ಚಿಕ್ಕಮಗಳೂರು: ಟ್ರ್ಯಾಕ್ಟರ್ನಿಂದ ಆಲೂಗಡ್ಡೆ ಬೆಳೆ ನಾಶ, ಕಣ್ಣೀರಿಡುತ್ತಿರುವ ಅನ್ನದಾತರು
ಚಿಕ್ಕಮಗಳೂರು, ಆಗಸ್ಟ್, 25: ಕಡೂರು ತಾಲ್ಲೂಕಿನ ಹೋರಿತಿಮ್ಮನಹಳ್ಳಿಯಲ್ಲಿ ರೈತರ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಆಲೂಗಡ್ಡೆ ಬೆಳೆಯನ್ನು ನಾಶಪಡಿಸಿದ್ದಾರೆ. ತೆಲಗುಗೌಡ ಸಮುದಾಯದವರು ಕುಳುವ ಸಮಾಜದವರ ಜಮೀನಿನ ಮೇಲೆ ಅತಿಕ್ರಮಣ ಪ್ರವೇಶ ಮಾಡಿ ಆಲೂಗಡ್ಡೆ ಬೆಳೆಯನ್ನು ನಾಶ ಮಾಡಿದ್ದಾರೆ. ಈ ಜಮೀನು ನಮಗೆ ಸೇರಬೇಕು ಎಂದು ಕುಳುವ ಸಮಾಜದವರ ದೌರ್ಜನ್ಯ ಎಸಗಿದ್ದಾರೆ. ಧರಣಿಕುಮಾರ್ ಎಂಬುವರು ಗ್ರಾಮದ ಸರ್ವೇ ನಂಬರ್ 8ರಲ್ಲಿ 15ಗುಂಟೆ ಜಮೀನು ಹೊಂದಿದ್ದಾರೆ. ಅದರ ಪಕ್ಕದಲ್ಲೇ ಹನುಮಾಪುರ ಗ್ರಾಮದ ಸರ್ವೇ ನಂಬರ್ 62ರಲ್ಲಿ 1.35 ಗುಂಟೆ ಜಮೀನಿನಲ್ಲಿ ಕಳೆದ 10ರಿಂದ 15 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದರು. ಜಮೀನು ಮಂಜೂರು ಮಾಡುವಂತೆ 2018ರಲ್ಲಿ ಫಾರಂ ನಂಬರ್ 57ರಲ್ಲಿ ಅರ್ಜಿ ಸಲ್ಲಿಸಿದ್ದರು.
ಟ್ರ್ಯಾಕ್ಟರ್ನಿಂದ ಆಲೂಗಡ್ಡೆ ಬೆಳೆ ನಾಶ
ಇದೇ ಜಮೀನಿನಲ್ಲಿ ಈ ಬಾರಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಲೂಗಡ್ಡೆ ಬೆಳೆಯನ್ನು ಬೆಳೆದಿದ್ದರು. ಬೆಳೆಯೂ ಉತ್ತಮವಾಗಿ ಬಂದಿದ್ದು, ಬುಧವಾರ ಜೋಡಿ ತಿಮ್ಮಾಪುರದ ತೆಲಗುಗೌಡ ಸಮುದಾಯದವರು ಏಕಾಏಕಿ ಜಮೀನಿಗೆ ನುಗ್ಗಿ ಆಲೂಗಡ್ಡೆ ಬೆಳೆಯ ಮೇಲೆ ಟ್ಯಾಕ್ಟರ್ ಹೊಡೆದಿದ್ದಾರೆ.
ಚಿಕ್ಕಮಗಳೂರು: ಸ್ಮಶಾನದ ರಸ್ತೆ ಬಂದ್: ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
ಆಲೂಗೆಡ್ಡೆ ಬೆಳೆ ನಾಶ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಹೋರಿತಿಮ್ಮನಹಳ್ಳಿ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಸುಮಾರು 4ಎಕರೆ ಪ್ರದೇಶದಲ್ಲಿ ಆಲೂಗಡ್ಡೆಯನ್ನು ಬೆಳೆದಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಗ್ರಾಮದಲ್ಲಿ ಕುಳುವ ಸಮಾಜದ ಕುಟುಂಬಗಳು ಕಡಿಮೆ ಇದ್ದು, ಪ್ರಬಲ ಸಮುದಾಯವಾದ ತೆಲಗುಗೌಡ ಸಮುದಾಯದವರು ಜಮೀನಿನಲ್ಲಿ ಟ್ರ್ಯಾಕ್ಟರ್ ಹೊಡೆದು ಬೆಳೆನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತೆಲಗುಗೌಡ ಸಮುದಾಯ ದೌರ್ಜನ್ಯ
ಇದು ನಮ್ಮ ತೆಲಗುಗೌಡ ಸಮುದಾಯಕ್ಕೆ ಸೇರಿದ ಜಮೀನು. ಈ ಜಮೀನಿನಲ್ಲಿ ಬೆಳೆ ಬೆಳೆಯಲು ಯಾರು ಅಧಿಕಾರ ಕೊಟ್ಟವರು ಎಂದು ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿದ್ದಾರೆ. ಈ ಜಮೀನು ಗ್ರಾಮಕ್ಕೆ ಸೇರಬೇಕು ಎಂದು ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಬೆಳೆಯನ್ನು ನಾಶಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿರುವ ಧರಣಿಕುಮಾರ್ ಅವರ ಬೆಳೆ ಕೈಸೇರುವ ಮುನ್ನಾ ಮಣ್ಣು ಪಾಲಾಗಿದೆ.
ಎರಡು ಜನಾಂಗದ ಜಗಳದಲ್ಲಿ ಬೆಳೆಗಳು ನಾಶವಾಗಿದ್ದು, ರೈತರು ಕಣ್ಣೀರಿಡುತ್ತಿದ್ದಾರೆ. ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಲೂಕು ಪಂಚಾಯತಿ ಮಾಜಿ ಸದಸ್ಯ ಗೋವಿಂದ ಸ್ವಾಮಿ, ಸಂಪತ್, ಪುನೀತ್, ಸಿರಿ ಎಂಬುವವರು ಕೃತ್ಯ ಎಸಗಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.