ಬಿಎಸ್ಎಸ್ಎಸ್ಕೆ ಕಾರ್ಖಾನೆ ಆರಂಭ : ಅಮಿತ್ ಶಾ
ಬೀದರ್, ಫೆಬ್ರವರಿ 25 : ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಭಾನುವಾರ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೀದರ್ನಲ್ಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಾಗಲಕೋಟೆ ಜಿಲ್ಲೆಯಲ್ಲಿದ್ದಾರೆ.
ಭಾನುವಾರ ಕರ್ನಾಟಕಕ್ಕೆ ಆಗಮಿಸಿರುವ ಅಮಿತ್ ಶಾ ಬೀದರ್ನ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಬ್ಬು ಬೆಳೆಯುವ ರೈತರ ಜೊತೆ ಸಂವಾದ ನಡೆಸಿದರು.
'ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸಲಾಗುತ್ತದೆ' ಎಂದು ಅಮಿತ್ ಶಾ ರೈತರಿಗೆ ಭರವಸೆ ನೀಡಿದರು.

ರೈತರ ಜೊತೆ ಸಂವಾದ ನಡೆಸುವ ಮೊದಲು ಅಮಿತ್ ಶಾ ಜಿಲ್ಲೆಯ ಮಂಗಲಗಿಯಲ್ಲಿ ಸಾಲಭಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಕರ್ನಾಟಕದಲ್ಲೂ ರೈತ ಸ್ನೇಹಿಯಾದ ಸರ್ಕಾರವನ್ನು ಯಡಿಯೂರಪ್ಪ ನೇತೃತ್ವದಲ್ಲಿ ರಚನೆ ಮಾಡಲಿದ್ದೇವೆ.
2014ರ ಬಳಿಕ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದಿದೆ. ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಗೆ ಮತ ನೀಡಿರುವುದು ರೈತ ಸಮುದಾಯ
ಪ್ರತಿ ಜಿಲ್ಲೆಯ ರೈತನು ಒಂದು ಹಿಡಿ ಮಣ್ಣನ್ನು ಸಮಾವೇಶಕ್ಕೆ ತರಲಿದ್ದಾರೆ. ಈ ಮಣ್ಣಿನ ಮೇಲೆ ಬಿಜೆಪಿ ನಾಯಕರು ಪ್ರಮಾಣ ಮಾಡಲಿದ್ದಾರೆ. ಮುಂದಿನ ಸರ್ಕಾರ ರೈತ ಪರವಾಗಿರುತ್ತದೆ ಮತ್ತು ರೈತರಿಗಾಗಿ ಕೆಲಸ ಮಾಡುತ್ತದೆ ಎಂದು ಪ್ರತಿಜ್ಞೆ ಮಾಡಲಿದ್ದಾರೆ.
ಫೆ.27ರಂದು ದಾವಣಗೆರೆಯಲ್ಲಿ ಬೃಹತ್ ರೈತ ಸಮ್ಮೇಳನ ನಡೆಯಲಿದೆ. ಪ್ರಧಾನಿ ಮೋದಿ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಅವರು ಮಾಹಿತಿ ತಿಳಿಸಲಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದೀರಿ. ಈ ಯೋಜನೆಯಲ್ಲಿ ಹಲವು ಲೋಪಗಳಿವೆ. ಅವುಗಳನ್ನು ಸರಿಪಡಿಸಲು ಸಮಿತಿಯನ್ನು ರಚನೆ ಮಾಡಲಾಗಿದೆ. ಮೂರು ತಿಂಗಳಿನಲ್ಲಿ ಹೊಸ ಸ್ವರೂಪದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.
ತೊಗರಿ ಬೇಳೆ ಖರೀದಿ ಬಗ್ಗೆ ಪ್ರಶ್ನೆ ಮಾಡಿದ್ದೀರಿ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ತೊಗರಿ ಬೇಳೆ ಉತ್ಪಾದನೆ ಹೆಚ್ಚಾಗಿದೆ. ಸರ್ಕಾರ ಅದನ್ನು ಖರೀದಿ ಮಾಡುತ್ತಿದೆ. ರೈತರಿಗೆ ನ್ಯಾಯುತ ಬೆಲೆ ಸಿಗವಂತಾಗಲು ದಲ್ಲಾಳಿಗಳ ಹಾವಳಿ ತಪ್ಪಿಸಿದೆ.
ಕೇಂದ್ರ ಸರ್ಕಾರ ಯಾವುದೇ ಉದ್ಯಮಿಗಳು, ಕಂಪನಿಗಳ ಸಾವನ್ನು ಮನ್ನಾ ಮಾಡಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲು ಬರಲಿ ಎಂದು ಅಮಿತ್ ಶಾ ಆಹ್ವಾನ ನೀಡಿದರು.












Click it and Unblock the Notifications