ಮುಂದಿನ ಪೀಳಿಗೆಯ ಉಸಿರುಗಟ್ಟಿಸುವ ಕೆಲಸ ಆಗಬಾರದು...
ಜೀವವೈವಿಧ್ಯ ವನ ಭಾಗ 1...
ಈಗ್ಗೆ ಸುಮಾರು ಇಪ್ಪತ್ತು ವರ್ಷಗಳೇ ಕಳೆದಿರಬೇಕು. ನೆನಪು ಮಾಸಿದೆ. ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಯಾಗಿ ನನ್ನ ಅಭಿಮಾನದ ಮೇಷ್ಟ್ರು ಪ್ರೊ. ಜಿ.ಎಸ್.ರೇಣುಕಪ್ಪ ನೇಮಕಗೊಂಡಿದ್ದರು. ನಾನು ಸಮೂಹ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ನಿತ್ಯ ಅವರನ್ನು ಜ್ಞಾನ ಭಾರತಿಯ ಕ್ಯಾಂಪಸ್ ನಲ್ಲೋ ಅಥವಾ ಸೆಂಟ್ರಲ್ ಕಾಲೇಜಿನ ಅವರ ಚೇಂಬರಿನಲ್ಲೋ ಭೇಟಿಯಾಗುತ್ತಿದ್ದೆ.
ಅದೇ ಸಂದರ್ಭದಲ್ಲಿ ಜ್ಞಾನ ಭಾರತಿ ಆವರಣದಲ್ಲಿ ಜೀವವೈವಿಧ್ಯ ವನ ನಿರ್ಮಿಸಬೇಕೆಂಬ ಯೋಜನೆಯೊಂದರ ಬಗ್ಗೆ ಚರ್ಚೆ ನಡೆದಿತ್ತು. ಆಗಿನ ಕುಲಪತಿಗಳಾದ ಡಾ ಕೆ.ಸಿದ್ದಪ್ಪ, ರಿಜಿಸ್ಟ್ರಾರ್ ಪ್ರೊ ಎಂ.ಎಸ್.ತಿಮ್ಮಪ್ಪ, ರಾ.ಸೇ.ಯೋ ಸಂಯೋಜನಾಧಿಕಾರಿ ರೇಣುಕಪ್ಪ, ತೋಟಗಾರಿಕಾ ಇಲಾಖೆಯಿಂದ ನಾರಾಯಣಸ್ವಾಮಿ ಹಾಗೂ ಖ್ಯಾತ ಪರಿಸರ ಚಿಂತಕ ಯಲ್ಲಪ್ಪರೆಡ್ಡಿ ಅವರನ್ನೊಳಗೊಂಡ ಸಮಿತಿಯು ಜೀವವೈವಿಧ್ಯ ವನ ನಿರ್ಮಾಣಕ್ಕೆ ರೂಪುರೇಷೆಗಳನ್ನು ಹೆಣೆದ ತಂಡ.
ನಾವು ಕೆಲವರು ರಾ.ಸೇ.ಯೋ ಹಿರಿಯ ವಿದ್ಯಾರ್ಥಿಗಳು/ಸಂಪನ್ಮೂಲ ವ್ಯಕ್ತಿಗಳು ಇಡೀ ಯೋಜನೆ ಆರಂಭಗೊಂಡಾಗಿನಿಂದ ಇದರಲ್ಲಿ ತೊಡಗಿಕೊಂಡೆವು. ಪ್ರಮುಖವಾಗಿ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡ ವೆಂಕಟೇಶ್ (ಖೋಡೇಸ್), ಪ್ರಸ್ತುತ ತುಮಕೂರು ಜಿಲ್ಲೆಯ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ನಾಗರಾಜ್ (ಟೆರ್ರಿ), ಮಾನವ ಸಂಪನ್ಮೂಲ ಅಧಿಕಾರಿ ಎಸ್.ಕೆ.ಜಗದೀಶ್ (ಕಂಠಿ) ಮತ್ತು ನಾನು ಹಾಗೂ ಹಲವರು ರೇಣುಕಪ್ಪನವರಿಗೆ ಸಾಥ್ ನೀಡುತ್ತಿದ್ದೆವು. ನನಗೆ ನೆನಪಿರುವ ಹಾಗೆ ಸುಮಾರು 167-170 ದಿನಗಳ ಕಾಲ ಜೀವವೈವಿಧ್ಯ ವನದ ನಿರ್ಮಾಣಕ್ಕೆ ರಾ.ಸೇ.ಯೋ ಶಿಬಿರ ನಡೆದವು. ನಮಗೆ ಗೆಸ್ಟ್ ಹೌಸಿನಲ್ಲಿ ತಂಗುವ ವ್ಯವಸ್ಥೆ ಇತ್ತು. ವಾರದಲ್ಲಿ ಎರಡೋ ಮೂರೋ ದಿನ ಅಲ್ಲಿಯೇ ಉಳಿದು ಬೆಳಿಗ್ಗೆ ಆರು ಗಂಟೆಗೇ ಕ್ಯಾಂಪ್ ಚಟುವಟಿಕೆಗಳನ್ನು ಆರಂಭಿಸಲು ವಿದ್ಯಾರ್ಥಿ ಸ್ವಯಂ ಸೇವಕರಿಗೆ ನೆರವಾಗುತ್ತಿದ್ದೆವು.

