ಬ್ಯಾರಿಕೇಡ್, ಮೊಳೆ ಆಯ್ತು ಈಗ ಗಡಿಯಲ್ಲಿ ಬಲೆ ಹಾಕಿದ ದೆಹಲಿ ಪೊಲೀಸರು
ನವದೆಹಲಿ, ಫೆಬ್ರುವರಿ 03: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ದೆಹಲಿಯೊಳಗೆ ನುಗ್ಗದಂತೆ ತಡೆಯಲು ರಸ್ತೆಗಳಲ್ಲಿ ಸಿಮೆಂಟ್ ಬ್ಯಾರಿಕೇಡ್ ಗಳನ್ನು, ಕಬ್ಬಿಣದ ಸರಳುಗಳನ್ನು ಹಾಗೂ ನೆಲದಲ್ಲಿ ಮೊಳೆಗಳನ್ನು ಹಾಕಿದ ನಂತರ ಇದೀಗ ದೆಹಲಿ ಪೊಲೀಸರು ದೊಡ್ಡ ದೊಡ್ಡ ಬಲೆಗಳನ್ನು ಅಳವಡಿಸಿದ್ದಾರೆ.
ಕಲ್ಲು ತೂರಾಟದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ರೈತರು ಪ್ರತಿಭಟನೆ ನಡೆಸುತ್ತಿರುವ ಟಿಕ್ರಿ ಗಡಿಯಲ್ಲಿ ದೊಡ್ಡ ದೊಡ್ಡ ಬಲೆಗಳನ್ನು ಹಾಕಿದ್ದಾರೆ. ಜನವರಿ 26ರಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ನಡೆದ ಗಲಭೆ ಮತ್ತೆ ಮರುಕಳಿಸದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಬಲೆಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈತ ಚಳುವಳಿ: ಫೆಬ್ರವರಿ 6ರಂದು ರಾಜ್ಯಾದ್ಯಂತ ಹೆದ್ದಾರಿ ತಡೆ?
ಗೋಲ್ಫ್, ಟೆನಿಸ್ ಇನ್ನಿತರ ಕ್ರೀಡೆಗಳಲ್ಲಿ ಬಾಲ್ ಗಳನ್ನು ತಡೆಯಲು ಈ ನೆಟ್ ಗಳನ್ನು ಬಳಸಲಾಗುತ್ತದೆ. ಆ ನೆಟ್ ಗಳನ್ನೇ ಇಲ್ಲಿ ಬಳಸಿದ್ದೇವೆ ಎಂದು ಹೇಳಿದ್ದಾರೆ.
ಇದರೊಂದಿಗೆ ಟಿಕ್ರಿ, ಸಿಂಘು ಹಾಗೂ ಘಾಜಿಪುರ ಗಡಿಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಗಡಿ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಸಶಸ್ತ್ರ ಮೀಸಲು ಪಡೆ ಹಾಗೂ ವಿಶೇಷ ಗಲಭೆ ನಿಯಂತ್ರಣ ಪಡೆಯನ್ನೂ ಗಡಿಗಳಲ್ಲಿ ನಿಯೋಜಿಸಲಾಗಿದೆ. ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಲ್ಲಿ ಇಂಟರ್ ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.