ಧಾರವಾಡ: ರೋಗಕ್ಕೆ ತುತ್ತಾದ ಬೆಳೆಗಳು- ಔಷಧಿ ಸಿಂಪಡಣೆಗೆ ಡ್ರೋಣ್ ಮೊರೆಹೋದ ರೈತರು
ಧಾರವಾಡ, ಆಗಸ್ಟ್, 20: ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ರೋಗಕ್ಕೆ ತುತ್ತಾಗಿವೆ. ಇದರ ನಡುವೆಯೇ ಜಮೀನುಗಳಲ್ಲಿ ಪೊದೆಗಳು ಬೆಳೆದು ನಿಂತಿವೆ. ಇದರಿಂದ ವಿಷ ಜಂತುಗಳ ಹಾವಳಿ ಹೆಚ್ಚಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ತುಂಬಾ ಕಷ್ಟವಾಗಿದೆ. ಜಮೀನುಗಳಲ್ಲಿ ಪೊದೆಗಳು ಹೆಚ್ಚಾದ ಬೆಳೆಗಳಿಗೆ ಔಷಧಿ ಸಿಂಪಡಿಸಲು ಒದ್ದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಡ್ರೋಣ್ ಮೊರೆ ಹೋಗಿದ್ದು, ಅದರಲ್ಲಿಯೇ ಔಷಧಿ ಸಿಂಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೃಷಿಗೆ ಸಾಲದ ಹರಿವು ಹೆಚ್ಚಿಸಲು ಅಲ್ಪಾವಧಿ ಸಾಲದ ಮೇಲಿನ ಶೇ.1.5ರಷ್ಟು ಬಡ್ಡಿ ಮನ್ನಾ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೆಲವು ಭಾಗದಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ಜಲಾವೃತವಾಗಿವೆ. ಮತ್ತೊಂದೆಡೆ ಅಲ್ಪಸ್ವಲ್ಪ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಅದರಲ್ಲೂ ಸೋಯಾಬಿನ್, ಉದ್ದು, ಹೆಸರು ಸೇರಿದಂರೆ ಇನ್ನಿತರ ಬೆಳೆಗಳು ಎದೆ ಎತ್ತರಕ್ಕೆ ಬೆಳೆದು ನಿಂತಿವೆ. ಜಮೀನುಗಳಲ್ಲಿ ಗಿಡಗಂಟಿಗಳು ಹೆಚ್ಚಾಗಿ ಆವರಿಸಿಕೊಂಡ ಕಾರಣ ಬೆಳೆಗಳು ಮತ್ತಷ್ಟು ನಾಶವಾಗುತ್ತಲೇ ಇವೆ. ಬೂದು ರೋಗ ಸೇರಿದಂತೆ ಇನ್ನಿತರ ರೋಗಬಾಧೆ ಹೆಚ್ಚಾಗುವ ಭಯ ರೈತರಿಗೆ ಕಾಡುತ್ತಿದೆ.
ಗಿಡಗಳು ಎತ್ತರಕ್ಕೆ ಬೆಳೆದಿರುವುದರಿಂದ ಕೀಟ ಬಾಧೆ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಲೂ ಸಾಧ್ಯವಾಗುತ್ತಿಲ್ಲ. ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಈ ಕಾರಣದಿಂದ ರೈತ ಬೆಳೆದ ಬೆಳೆ ಉಳಿಸಿಕೊಳ್ಳಲು ಡ್ರೋಣ್ ಬಳಕೆ ಮಾಡುತ್ತಿದ್ದಾನೆ. ಈ ಹಿಂದೆಲ್ಲಾ ಸೋಯಾಬಿನ್ ಗರಿಷ್ಠ 2 ರಿಂದ 2.5 ಅಡಿ ಬೆಳೆಯತ್ತಿದ್ದವೂ, ಇದೀಗ ಉದ್ದು 4-5 ಅಡಿಯಷ್ಟು ಬೆಳೆದು ನಿಂತಿವೆ. ಕಳೆದ ಹದಿನೈದು ದಿನಗಳ ಮಳೆಯಿಂದ ಬೆಳೆಗಳು ರೋಗಕ್ಕೆ ತುತ್ತಾಗಿವೆ. ವಿಷ ಜಂತುಗಳ ಹಾವಳಿಯಿಂದ ಕೃಷಿ ಕಾರ್ಮಿಕರು ಔಷಧಿ ಸಿಂಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲವಡೆ ರೈತರು ಹಾವು ತುಳಿದು ಪ್ರಾಣಾಪಾಯದಿಂದ ಪಾರಾದ ಘಟನೆಗಳೇ ಇದಕ್ಕೆ ಸಾಕ್ಷಿಯಾಗಿವೆ.
ಈ ಎಲ್ಲ ಘಟನೆಗಳು ರೈತರನ್ನು ಸಂದಿಗ್ಧತೆಗೆ ಸಿಲುಕಿಸಿವೆ. ಇದರ ಪರಿಣಾಮ ಧಾರವಾಡ ಜಿಲ್ಲೆಯಲ್ಲಿ ಅನಿವಾರ್ಯವಾಗಿ ಡ್ರೋಣ್ಗಳನ್ನು ಬಾಡಿಗೆ ಪಡೆದು ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದೀಗ ಡ್ರೋನ್ನಿಂದ ಔಷಧಿ ಸಿಂಪಡಿಸಲು ಪ್ರತಿ ಎಕರೆಗೆ 350 ರೂಪಾಯಿ ಬಾಡಿಗೆ ಪಡೆಯಲಾಗುತ್ತಿದೆ. ಆದರೆ ರೈತರ ಬೇಡಿಕೆಗೆ ತಕ್ಕಂತೆ ಡ್ರೋನ್ಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದಲೇ ರೈತರಿಗೆ ಡ್ರೋನ್ ಒದಗಿಸಿದರೇ ಅನುಕೂಲವಾಗುತ್ತಿತ್ತು ಎನ್ನುವುದು ರೈತರ ಅಭಿಪ್ರಾಯ ಆಗಿದೆ.
Recommended Video