ರೈತರ ಕುರಿತು ಸರ್ಕಾರಕ್ಕಿರುವ ಕಾಳಜಿ ಬಿಜೆಪಿಗಿಲ್ಲ: ಪರಮೇಶ್ವರ
ಬೆಂಗಳೂರು, ನವೆಂಬರ್ 19: ರೈತರ ಬಗ್ಗೆ ಸಮ್ಮಿಶ್ರ ಸರ್ಕಾರಕ್ಕಿರುವ ಕಾಳಜಿ ಬಿಜೆಪಿಗಿಲ್ಲ, ಬಿಜೆಪಿ ಆಡಳಿತ ಎಲ್ಲೆಲ್ಲಿದೆ ಅಲ್ಇ ರೈತರ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಗುಡುಗಿದ್ದಾರೆ.
ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ನಾವು ರೈತರ ಪರವಾಗಿದ್ದೇವೆ, ಅವರ ಪರವಾಗಿಯೇ ನಿರ್ಧಾರಗಳನ್ನು ಕೈಗೊಂಡಿದ್ದೇವೆ, ಆದರೆ ಬಿಜೆಪಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇದ್ದಂತಿ್ಲ ಅವರು ಕೇವಲ ಬಾಯಿ ಮಾತಿನಲ್ಲಿ ಕಾಳಜಿ ತೋರಿಸುತ್ತಾರೆ ಎಂದು ಹೇಳಿದ್ದಾರೆ.
ನಮ್ಮ ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿಯನ್ನು ಭೇಟಿ ಮಾಡಿ ತಿಳಿಸಿದ್ದರೂ ನಮಗೆ ಇನ್ನೂ ಯಾವ ಸ್ಪಂದನೆ ಸಿಕ್ಕಿಲ್ಲ. ಸಾಲಮನ್ನಾಕ್ಕೆ ನೆರವು ನೀಡುವುದಕ್ಕೂ ಕೇಂದ್ರ ಸ್ಪಂದಿಸಿಲ್ಲ. ನಮ್ಮನ್ನು ಟೀಕೆ ಮಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆಯಿಲ್ಲ ಎಂದರು.

ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಒಂದು ಟನ್ ಕಬ್ಬಿಗೆ 450 ರೂ. ಬೆಂಬಲ ಬೆಲೆ ನೀಡುವಂತೆ ಕ್ರಮ ಕೈಗೊಂಡಿದ್ದೆವು. ಬಿಜೆಪಿಯವರು ಏನೇ ಟೀಕೆ ಟಿಪ್ಪಣಿ ಮಾಡಿದರೂ ನಾವು ರೈತರ ಪರವಾಗಿದ್ದೇವೆ. ಹಾಗಾಗಿಯೇ ನಾನು 49 ಕೋಟಿ ರೂ. ಸಾಲಮನ್ನಾ ಮಾಡುವ ಬಹುದೊಡ್ಡ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದರು.
ರೈತರ ಪ್ರತಿಭಟನೆಯನ್ನು ನಾವು ತಡೆಯುವುದಿಲ್ಲ. ಕಾನೂನಿನಡಿ ಅವರಿಗೆ ಪ್ರತಿಭಟನೆ ಮಾಡಲು ಹಕ್ಕಿದೆ. ಆದರೆ, ಕಾನೂನು ಕೈಗೆತ್ತಿಕೊಂಡರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಸಿಎಂ ಎಚ್.ಡಿ.ಕುಮಾರಸ್ವಾಮಿ ನಾಳೆ ರೈತರ ಪ್ರತಿನಿಧಿಗಳನ್ನು ಕರೆದಿದ್ದಾರೆ. ನಾಳೆ ನಡೆಯಲಿರುವ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಪರಿಹಾರ ಒದಗಿಸಲಾಗುವುದು ಎಂದರು.












Click it and Unblock the Notifications