ನಿಲ್ಲದ ಕಾಡಾನೆಗಳ ಹಾವಳಿ: ಅಡಿಕೆ ಮರಗಳ ಮಾರಣಹೋಮ, ಕೆಸಗೋಡು ಗ್ರಾಮದ ರೈತ ಕಂಗಾಲು
ಹಾಸನ, ಡಿಸೆಂಬರ್, 01: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿವೆ. ಬೆಳೆಗಳನ್ನು ಕಳೆದುಕೊಂಡ ರೈತರು ದಿಕ್ಕುತೋಚದಂತೆ ಕಂಗಾಲಾಗಿ ಹೋಗಿದ್ದಾರೆ.
ಸಕಲೇಶಪುರ ತಾಲೂಕಿನ ಕೆಸಗೋಡು ಗ್ರಾಮದ ಜಮೀನುಗಳಿಗೆ ಕಾಡಾನೆ ದಾಳಿ ಮಾಡಿ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಕಾಡಾನೆಗಳು ಕೊಯ್ಲಿಗೆ ಬಂದಿದ್ದ ಅಡಿಕೆ, ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿವೆ. ದಯಾನಂದ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಿಕೆ ಗಿಡಗಳು ನಾಶವಾಗಿದ್ದು, ಬೆಳೆ ನಾಶವಾಗಿರುವ ಬಗ್ಗೆ ರೈತ ದಯಾನಂದ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ. ಹೀಗೆ ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡ ರೈತರು ಇದೀಗ ತತ್ತರಿಸಿ ಹೋಗಿದ್ದಾರೆ. ಅಲ್ಲದೇ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ: ಸಕಲೇಶಪುರದಲ್ಲಿ ಮುಂದುವರೆದ ಕಾಡಾನೆ ಆರ್ಭಟ; ಜನರಿಗೆ ಆತಂಕ
ಇನ್ನು ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಾಡಾನೆಗಳ ದಾಳಿಯಿಂದ ಕಾರ್ಮಿಕರು ಗದ್ದೆ, ತೋಟದ ಕೆಲಸಕ್ಕೆ ಹೋಗಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಲೂರು, ಸಕಲೇಶಪುರ ತಾಲೂಕಿನಲ್ಲಿ ಕಾಡಾನೆಗಳ ಹಿಂಡು ಕಾಫಿತೋಟ, ಗದ್ದೆ, ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಳೆದ ಬೆಳೆಯನ್ನು ರಾತ್ರೋರಾತ್ರಿ ತಿಂದು ಹಾಕುತ್ತಿವೆ. ಅಲ್ಲದೇ ಬೆಳೆಗಳನ್ನು ತುಳಿದು ನಾಶಮಾಡುತ್ತಿವೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.
ಗಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಇತ್ತೀಚೆಗಷ್ಟೇ ಕಾಡಾನೆ ದಾಳಿಯಿಂದ ಇಬ್ಬರು ಬಲಿಯಾಗಿದ್ದರು. ಮತ್ತೊಂದು ಕಡೆ ಕಾಡಾನೆಗಳ ದಾಳಿಗೆ ಸಿಲುಕದ ಕೆಲವರು ಇನ್ನು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡುವ ಅರಣ್ಯ ಅಧಿಕಾರಿಗಳು, ಸ್ವಲ್ಪ ದಿನಗಳ ಬಳಿಕ ಅತ್ತ ತಲೆ ಹಾಕುವುದನ್ನೇ ಮರೆತುಬಿಡುತ್ತಾರೆ. ಹೀಗೆ ಅರಣ್ಯ ಅಧಿಕಾರಿಗಳು ಪರಿಹಾರದ ಭರವಸೆಯನ್ನು ನೀಡಿ ಕಣ್ಮರೆ ಆಗಿಬಿಡುತ್ತಾರೆ.
