"ನಿಮಗೆ, ನಮಗೆ ಬೇರೆ ಪರ್ಯಾಯ ಆಯ್ಕೆಯೇ ಇಲ್ಲ"
ನವದೆಹಲಿ, ಜನವರಿ 01: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ನಮ್ಮ ಬೇಡಿಕೆಗಳು ಪೂರೈಸುವವರೆಗೂ ನಾವು ಹಿಂತಿರುಗುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಈ ಕುರಿತು ಡಿಸೆಂಬರ್ 30ರಂದು ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಮಾತುಕತೆ ನಡೆದಿದ್ದು, ರೈತರ ನಾಲ್ಕು ಬೇಡಿಕೆಗಳಲ್ಲಿ ಎರಡು ಬೇಡಿಕೆಗಳಿಗೆ ಒಮ್ಮತಕ್ಕೆ ಬರಲಾಗಿದೆ. ಜನವರಿ 4ಕ್ಕೆ ಮುಂದಿನ ಚರ್ಚೆಯನ್ನು ನಿಗದಿಪಡಿಸಿದ್ದು, ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಸಂಯುಕ್ತ ಕಿಸಾನ್ ಮೋರ್ಚ ಸಂಘದ ಸದಸ್ಯರು ಶುಕ್ರವಾರ ಸಭೆ ನಡೆಸಿದ್ದಾರೆ. ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ಸುಮಾರು 40 ರೈತ ಸಂಘಟನೆಗಳು ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಮುಂದೆ ಓದಿ...

ಬಗೆಹರಿಯದ ಎರಡು ವಿಷಯಗಳು
ಡಿ.30ರಂದು ನಡೆದ ಚರ್ಚೆಯಲ್ಲಿ ವಿದ್ಯುತ್ ಹಾಗೂ ಕೃಷಿ ತ್ಯಾಜ್ಯ ಸುಡುವ ಸಂಬಂಧ ರೈತರು ಹಾಗೂ ಕೇಂದ್ರ ಸರ್ಕಾರ ಒಮ್ಮತಕ್ಕೆ ಬಂದಿದ್ದಾರೆ. ಆದರೆ ಕನಿಷ್ಠ ಬೆಂಬಲ ಬೆಲೆ ಹಾಗೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.

"ಪ್ರತಿಭಟನೆ ಹಿಂತೆಗೆದುಕೊಳ್ಳುವ ಮಾತಿಲ್ಲ"
ಈ ಎರಡೂ ಬೇಡಿಕೆಗಳು ರೈತರ ಪಾಲಿಗೆ ಮಹತ್ವವಾಗಿದ್ದು, ಇವುಗಳನ್ನು ಸರ್ಕಾರ ಪರಿಗಣಿಸದೇ ಇದ್ದರೆ ತಿಂಗಳುಗಟ್ಟಲೆ ನಡೆಸಿರುವ ಈ ಪ್ರತಿಭಟನೆಯನ್ನು ವರ್ಷದವರೆಗೂ ಮುಂದುವರೆಸಲಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

"ನಮ್ಮ ಬೇಡಿಕೆಗೆ ಬೇರೆ ಪರ್ಯಾಯವೇ ಇಲ್ಲ"
ಸರ್ಕಾರಕ್ಕೆ ನಾವು ಒಂದು ವಿಷಯವನ್ನು ಮನದಟ್ಟು ಮಾಡಲೇಬೇಕಿದೆ. ನಮ್ಮ ಈ ಎರಡು ಪ್ರಮುಖ ಬೇಡಿಕೆಗಳಿಗೆ ಪರ್ಯಾಯವಾಗಿ ಬೇರೆ ಯಾವ ಆಯ್ಕೆಯೂ ಇಲ್ಲ. ಈ ಬೇಡಿಕೆಗಾಗಿಯೇ ನಾವು ತಿಂಗಳುಗಟ್ಟಲೆ ಈ ಮೈಕೊರೆಯುವ ಚಳಿಯಲ್ಲಿ ರಸ್ತೆಗಳ ಮೇಲೆ ಪ್ರತಿಭಟನೆಗೆ ಕುಳಿತಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಇದೇ ಬೇಡಿಕೆಯನ್ನು ಮತ್ತೆ ಮುಂದಿಡುತ್ತೇವೆ"
ಈ ಕಾಯ್ದೆಗಳನ್ನು ಹಿಂಪಡೆಯುವುದಕ್ಕೆ ಬೇರೆ ಪರ್ಯಾಯವನ್ನು ಕೇಂದ್ರ ಸರ್ಕಾರ ಕೇಳಿದ್ದು, ಇದಕ್ಕೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಉತ್ತರಿಸಿ, "ಇದಕ್ಕೆ ಪರ್ಯಾಯ ಬೇಡಿಕೆ ಇಲ್ಲವೇ ಇಲ್ಲ. ಈ ಬೇಡಿಕೆಯನ್ನು ಹಿಂಪಡೆಯಲು ಸಾಧ್ಯವೇ ಇಲ್ಲ. ಜನವರಿ 4ರಂದು ಇದೇ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತೇವೆ. ನಮ್ಮ ನಿರ್ಧಾರದಿಂದ ಅಚಲವಾಗುವ ಮಾತೇ ಇಲ್ಲ ಎಂದಿದ್ದಾರೆ.












Click it and Unblock the Notifications