಕ್ಕಿದರಂತೆ. ಈ ಮಣ್ಣಿನಲ್ಲಿ ಸ್ಟ್ರಾಬೆರಿ ಬೆಳೆಯುತ್ತಿದ್ದಾನೆ. ಇಂಥ ಹುಚ್ಚು ಸಾಹಸ ಬೇಕಾ ಅಂತಾ ಎಂದು ವ್ಯಂಗ್ಯವಾಡಿದ್ದರಂತೆ. ಆದರೆ ಇಂದು ನಕ್ಕವರ ಎದುರಿನಲ್ಲೇ ಶಶಿಧರ ಗೊರವರ ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.












Click it and Unblock the Notifications