ಕಾಫಿನಾಡಿನಲ್ಲಿ ಭಾರಿ ಮಳೆಯಿಂದ ಕಪ್ಪು ಬಣ್ಣಕ್ಕೆ ತಿರುಗುತ್ತಿದೆಯಾ ಕಾಫಿ ಹಣ್ಣು ಮತ್ತು ಎಲೆ!?
ಚಿಕ್ಕಮಗಳೂರು, ಜುಲೈ 23: ಚಿಕ್ಕಮಗಳೂರಿನಲ್ಲಿ ಈ ವರ್ಷ ಬಂಗಾರದ ಬೆಳೆ ಬೆಳೆಯುವ ಕಾಫಿ ಬೆಳಗಾರರ ಕನಸು ಮಳೆ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯು ಕಾಫಿ ಬೆಳೆಗೆ ಪೆಟ್ಟು ಕೊಡುತ್ತಿದೆ.
ಜುಲೈ ತಿಂಗಳ ಮೊದಲ ಎರಡು ವಾರದಲ್ಲಿ ಸುರಿದ ನಿರಂತರ ಮಳೆಯಿಂದ ಕಾಫಿಯ ಬೇರು ಕೊಳೆಯುತ್ತಿದ್ದು ಹಣ್ಣು ಮತ್ತು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಇದು ರೈತರಿಗೆ ನಷ್ಟವನ್ನು ಉಂಟು ಮಾಡುವ ಅಪಾಯ ಸೃಷ್ಟಿಯಾಗಿದೆ.
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬಾಂಗ್ಲಾದೇಶದ ನಾಲ್ವರು ಅಕ್ರಮ ನಿವಾಸಿಗಳು ಪತ್ತೆ
ಕರ್ನಾಟಕದಲ್ಲಿ ಅತಿಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಲ್ಲೇ ಅತಿಹೆಚ್ಚು ಮಳೆ ಸುರಿದಿದೆ. ಮಾನ್ಸೂನ್ ಮಳೆಯಿಂದಾಗಿ ಕಾಫಿ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಆಗಿರುವ ಮಳೆಯು ಕಾಫಿ ಬೆಳೆಗೆ ಹೇಗೆ ಆಪತ್ತು ತಂದೊಡ್ಡಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ದೇಶದಲ್ಲೇ ಅತಿಹೆಚ್ಚು ಕಾಫಿ ಬೆಳೆಯುವ ವಲಯವಿದು
ಭಾರತದಲ್ಲಿ ಉತ್ಪಾದನೆ ಆಗುವ ಒಟ್ಟು ಕಾಫಿ ಪ್ರಮಾಣದಲ್ಲಿ ಶೇ.70ರಷ್ಟು ಕಾಫಿಯನ್ನು ಬೆಳೆಯುವ ಕರ್ನಾಟಕ ಈ ವಲಯದಲ್ಲಿಯೇ ಅತಿಹೆಚ್ಚು ಮಳೆ ಸುರಿದಿದೆ. ಕಳೆದ ಜೂನ್ 1 ರಿಂದ 17ರ ಅವಧಿಯಲ್ಲಿ ಚಿಕ್ಕಮಗಳೂರಿನಲ್ಲಿ ಶೇ.132ರಷ್ಟು ಹೆಚ್ಚು ಮಳೆಯಾಗಿದ್ದರೆ, ಹಾಸನದಲ್ಲಿ ಶೇ.124ರಷ್ಟು ಹೆಚ್ಚು ಮಳೆಯಾಗಿದೆ, ಅದೇ ರೀತಿ ಅತಿಹೆಚ್ಚು ಕಾಫಿ ಉತ್ಪಾದಿಸುವ ಜಿಲ್ಲೆ ಆಗಿರುವ ಕೊಡಗಿನಲ್ಲಿ ಶೇ.109ರಷ್ಟು ಹೆಚ್ಚು ಮಳೆಯಾಗಿದೆ.
ಅದೇ ರೀತಿ ಜುಲೈ 9 ರಿಂದ 15ರ ಅವಧಿಯಲ್ಲಿ ದಕ್ಷಿಣ ಕೊಡಗು ಪ್ರದೇಶದಲ್ಲಿ ಸರಾಸರಿ ಮಳೆಯ ಪ್ರಮಾಣವು ಹಿಂದಿನ 10 ವರ್ಷಗಳ ಸರಾಸರಿಗಿಂತ ಈ ವರ್ಷ ಶೇ.272ರಷ್ಟು ಹೆಚ್ಚಾಗಿದೆ. ಬಾಳೆಲೆಯಂತಹ ಕೆಲವು ಪ್ರದೇಶಗಳಲ್ಲಿ 10 ವರ್ಷದ ಸರಾಸರಿಗಿಂತ ಶೇ.349 ರಷ್ಟು ಹೆಚ್ಚು ಮಳೆಯಾಗಿದ್ದರೆ, ಗೋಣಿಕೊಪ್ಪಲು ಪ್ರದೇಶದಲ್ಲಿ ಶೇ.310 ಮತ್ತು ವಿರಾಜಪೇಟೆಯಲ್ಲಿ ಶೇ.288ರಷ್ಟು ಹೆಚ್ಚು ಮಳೆಯಾಗಿದೆ.