ಸ್ಥಳಾಂತರಿಸಿದರೂ ತಪ್ಪದ ಕಾಟ: ನೂರಾರು ಮೈಲಿ ಸಾಗಿ ಬಂದು ಮನೆ ಮೇಲೆ ಕಾಡಾನೆ ದಾಳಿ
ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ
ಆಲೂರು, ಸಕಲೇಶಪುರ ತಾಲೂಕಿಗೆ ಸೀಮಿತವಾಗಿದ್ದ ಕಾಡಾನೆ ಸಮಸ್ಯೆ ಇದೀಗ ಬೇಲೂರು, ಅರಕಲಗೂಡು ತಾಲೂಕಿನ ಜನರ ನಿದ್ದೆಗೆಡಿಸಿದೆ. ಕಾಡಾನೆಗಳ ದಾಳಿಗೆ ಮನುಷ್ಯರು ಬಲಿಯಾಗಿತ್ತಲೇ ಇದ್ದಾರೆ. ಆದರೆ ಅರಣ್ಯ ಇಲಾಖೆ ಮಾತ್ರ ಸೂಕ್ತ ಪರಿಹಾರದ ವ್ಯವಸ್ಥೆಯನ್ನು ಕೈಗೊಳ್ಳುತ್ತಿಲ್ಲ ಎಂದು ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎಚ್ಚೆತ್ತುಕೊಳ್ಳದ ಬೇಜವಾಬ್ದಾರಿ ಅಧಿಕಾರಿಗಳು
ಸಕಲೇಶಪುರ, ಆಲೂರು ತಾಲೂಕಿನ ಕಾಫಿ ತೋಟಗಳಲ್ಲಿ ಕೂಲಿಗಾಗಿ ಹೊರ ರಾಜ್ಯಗಳ ಕಾರ್ಮಿಕರು ಕುಟುಂಬ ಸಹಿತ ಆಗಮಿಸಿದ್ದರು. ಇದೀಗ ಕಾಡಾನೆಗಳ ದಾಳಿಯಿಂದ ಹೊರರಾಜ್ಯಗಳ ಕಾರ್ಮಿಕರು ಬೆಚ್ಚಿಬಿದ್ದಿದ್ದಾರೆ. ಹಾಡಹಗಲೇ ನಡುರಸ್ತೆಯಲ್ಲಿ ನಿಂತು ಗೀಳಿಗಿಡುವುದು, ಜನರನ್ನು ಕಂಡರೆ ಅಟ್ಟಾಡಿಸಿ, ಸೆರೆ ಸಿಕ್ಕವರನ್ನು ಸೊಂಡಿಲಿನಲ್ಲಿ ಬಟ್ಟೆ ಒಗೆದಂತೆ ಎಸೆಯುತ್ತವೆ. ಇಲ್ಲವೆ, ಕಾಲಿನಿಂದ ತುಳಿದು ಹತ್ಯೆ ಮಾಡಿದ ಪ್ರಕರಣಗಳನ್ನು ಕಂಡಿರುವ ಕಾರ್ಮಿಕರು ಮತ್ತು ಅವರ ಮಕ್ಕಳು ಇಲ್ಲಿನ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ಕಾಫಿ ತೋಟದ ಮಾಲೀಕರು ನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಕಾಡಾನೆ ದಾಳಿಯಿಂದ ಬೆಚ್ಚಿಬಿದ್ದ ಕಾರ್ಮಿಕರು
ಒರಿಸ್ಸಾ, ಬಾಂಗ್ಲಾ, ಅಸ್ಸಾಂನ ಭಾಗದಿಂದ ಕೂಲಿ ಕಾರ್ಮಿಕರು ಕಾಫಿ ತೋಟಗಳ ಕೆಲಸಕ್ಕೆಂದು ಆಗಮಿಸಿದ್ದು, ಇವರನ್ನು ಕರೆತರುವಲ್ಲಿ ಮಧ್ಯವರ್ತಿಗಳ ದೊಡ್ಡ ತಂಡ ಯಶಸ್ಸು ಕಂಡಿತ್ತು. ಆದರೆ ಕಾಡಾನೆ ಸಮಸ್ಯೆಯಿಂದ ಒಂದಿಷ್ಟು ಕಾರ್ಮಿಕರು ಈಗಾಗಲೇ ಪರ್ಯಾಯ ಕೆಲಸದತ್ತ ವಾಲಿರುವುದು ಕಾಫಿ ತೋಟದ ಮಾಲೀಕರನ್ನು ಕಂಗಾಲಾಗುವಂತೆ ಮಾಡಿದೆ.