ದೆಹಲಿ ರೈತ ಚಳುವಳಿ: ಮರಬಗ್ಗಿ ಶಿರದ ಮೇಲೆ ಒರಗಿತು ಹರಿಯೇ…!
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ರೈತ ಸಂಘದ ಕಾರ್ಯಕರ್ತರು ಯಾವ ರೀತಿಯಾಗಿರಬೇಕು ಎಂದು ಕೆಲವು ನೀತಿ-ನಿಯಮಗಳನ್ನು ರೂಪಿಸಿದ್ದರು. ಅವುಗಳಲ್ಲೊಂದು ಹೀಗಿದೆ.
"ಈಗ ಆಗಲೇಬೇಕಾಗಿರುವ ಕೆಲಸವೆಂದರೆ ಎಂದೆಂದಿಗೂ ಸಣ್ಣತನಕ್ಕಿಳಿಯದ ಕಾರ್ಯಕರ್ತರ ನಿರ್ಮಾಣ"- "Low Aim is Crime ಎಂದು ತಿಳಿದಿರಬೇಕು.' ಪ್ರಸ್ತುತ ದೆಹಲಿಯ ರೈತ ಚಳುವಳಿಯ ಸುತ್ತಣ ವಿದ್ಯಮಾನಗಳನ್ನು ಗಮನಿಸಿದಾಗ ಪ್ರೊ. ಹೇಳಿದ್ದ ಮಾತು ನೆನಪಾಯಿತು.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಯನ್ನು ದಿಕ್ಕು ತಪ್ಪಿಸುವಂತಹ "scripted" ಘಟನೆಯೊಂದು ನಿನ್ನೆ ನಡೆದಿದೆ. ತೆಲಂಗಾಣ, ಮಹಾರಾಷ್ಟ್ರ, ಬಿಹಾರ, ಹರಿಯಾಣ, ತಮಿಳುನಾಡಿನ ಕೆಲವು ರೈತ ಮುಖಂಡರು ಈಗ ಕೇಂದ್ರ ಸರ್ಕಾರ ತಂದಿರುವ ಮೂರೂ ಕಾಯಿದೆಗಳಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಈ ಕಾಯ್ದೆಗಳನ್ನು ಮುಂದುವರೆಸಿ, ಹೋರಾಟ ನಿರತ ರೈತರನ್ನು ಹಿಮ್ಮೆಟ್ಟಿಸಿ, ಈ ಕಾಯಿದೆಗಳ ಅನುಕೂಲಗಳನ್ನು ರೈತರಿಗೆ ಮನದಟ್ಟು ಮಾಡಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಹೆಚ್ಚು ಪ್ರಚಾರ ನೀಡಿ ಎಂದೆಲ್ಲಾ ಹೇಳಿ ಪತ್ರವೊಂದನ್ನು ನೀಡಿರುವ ಆಲ್ ಇಂಡಿಯಾ ಕಿಸಾನ್ ಕೋಆರ್ಡಿನೇಶನ್ ಕಮಿಟಿ ಹೊಸ ಕೃಷಿ ಕಾಯಿದೆಗಳನ್ನು ಸ್ವಾಗತಿಸಿದೆ.
ಆಲ್ ಇಂಡಿಯಾ ಕಿಸಾನ್ ಕೋಆರ್ಡಿನೇಶನ್ ಕಮಿಟಿಯ ಪತ್ರ ಸ್ವೀಕರಿಸಿದ ಕೇಂದ್ರ ಕೃಷಿ ಸಚಿವ ತೋಮರ್ ಹೊಸ ಕಾಯಿದೆಗಳಿಂದ ರೈತರ ಕಲ್ಯಾಣವಾಗುತ್ತದೆ ಎಂದು ಹೇಳಿದ್ದಾರೆ.
ಕೆಲವೇ ದಿನಗಳ ಹಿಂದೆ ಚಳುವಳಿ ನಿರತ ರೈತರನ್ನುದ್ದೇಶಿಸಿ ಮಾತನಾಡಿದ್ದ ನರೇಂದ್ರ ಸಿಂಗ್ ತೋಮರ್, ಕಾಯಿದೆಗಳಿಗೆ ಅಗತ್ಯ ತಿದ್ದುಪಡಿ ತರುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಚಳುವಳಿ ನಿರತ ರೈತರು ಕಾಯಿದೆಗಳನ್ನು ಹಿಂಪಡೆಯಿರಿ ಎಂದು ಪಟ್ಟುಹಿಡಿದಿದ್ದಕ್ಕೆ ಮತ್ತೆ ವಿಳಂಬ ನೀತಿ ಅನುಸರಿಸಿದ್ದು, ಎಲ್ಲರಿಗೂ ತಿಳಿದ ಸಂಗತಿ. ಇದೀಗ ನಿನ್ನೆ ಕಾಯಿದೆಗಳಿಂದಾಗುವ ರೈತರ ಕಲ್ಯಾಣದ ಮಾತುಗಳನ್ನಾಡುತ್ತಿದ್ದಾರೆ.

ಎಲ್ಲವೂ ಅಯೋಮಯ. Low aim is crime ಎಂದು ಇಡೀ ಜೀವಮಾನ ಬದುಕಿದ ಪ್ರೊ. ಎಂ.ಡಿ ನಂಜುಂಡಸ್ವಾಮಿ ಅವರ ಆದರ್ಶ ಮಾರ್ಗದಲ್ಲಿ ನಡೆಯುತ್ತಿರುವ ಚಳುವಳಿ ನಿರತ ರೈತರೆಲ್ಲಿ.? ಕೆಲವು ರೈತ ಮುಖಂಡರೇ ಸರ್ಕಾರದ ಪರ ನಿಂತು ಮಾತನಾಡುವ ರೈತ ಮುಖಂಡರೆಲ್ಲಿ? ದೇಶದ ಭವಿಷ್ಯ, ರೈತ ಮಕ್ಕಳ ಭವಿಷ್ಯ ಊಹಿಸಿಕೊಂಡರೆ ನಡುಗಿ ಹೋಗುತ್ತೇನೆ.
ಮರಬಗ್ಗಿ ಶಿರದ ಮೇಲೆ ಒರಗಿತು ಹರಿಯೇ...!












Click it and Unblock the Notifications