ತೊಗರಿ, ಹತ್ತಿ ಬೆಳೆಯುವ ರೈತರಿಗೆ ಕೆಲವು ಸಲಹೆಗಳು
ಕಲಬುರಗಿ,ಸೆಪ್ಟೆಂಬರ್ 11 : ಕಲಬುರಗಿ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ಕಳೆದ ಎರಡು ದಿನಗಳಲ್ಲಿ ಅತಿ ಮಳೆಯಿಂದ ಹಲವು ಹೊಲಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ತೊಗರಿ ಮತ್ತು ಹತ್ತಿ ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದು, ಈ ಬಗ್ಗೆ ಕೃಷಿ ನಿರ್ದೇಶಕರು ಕೆಲ ಸಲಹೆಗಳನ್ನು ನೀಡಿದ್ದಾರೆ.
ತೊಗರಿ ಮತ್ತು ಹತ್ತಿ ಬೆಳೆಯ ಹೊಲಗಳಲ್ಲಿ ಅತೀ ತೇವಾಂಶದಿಂದ ರೈತರು ಈ ಕೆಳಕಂಡಂತೆ ಬೆಳೆವಾರು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್ ಮೊಕಾಶಿ ತಿಳಿಸಿದ್ದಾರೆ.

ತೊಗರಿ ಬೆಳೆಗೆ ಪೈಟೊಪ್ತೆರಾ ಬ್ಲೈಟ, ಸೊರಗು ರೋಗ, ಬೇರು ಕೊಳೆ, ಕಾಂಡ ಕೊಳೆಯುವ ರೋಗಕ್ಕೆ ಸಂಬಂಧಿಸಿದಂತೆ ಗಿಡದ ಕೆಳಭಾಗದಲ್ಲಿ ಕಾಂಡದ ಮೇಲೆ ಕಂದು ಬಣ್ಣದ ಮಚ್ಚೆಗಳು ಹಾಗೂ ಗಂಟುಗಳು ಕಾಣಿಸಿಕೊಂಡಿದ್ದು, ನಂತರ ಗಿಡಗಳು ಮುರಿದು ಬೀಳುತ್ತದೆ.
ಒಂದು ವೇಳೆ ತೊಗರಿಯ ಬೆಳವಣಿಗೆಯ ಹಂತದಲ್ಲಿದ್ದಾಗ, ಮೋಡ ಮುಸುಕಿದ ವಾತಾವರಣ ಹಾಗೂ ಸತತವಾಗಿ ತುಂತುರ ಮಳೆ ಬಂದು ಹೊಲದಲ್ಲಿ ನೀರು ನಿಂತರೆ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ.
ಇದು ಮಣ್ಣು ಜನ್ಯ ರೋಗವಾಗಿದ್ದು, ನೀರು ನಿಲ್ಲುವ ಪ್ರದೇಶದಲ್ಲಿ ರೋಗದ ಭಾದೆ ಹೆಚ್ಚಾಗಿ ಕಂಡುಬರುತ್ತದೆ. ರೈತರು ಹೊಲದಲ್ಲಿ ನಿಂತ ನೀರನ್ನು ಬಸೆದು ಹೊಗುವಂತೆ ಮಾಡಬೇಕು ಹಾಗೂ ಪ್ರತಿ ಲೀಟರ ನೀರಿಗೆ 2 ಗ್ರಾಂ ಮಾಂಕೊಜೆಬ ಅಥವಾ ಮೆಟಾಲಾಕ್ಸಿಲ್ ಬೆರೆಸಿ ಗಿಡದ ಕಾಂಡದ ಮೇಲೆ ಸಿಂಪಡಿಸಬೇಕು ಮತ್ತು ಬುಡದ ಮಣ್ಣನ್ನು ನೆನೆಸಬೇಕು.
ಹತ್ತಿ ಬೆಳೆಗೆ ಸೊರಗು ರೋಗ, ಬೇರು ಕೊಳೆ, ಕಾಂಡ ಕೊಳೆಯುವ ರೋಗ, ಗಿಡ ಬಾಡುವಿಕೆ ಸಂಬಂಧಿಸಿದಂತೆ ತಗ್ಗು ಪ್ರದೇಶದ ಹೊಲದಲ್ಲಿ ನೀರು ನಿಂತಲ್ಲಿ ಹಾಗೂ ಅತಿ ತೇವಾಂಶದಿಂದ ಬೇರು ಕೊಳೆತು ಗಿಡ ಬಾಡುತ್ತದೆ.
ಹೊಲದಲ್ಲಿ ನಿಂತ ನೀರನ್ನು ಬಸೆದು ಹೊಗುವಂತೆ ಮಾಡಬೇಕು. ತೇವಾಂಶವಿದ್ದಲ್ಲಿ ಪ್ರತಿ ಲೀಟರ ನೀರಿಗೆ 3 ಗ್ರಾಂ ತಾಮ್ರದ ಆಕ್ಸೈಕ್ಲೋರೈಡ ಸಿಂಪರಣೆ ಮಾಡುವದು. ತೇವಾಂಶವಿರದಿದ್ದಲ್ಲಿ 2 ಗ್ರಾಂ ಕಾರ್ಬನಡೈಜಿಮ ಬೆರೆಸಿ ಗಿಡದ ಕಾಂಡದ ಮೇಲೆ ಸಿಂಪಡಿಸಬೇಕು ಮತ್ತು ಬುಡದ ಮಣ್ನನ್ನು ನೆನೆಸಬೇಕು.
ರೈತರಿಗೆ ಅವಶ್ಯವಿರುವ ಬಿತ್ತನೇ ಬೀಜಗಳು, ಜೈವಿಕ ಗೊಬ್ಬರಗಳು, ಲಘು ಪೋಷಕಾಂಶಗಳು, ಜೈವಿಕ ಪಿಡೆನಾಶಕಗಳು, ಕೀಟನಾಶಕಗಳು ಹತ್ತಿರದ ಸಂಪರ್ಕ ಕೇಂದ್ರಗಳಲ್ಲಿ ರೈತರು ರಿಯಾಯತಿ ದರದಲ್ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.












Click it and Unblock the Notifications