ಮಧ್ಯವರ್ತಿಗಳು ಭತ್ತ ತಂದರೆ ಕ್ರಿಮಿನಲ್ ಮೊಕದ್ದಮೆ; ಡಿಸಿ ರೋಹಿಣಿ
ಮೈಸೂರು, ನವೆಂಬರ್ 13: 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ಆದೇಶಿಸಿದ್ದು, ಉತ್ತಮ ಗುಣಮಟ್ಟದ ಭತ್ತವನ್ನು ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಒಂದು ವೇಳೆ ಮಧ್ಯವರ್ತಿಗಳು, ಏಜೆಂಟರು ಭತ್ತ ಖರೀದಿ ಕೇಂದ್ರಗಳಿಗೆ ಭತ್ತವನ್ನು ತಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಬ್ಬಿಗೆ ನ್ಯಾಯಯುತ ಬೆಲೆಗೆ ಒತ್ತಾಯಿಸಿ ಮೈಸೂರಿನಲ್ಲಿ ನ.2ಕ್ಕೆ ಧರಣಿ
ಮೈಸೂರಿನಲ್ಲಿ ಖರೀದಿ ಕೇಂದ್ರಗಳು
ಈ ಸಂಬಂಧ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ಕೇಂದ್ರಗಳ ಮೂಲಕ ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಬೇಕು. ಭತ್ತ ಖರೀದಿಸಲು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿಯನ್ನು ಏಜೆನ್ಸಿಗಾಗಿ ನೇಮಿಸಿದ್ದು, ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ ಕನಿಷ್ಠ ಬೆಂಬಲ ಬೆಲೆ 1,868 ರೂ. ಹಾಗೂ ಗ್ರೇಡ್ ಎ ಭತ್ತಕ್ಕೆ 1,888 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ದಾವಣಗೆರೆ: ಒಂದು ಮಳೆ ರೈತರ ಬದುಕನ್ನೇ ಮೂರಾಬಟ್ಟೆ ಮಾಡಿದೆ
ಭತ್ತಕ್ಕೆ ಗರಿಷ್ಠ ಮಿತಿ
ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಭತ್ತ ಸರಾಸರಿ ಉತ್ತಮ ಗುಣಮಟ್ಟದ್ದಾಗಿರಬೇಕು. ಅದರ ಗರಿಷ್ಠ ಮಿತಿಯನ್ನು ನೀಡಲಾಗಿದೆ. ಅನ್ಯ ವಸ್ತುಗಳಾದ ಅಜೈವಿಕ ಶೇ.1.0, ಸಾವಾಂವ ಶೇ.1.0, ವಿರೂಪಗೊಂಡ ಧಾನ್ಯಗಳು ಶೇ.4.0, ಕುಗ್ಗಿದ ಮತ್ತು ಶ್ರವಣಿತ ಧಾನ್ಯಗಳು ಶೇ.3.0, ಕೆಳವರ್ಗದ ಮಿಶ್ರಣ ಶೇ.6.0, ತೇವಾಂಶವು ಗರಿಷ್ಠ ಶೇ.17.0ರಷ್ಟು ಇರಬೇಕು. ನೋಂದಾಯಿಸಿಕೊಂಡ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮಾತ್ರ ಗರಿಷ್ಠ 40 ಕ್ವಿಂಟಾಲ್ (ಪ್ರತಿ ಎಕರೆಗೆ 16 ಕ್ವಿಂಟಾಲ್ ನಂತೆ) ಭತ್ತವನ್ನು ಖರೀದಿಸಲಾಗುವುದು ಎಂದೂ ತಿಳಿಸಿದ್ದಾರೆ.
ಹೆಸರು ನೋಂದಣಿಗೆ ಸೂಚನೆ
ರೈತರು ಸರಬರಾಜು ಮಾಡುವ ಒಂದು ಕ್ವಿಂಟಾಲ್ ಸಾಮರ್ಥ್ಯದ ಚೀಲಕ್ಕೆ 6 ರೂ. ಪಾವತಿಸಲಾಗುವುದು. ಪ್ರತಿಯೊಬ್ಬ ರೈತರು ಬೆಂಬಲ ಬೆಲೆ ಯೋಜನೆಯಲ್ಲಿ ಭತ್ತ ಮಾರಾಟ ಮಾಡಲು ಕೃಷಿ ಇಲಾಖೆಯಿಂದ ನೀಡಲಾಗಿರುವ 'ಫ್ರೂಟ್' ಗುರುತಿನ ಚೀಟಿಯನ್ನು ಖರೀದಿ ಕೇಂದ್ರಗಳಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು.
ಭತ್ತದ ಮಾದರಿ ಕಡ್ಡಾಯ
ನೋಂದಣಿ ಮಾಡಿದ ರೈತರು ಇಲಾಖೆಯಿಂದ/ಖರೀದಿ ಏಜೆನ್ಸಿಯಿಂದ ಕಳುಹಿಸುವ ಎಸ್ಎಂಎಸ್ ಆಧಾರದ ಮೇಲೆ ಸಂಬಂಧಪಟ್ಟ ಅಕ್ಕಿ ಗಿರಣಿಗಳಿಗೆ ಭತ್ತದ ಮಾದರಿಯನ್ನು (ಸ್ಯಾಂಪಲ್) ಕಡ್ಡಾಯವಾಗಿ ನೀಡತಕ್ಕದ್ದು ಎಂದು ಡಿಸಿ ಸೂಚಿಸಿದ್ದಾರೆ.