ಇಡೀ ವಿಶ್ವವಿದ್ಯಾಲಯ ವ್ಯಾಪ್ತಿಯ ರಾ.ಸೇ.ಯೋ ಘಟಕ ಉಳ್ಳ ಎಲ್ಲಾ ಕಾಲೇಜುಗಳಿಂದ ಸ್ವಯಂ ಸೇವಕರು ಜೀವವೈವಿಧ್ಯ ವನ ನಿರ್ಮಿಸಲು ಶ್ರಮಿಸಿದರು. ಅದರ ಫಲವೆಂಬಂತೆ ದೇಶದ ಅತಿ ದೊಡ್ಡ ಮಾನವ ನಿರ್ಮಿತ ಜೀವವೈವಿಧ್ಯ ವನ ಎಂಬ ಖ್ಯಾತಿಗೆ ಕಾರಣವಾಯಿತು. ನಮಗೆ ವಿಶೇಷವಾಗಿ ಜೀವವೈವಿಧ್ಯ ವನವನ್ನು ನಿರ್ಮಿಸಲು ಕೆಲಸ ಮಾಡಿದವರಿಗೆ ಅದರ ಬಗ್ಗೆ ಒಂದು ಬಗೆಯ ownership ಇದೆ. ಅಲ್ಲಿ ಏನಾದರೂ ಸಮಸ್ಯೆಯಾದರೆ ಸುಲಭಕ್ಕೆ ಸುಮ್ಮನಿರಲು ಸಾಧ್ಯವಿಲ್ಲ.
ಈಗ ನಾವು ಸುಮ್ಮನಿರಲಾಗದ ಸಮಸ್ಯೆ ಎದುರಾಗಿದೆ. ನಮ್ಮ ಜೀವವೈವಿಧ್ಯವನದ ಕಾಡಿನ ಜಾಗವನ್ನು ಕಟ್ಟಡ ನಿರ್ಮಾಣಕ್ಕೆ ಕೊಡಲು ವಿವಿ ಮುಂದಾಗಿದೆ. ಅದಕ್ಕಾಗಿ ಜಾಗ ಕೊಡುವುದರ ಬಗ್ಗೆ ನಮ್ಮ ತಕರಾರಿಲ್ಲ. ನಮ್ಮ ತಕರಾರಿರುವುದು ಜೀವವೈವಿಧ್ಯ ವನದ ಜಾಗ, ಗಿಡ, ಮರ ಪ್ರಾಣಿ ಪಕ್ಷಿಗಳಿರುವ ಜಾಗವನ್ನು ಕೊಡುತ್ತಿರುವುದಕ್ಕೆ. ವಿವಿ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಾವು ನಿಗದಿ ಮಾಡಿಕೊಂಡಿರುವ ಜಾಗವನ್ನು ಬದಲಾಯಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯ.
ಮುಂದಿನ ದಿನಗಳಲ್ಲಿ ಜೀವವೈವಿಧ್ಯವನ ಉಳಿಸಿಕೊಳ್ಳಲು ಹೆಚ್ಚಿನ ಸಂಘಟನಾತ್ಮಕ ಹೋರಾಟದ ಅಗತ್ಯ ಬರಬಹುದು. ಈಗ ನಮ್ಮ ರಾ.ಸೇ.ಯೋ ವಿದ್ಯಾರ್ಥಿಗಳು ಏನೆಲ್ಲಾ ಆಗಿದ್ದೀರಿ. ಎಲ್ಲೆಲ್ಲಾ ಇದ್ದೀರಿ. ಅಲ್ಲಿಂದಲೇ ನಿಮ್ಮ ಪ್ರತಿರೋಧ ಒಡ್ಡಬೇಕು. ಜೊತೆಗೆ ನಾವೆಲ್ಲಾ ಒಂದೆಡೆ ಮಾತನಾಡಲು ಬೇಕಾದ ಒಂದು ಗುಂಪನ್ನು ರಚಿಸಲು ಯೋಜಿಸೋಣ. ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸೋಣ. ನಮ್ಮ ಮುಂದಿನ ಪೀಳಿಗೆ ಉಸಿರಾಡಲು ಕನಿಷ್ಠ ಆಮ್ಲಜನಕವನ್ನಾದರೂ ಬಿಟ್ಟು ಹೋಗಬೇಕಲ್ಲವೇ!?











Click it and Unblock the Notifications