ಆದೇಶ ಪಾಲಿಸಿ, ಇಲ್ಲವೇ ಕ್ರಮ ಎದುರಿಸಿ: ಟ್ವಿಟ್ಟರ್ಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ
ನವದೆಹಲಿ, ಫೆಬ್ರವರಿ 3: ಸರ್ಕಾರದ ಆದೇಶಗಳನ್ನು ಪಾಲಿಸದೆ ಇದ್ದರೆ ಕಠಿಣ ಕ್ರಮ ಎದುರಿಸಬೇಕಾಗಲಿದೆ ಎಂದು ಟ್ವಿಟ್ಟರ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವಿಟ್ಟರ್ನಲ್ಲಿ ಆಕ್ಷೇಪಾರ್ಹ ಹ್ಯಾಶ್ಟ್ಯಾಗ್ಗಳನ್ನು ಬಳಸಿದ ಖಾತೆಗಳು ಮತ್ತು ಟ್ವೀಟ್ಗಳನ್ನು ತನ್ನ ಆದೇಶದ ಹೊರತಾಗಿಯೂ ಏಕಪಕ್ಷಿಯವಾಗಿ ಅನ್ಬ್ಲಾಕ್ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ 'ಫಾರ್ಮರ್ ಜೆನೋಸೈಡ್' ಎಂಬ ಹ್ಯಾಶ್ಟ್ಯಾಗ್ ಮತ್ತು 'ಸುಳ್ಳು, ಬೆದರಿಸುವ ಮತ್ತು ಪ್ರಚೋದನಾಕಾರಿ ಟ್ವೀಟ್ಗಳನ್ನು' ಪೋಸ್ಟ್ ಮಾಡಿದ್ದ ಹಾಗೂ ರೀಟ್ವೀಟ್ ಮಾಡಿದ್ದ 250ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡಲಾಗಿತ್ತು.
ಹ್ಯಾಶ್ಟ್ಯಾಗ್ಗಳ ಬಳಕೆಯು ಸಾಬೀತಾಗದ ನೆಲಗಟ್ಟಿನಲ್ಲಿ ಸಮಾಜದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವುದು, ನಿಂದನೆ, ಕಿಡಿಹಚ್ಚಿಸುವ ಪ್ರಚೋದಿತ ಆಂದೋಲನದ ಭಾಗವಾಗಿದೆ. ಹತ್ಯಾಕಾಂಡದ ಪ್ರಚೋದನೆಯು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ. ಅದು ಕಾನೂನು ಮತ್ತು ಸುವ್ಯವಸ್ಥೆಗೆ ಇರುವ ಬೆದರಿಕೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ದೆಹಲಿ ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷ ನಡೆದಿತ್ತು. ಈ ಘಟನೆ ನಡೆದು ಒಂದು ವಾರದ ಬಳಿಕ ರೈತರ ಪರ ಟ್ವಿಟ್ಟರ್ನಲ್ಲಿ ಅನೇಕ ಅಭಿಯಾನಗಳು ನಡೆದಿದ್ದವು. ಸರ್ಕಾರದ ಒತ್ತಾಯದಂತೆ ಟ್ವಿಟ್ಟರ್ ಸಂಸ್ಥೆಯು ಅಭಿಯಾನದಲ್ಲಿ ಭಾಗಿಯಾಗಿದ್ದ ಅನೇಕ ಪ್ರಮುಖ ಖಾತೆಗಳನ್ನು ಬ್ಲಾಕ್ ಮಾಡಿತ್ತು. ಇದನ್ನು ಪ್ರತಿಭಟನೆ ಪರ ಧ್ವನಿ ಎತ್ತಿದ್ದವರು ಟೀಕಿಸಿದ್ದರು. ಹೀಗಾಗಿ ಕೆಲವೇ ಗಂಟೆಗಳಲ್ಲಿ ಅನೇಕ ಖಾತೆಗಳನ್ನು ಅನ್ಬ್ಲಾಕ್ ಮಾಡಲಾಗಿತ್ತು.












Click it and Unblock the Notifications