ಹಿಂಗಾರು ಋತುವಿನ ಪೂರೈಕೆಗೆ ಕೇಂದ್ರ ಸರ್ಕಾರದಿಂದ 52, 460 ಟನ್ ಈರುಳ್ಳಿ ದಾಸ್ತಾನು
ನವದೆಹಲಿ ಜೂ.25: ದೇಶದಲ್ಲಿ ಹಿಂಗಾರು ಮಳೆ ಅವಧಿಯಾದ ಅಕ್ಟೋಬರ್ ನಂತರದಲ್ಲಿ ಈರುಳ್ಳಿ ಕೊರತೆ ಉಂಟಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಒಟ್ಟು 52, 460 ಟನ್ ಈರುಳ್ಳಿಯನ್ನು ದಾಸ್ತಾನು ಮಾಡಿಟ್ಟುಕೊಂಡಿದೆ. ಭವಿಷ್ಯದ ಅಗತ್ಯತೆ ನೋಡಿಕೊಂಡು ಮಾರುಕಟ್ಟೆಗೆ ಬಿಡುವ ಚಿಂತನೆ ರೂಪಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಕಳೆದ ಮೇ ತಿಂಗಳಾಂತ್ಯದವರೆಗೆ ಅಪಾರ ಪ್ರಮಾಣದಲ್ಲಿ (52, 460ಟನ್) ಈರುಳ್ಳಿಯನ್ನು ತುರ್ತಾಗಿ ಸಂಗ್ರಹಿಸಿದೆ. ಕಳೆದ ಕೆಲವು ವರ್ಷಗಳಿಂದ ಹಿಂಗಾರು ಋತುವಿನ ವೇಳೆ ಈರುಳ್ಳಿ ಅಭಾವ ಸೃಷ್ಟಿಯಾಗುತ್ತದೆ. ಬೇಡಿಕೆ ಹೆಚ್ಚಾಗುತ್ತಾ ಹೋದಂತೆ ಬೆಲೆ ದಿನೇ ದಿನೇ ಏರಿಕೆ ಕಾಣುತ್ತದೆ. ನಿತ್ಯದ ಆಹಾರ ಸಾಮಗ್ರಿಯಲ್ಲಿ ಅಗತ್ಯವಾಗಿರುವ ಈರುಳ್ಳಿ ದರ ಗಗನಕ್ಕೇರಿ ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಇದನ್ನು ತಪ್ಪಿಸಿ ಸಕಾಲಕ್ಕೆ ಉತ್ಪನ್ನ ಒದಗಿಸಲು ತುರ್ತಾಗಿ 'ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೇಟಿಂಗ್ ಫೇಡರೇಷನ್ ಆಫ್ ಇಂಡಿಯಾ' (ಎನ್ಎಎಫ್ಇಡಿ) ಮೂಲಕ ಈರುಳ್ಳಿ ಸಂಗ್ರಹಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ ಬೆಲೆ ತುಂಬಾ ಅಗ್ಗ: ಕೇಂದ್ರ ಸರ್ಕಾರ
ಚಳಿಗಾಲದ ಅವಧಿಯಲ್ಲಿ ಬೇಡಿಕೆ ಸಷ್ಟಿಯಾಗುತ್ತದೆ. ಆದರೆ ಪೂರೈಕೆ ಅಷ್ಟಾಗಿ ಇರುವುದಿಲ್ಲ. ಕೆಲ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ಸಮಸ್ಯೆ ಸೃಷ್ಟಿಸುತ್ತಾರೆ. ಈ ರೀತಿ ಆದರೆ ಗ್ರಾಹಕರಿಗೆ ಈರುಳ್ಳಿ ಪೂರೈಸಲು ಸರ್ಕಾರ ಹರಸಾಹಸ ಪಡಬೇಕಾಗುತ್ತದೆ. ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭಾರ ಸೃಷ್ಟಿಯಾದರೂ ನಿಭಾಯಿಸಲು ಮುಂಗಡವಾಗಿಯೇ ಕಡಿಮೆ ಬೆಲೆಗೆ ಸಿಗುವ ಹಾಗೂ ಮಾರುಕಟ್ಟೆಗೆ ಸಮರ್ಪಕವಾಗಿ ಬರುವ ಸಂದರ್ಭ ನೋಡಿ ಈರುಳ್ಳಿಯನ್ನು ಖರೀದಿಸಲಾಗಿದೆ.
ಮೇ 31ರವರೆಗೆ 52, 460ಟನ್ ಸಂಗ್ರಹಣೆ ಆಗಿದ್ದು, ಮುಂದಿನ ತಿಂಗಳಲ್ಲಿ ಈರುಳ್ಳಿ ಸಂಗ್ರಹಣೆಯಲ್ಲಿ ನಿಗದಿತ ಗುರಿ ತಲುಪಲಿದ್ದೇವೆ ಎಂದು ಎನ್ಎಎಫ್ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
2.50ಲಕ್ಷ ಟನ್ ರಾಬಿ ಧಾನ್ಯ ಸಂಗ್ರಹದ ಗುರಿ:
ಮೇ ಅಂತ್ಯಕ್ಕೆ ಈರುಳ್ಳಿ ಸಂಗ್ರಹಣೆ ಮಾಡಿದಂತೆ 2022-23ರ ಸಾಲಿಗೆ ಅಗತ್ಯದಷ್ಟು ರಾಬಿ ಧಾನ್ಯ (ಗೋಧಿ, ಬಾರ್ಲಿ, ಬಟಾಣಿ ಇತ್ಯಾದಿ) ಸಂಗ್ರಹಿಸುವ ಗುರಿ ಹೊಂದಲಾಗಿದೆ. ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷ ಈರುಳ್ಳಿ ಉತ್ಪನ್ನ ಅಧಿಕ
ಪ್ರಸುತ 2021-2022ರ ವರ್ಷದ ಜೂನ್ ನಲ್ಲಿ ಒಟ್ಟು 26.64 ಮಿಲಿಯನ್ ಟನ್ಗಳಷ್ಟು ಈರುಳ್ಳಿ ಉತ್ಪಾದನೆ ಆಗಿದೆ. ಮುಂದಿನ ವರ್ಷಕ್ಕೆ ಇದನ್ನು ಹೋಲಿಕೆ ಮಾಡಿದರೆ 2022-23ರ ಜೂನ್-ಜುಲೈ ವೇಳೆಗೆ ಒಟ್ಟು 31.12ರಷ್ಟು ಈರುಳ್ಳಿ ಉತ್ಪಾದನೆ ಆಗಬಹುದು ಎಂಬ ನಿರೀಕ್ಷೆ ಇದೆ. ಅಂದರೆ ಈರುಳ್ಳಿ ಉತ್ಪಾದನೆಯ ಪ್ರಮಾಣ ಮುಂದಿನ ವರ್ಷಕ್ಕೆ ಶೇ.16.81ರಷ್ಟು ಹೆಚ್ಚಾಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.