ಮಳೆ ಮತ್ತು ಬಿರುಗಾಳಿಗೆ ತತ್ತರಿಸಿದ ಕಾಫಿ ಬೆಳೆ
"ಭಾರಿ ಮತ್ತು ನಿರಂತರ ಮಳೆಯಿಂದ ಕೊಳೆತ, ಕಪ್ಪು ಬಣ್ಣಕ್ಕೆ ತಿರುಗಿದ, ಕಾಂಡ ಕೊಳೆತಿರುವ ಮತ್ತು ಅರ್ದ್ರ ಫೀಡ್ ಸ್ಥಿತಿಯಲ್ಲಿ ಇರುವ ಕಾಫಿ ಬೆಳೆಗೆ ತೀವ್ರ ಹಾನಿ ಉಂಟಾಗುತ್ತದೆ. ಇದರ ಜೊತೆಗೆ ಬಿರುಗಾಳಿಯು ಬೆಳೆಯನ್ನು ಉದುರುವಂತೆ ಮಾಡುತ್ತದೆ. ಇನ್ನು ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನೀರು ನಿಂತ ಪರಿಣಾಮ ರೆೈತರು ನಷ್ಟ ಅನುಭವಿಸಿದ್ದಾರೆ. ಬೆಳೆ ನಷ್ಟವನ್ನು ಈಗಲೇ ಅಂದಾಜಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಚಿಕ್ಕಮಗಳೂರಿನಲ್ಲಿ ಶೇ.25 ಮತ್ತು ಕೊಡಗಿನಲ್ಲಿ ಶೇ.20ರಷ್ಟು ನಷ್ಟು ಆಗಿರಬಹುದು," ಎಂದು ಕೆಪಿಎ ಅಧ್ಯಕ್ಷ ಎನ್ ರಾಮನಾಥನ್ ಹೇಳಿದ್ದಾರೆ.
ಕಪ್ಪು ಕೊಳೆತ, ಕಾಂಡ ಕೊಳೆತದ ಬಗ್ಗೆ ಬೆಳೆಗಾರರಿಗೆ ಸಲಹೆ
ಕಾಫಿನಾಡಿನ ಯಾವ ಪ್ರದೇಶದಲ್ಲಿ ಅತಿಹೆಚ್ಚು ಮಳೆ ಆಗಿದೆಯೋ ಅಂಥ ಪ್ರದೇಶಗಳನ್ನು ಗುರುತಿಸಲಾಗಿದೆ. ಅತಿವೃಷ್ಟಿಯಿಂದ ಆಗುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ಮಾಡುತ್ತಿರುವುದಾಗಿ ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಸಸ್ಯಗಳ ಬೇರು ವಲಯಗಳಲ್ಲಿ ಅಕಾಲಿಕ ಬೆರ್ರಿ ಡ್ರಾಪ್ ಮತ್ತು ಕಪ್ಪು ಕೊಳೆತ, ಕಾಂಡ ಕೊಳೆತ ರೋಗಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಬೆಳೆಗಾರರಿಗೆ ಸಲಹೆ ನೀಡುತ್ತಿದ್ದಾರೆ.
ತೋಟದ ಬೆಳೆಗಳ ನಷ್ಟದ ಬಗ್ಗೆ ಸಮೀಕ್ಷೆಗೆ ಮನವಿ
UPASI ಯ ಉಪಾಧ್ಯಕ್ಷ ಜೆಫ್ರಿ ರೆಬೆಲ್ಲೊ ಪ್ರಕಾರ, ಪರಿಸ್ಥಿತಿಯು ನೀರಸವಾಗಿದೆ. ಏಕೆಂದರೆ ಇದಿನ್ನೂ ಮಾನ್ಸೂನ್ ಋತುವಿನ ಮೊದಲಾರ್ಧವಾಗಿದೆ. ಬೆಳೆ ನಷ್ಟವನ್ನು ನಿರ್ಣಯಿಸಲು ತುಂಬಾ ಸಮಯವಿದೆ. "ಪ್ರಸ್ತುತ ನಷ್ಟವನ್ನು ಶೇ.15ರಷ್ಟು ಎಂದು ಅಂದಾಜಿಸಲಾಗಿದೆ ಆದರೂ, ಮಳೆ ಹೆಚ್ಚಾದಂತೆ ನಷ್ಟದ ಪ್ರಮಾಣವೂ ಹೆಚ್ಚಾಗಬಹುದು," ಎಂದು ರೆಬೆಲ್ಲೊ ಹೇಳಿದ್ದಾರೆ.
ಏಲಕ್ಕಿ, ಕಾಳುಮೆಣಸು ಸೇರಿದಂತೆ ಇತರೆ ತೋಟದ ಬೆಳೆಗಳು ನಷ್ಟ ಅನುಭವಿಸಿವೆ. 'ಜಿಲ್ಲಾ ಅಧಿಕಾರಿಗಳು ಬೆಳೆ ನಷ್ಟದ ಸಮೀಕ್ಷೆ ನಡೆಸುವಂತೆ ಮನವಿ ಮಾಡಿದ್ದೇವೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಜಯರಾಂ ಹೇಳಿದ್ದಾರೆ.