ಕೃಷಿ ಕಾಯ್ದೆ; ರೈತರೊಂದಿಗೆ ಚರ್ಚೆಗೆ ದಿನ ನಿಗದಿಪಡಿಸಿದ ಕೇಂದ್ರ
ನವದೆಹಲಿ, ಡಿಸೆಂಬರ್ 28: ಕೇಂದ್ರ ಸರ್ಕಾರ ಈಚೆಗೆ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರು ಕೈಗೊಂಡಿರುವ ಹೋರಾಟ ತಿಂಗಳು ಮೀರುತ್ತಿದೆ.
ಕೃಷಿ ಕಾಯ್ದೆಯ ತಿದ್ದುಪಡಿ ಕುರಿತು ರೈತರು ಹಾಗೂ ಸರ್ಕಾರದ ನಡುವೆ ನಡೆದ ಐದು ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಈಚೆಗೆ ಪ್ರಧಾನಿ ಮೋದಿ, ಕೃಷಿ ಕಾಯ್ದೆ ಕುರಿತಂತೆ ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಆಹ್ವಾನ ನೀಡಿದ್ದು, ಸಭೆ ನಡೆಸಿದ ರೈತ ಸಂಘದ ಮುಖಂಡರು ಡಿ.29ರ ಮಂಗಳವಾರ ತಾವು ಮಾತುಕತೆಗೆ ಸಿದ್ಧ ಎಂದು ಪ್ರಸ್ತಾವ ಕಳುಹಿಸಿದ್ದರು.
ಈ ಪ್ರಸ್ತಾವಕ್ಕೆ ಉತ್ತರಿಸಿರುವ ಕೇಂದ್ರ ಸರ್ಕಾರ, ಡಿ.30ರ ಬುಧವಾರ ಚರ್ಚೆ ನಡೆಸಲು ಸೂಕ್ತ ದಿನ ಎಂದು ತಿಳಿಸಿದೆ. ಈ ಮೂರು ವಿವಾದಿತ ಕೃಷಿ ಕಾಯ್ದೆಗಳ ಕುರಿತು ದೆಹಲಿಯಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ಮಾಹಿತಿ ನೀಡಿದೆ.

ಸೆಪ್ಟೆಂಬರ್ ನಲ್ಲಿ ಈ ಕೃಷಿ ಕಾಯ್ದೆಗಳನ್ನು ಸರ್ಕಾರ ಜಾರಿಗೊಳಿಸಿದ್ದು, ಈ ಕಾಯ್ದೆಗಳು ರೈತರಿಗೆ ಮಾರಕವಾಗಿವೆ, ಇದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರೈತರು ನವೆಂಬರ್ 26ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈಚೆಗೆ ಪ್ರತಿಭಟನೆ ತೀವ್ರಗೊಂಡಿದ್ದು, ಈ ಬಿಕ್ಕಟ್ಟನ್ನು ಅಂತ್ಯಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡವೂ ಹೆಚ್ಚಾಗಿದೆ. ಈ ಬೆನ್ನಲ್ಲೇ ಚರ್ಚೆಗೆ ವೇದಿಕೆ ಸಿದ್ಧಗೊಳ್ಳುತ್ತಿದೆ.












Click it and Unblock the Notifications