"ರೈತರ ಮೇಲೆ ಇಂಥ ಪದಗಳನ್ನು ಬಳಸಿ ಪಾಪ ಮಾಡುತ್ತಿದ್ದೀರ"
ನವದೆಹಲಿ, ಡಿಸೆಂಬರ್ 28: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ, ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ವಾದ್ರಾದಲ್ಲಿ ಮಾತನಾಡಿದ ಅವರು, "ಪ್ರತಿಭಟನಾನಿರತ ರೈತರ ಮೇಲೆ ಸರ್ಕಾರ ಬಳಸುತ್ತಿರುವ ಪದಗಳು ಅವರಿಗೇ ಪಾಪ ತರುವಂಥವು. ರೈತರಿಗೆ ಕೇಂದ್ರ ಸರ್ಕಾರ ಉತ್ತರ ನೀಡಲೇಬೇಕು" ಎಂದು ಆಗ್ರಹಿಸಿದ್ದಾರೆ.
ಈಚೆಗೆ ಪ್ರತಿಭಟನಾ ನಿರತ ರೈತರ ಮೇಲೆ ಹಿರಿಯ ಮುಖಂಡರು ವಾಗ್ದಾಳಿ ನಡೆಸಿದ್ದನ್ನು ಖಂಡಿಸಿದ್ದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ರೈತರ ಮೇಲೆ ದುರುದ್ದೇಶಪೂರಿತ ಹಾಗೂ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಅವರನ್ನು ಅರ್ಬನ್ ನಕ್ಸಲ್, ಖಲಿಸ್ತಾನಿ, ಗೂಂಡಾಗಳು ಎಂದೆಲ್ಲಾ ಕರೆಯುತ್ತಿದ್ದಾರೆ. ರೈತರ ಮೇಲೆ ಆಕ್ರಮಣಕಾರಿ ಪದಗಳನ್ನು ಬಳಸುವ ಬದಲು ಅವರ ನ್ಯಾಯಯುತ, ಪ್ರಾಮಾಣಿಕ ಪ್ರತಿಭಟನೆಗೆ ನ್ಯಾಯ ಕೊಡಿಸಲು ಪ್ರಯತ್ನ ಪಡಿ ಎಂದು ತಿರುಗಿಬಿದ್ದಿದ್ದರು.

ಇದೀಗ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ, ಸರ್ಕಾರ ರೈತರೊಂದಿಗೆ ಮಾತನಾಡಬೇಕು. ಈ ವಿಷಯದ ಕುರಿತು ಚರ್ಚೆ ನಡೆಸಬೇಕು. ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮೋದಿ ಈ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದು ಯಾವಾಗ?: ಈ ಮೂರು ಕಪ್ಪು ಕಾಯ್ದೆಗಳನ್ನು ಮೋದಿ ವಾಪಸ್ ಪಡೆಯುವುದು ಯಾವಾಗ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದ್ದಾರೆ. ರೈತರು ಸಾಯುತ್ತಿದ್ದರೂ ಮೋದಿ ಯಾಕೆ ಸುಮ್ಮನಿದ್ದಾರೆ? ರೈತರ ನೋವು ಅವರಿಗೇಕೆ ಕಾಣುತ್ತಿಲ್ಲ? ಈ ಕೃಷಿ ಕಾಯ್ದೆಗಳನ್ನು ಯಾವಾಗ ಹಿಂಪಡೆಯುತ್ತೀರ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರ ಮೋದಿ ಸರ್ಕಾರವಲ್ಲ, ಕಂಪನಿ ಸರ್ಕಾರವಾಗಿದೆ. ಮಾಧ್ಯಮವೂ ಆಡಳಿತ ಸರ್ಕಾರವನ್ನು ಪ್ರಶ್ನೆ ಮಾಡಬೇಕು, ವಿರೋಧ ಪಕ್ಷಗಳನ್ನಲ್ಲ ಎಂದು ಹೇಳಿದ್ದಾರೆ.












Click it and Unblock the Notifications