303 ಸೀಟುಗಳನ್ನು ಕೊಟ್ಟಿದ್ದೇ ಸುಧಾರಣೆ ಮಾಡಲು: ಕೃಷಿ ಸಚಿವ
ನವದೆಹಲಿ, ಡಿಸೆಂಬರ್ 16: ಕೃಷಿ ಕಾನೂನುಗಳ ರಚನೆಯು ಆರ್ಥಿಕ ಮತ್ತು ರಾಜಕೀಯವಾಗಿ ಬಹಳ ಮಹತ್ವದ್ದಾಗಿದ್ದು, ಕಾಯ್ದೆಗಳ ವಿಚಾರವಾಗಿ ನೀಡಲಾಗಿರುವ ತಿದ್ದುಪಡಿ ಪ್ರಸ್ತಾವಗಳ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಲು ಮಾತುಕತೆಗೆ ಬರುವಂತೆ ರೈತರಿಗೆ ಸರ್ಕಾರ ಆಹ್ವಾನ ನೀಡಲಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಕೇಂದ್ರದಲ್ಲಿನ ಸರ್ಕಾರಕ್ಕೆ ನೀಡಿರುವ 303 ಸೀಟುಗಳ ನಿಚ್ಚಳ ಬಹುಮತವು ಅಧಿಕಾರದಲ್ಲಿ ಇರಲು ಮಾತ್ರವಲ್ಲ, ಪರಿಣಾಮಕಾರಿ ಬದಲಾವಣೆ ತರಲು ನೀಡಲಾಗಿದೆ ಎಂದಿದ್ದಾರೆ.
ಮೊದಲ ಅವಧಿಯಲ್ಲಿ ಅಪನಗದೀಕರಣ ಮತ್ತು ಜಿಎಸ್ಟಿಗಳನ್ನು ಸುಧಾರಣೆಯಾಗಿ ತರಲಾಯಿತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದವು. ಆದರೆ ಆ ಸುಧಾರಣೆಗಳಿಗೆ 2019ರಲ್ಲಿ ಮತ್ತಷ್ಟು ಪ್ರಬಲ ಬಹುಮತದ ಕೊಡುಗೆಯನ್ನು ನೀಡಲಾಯಿತು ಎಂದು ಹೇಳಿದ್ದಾರೆ.

'ಮೊದಲ ಅವಧಿಯಲ್ಲಿಯೂ ಮೋದಿ ಸರ್ಕಾರ ಅನೇಕ ಸುಧಾರಣೆಗಳನ್ನು ಮಾಡಿತ್ತು. ಅಪನಗದೀಕರಣ ಮತ್ತು ಜಿಎಸ್ಟಿ ಬಳಿಕ ಈ ಸರ್ಕಾರದ ಕ್ಷಣಗಣನೆ ಆರಂಭವಾಗಿದೆ ಎಂದೇ ಅನೇಕರು ಹೇಳಿದ್ದರು. ಆದರೆ ಎರಡನೆಯ ಅವಧಿಯಲ್ಲಿ ಜನರು ಮೋದಿ ಅವರಿಗೆ ಮತ ಹಾಕಿದರು. 2014ರ 287 ಸೀಟುಗಳಿಗೆ ಹೋಲಿಸಿದರೆ 303ಸೀಟುಗಳನ್ನು ನೀಡಿದರು. ಇದರ ಅರ್ಥ ರಾಜಕೀಯ ಒತ್ತಡಗಳು, ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಮತಬ್ಯಾಂಕ್ ಪರಿಗಣನೆ ಮುಂತಾದ ಕಾರಣಗಳಿಂದ ಸುದೀರ್ಘವಾಗಿ ಕಡೆಗಣನೆಗೆ ಒಳಗಾಗಿದ್ದ ಸುಧಾರಣೆಗಳನ್ನು ಅವರು ನಡೆಸಲಿ ಎನ್ನುವುದು ಜನರ ಉದ್ದೇಶವಾಗಿತ್ತು' ಎಂದಿದ್ದಾರೆ.
'ತಮ್ಮ ಒಳಿತಿಗಾಗಿ ಇಲ್ಲ ಎಂದೆನಿಸುವ ಕಾನೂನಿನ ಕೆಲವು ನಿಯಮಗಳನ್ನು ಪರಾಮರ್ಶಿಸಲು ನಾವು ಸಿದ್ಧರಿದ್ದೇವೆ. ಆದರೆ ಅವರು ಪ್ರತಿ ನಿಯಮದಿಂದ ನಿಯಮದ ಆಧಾರದಲ್ಲಿ ಕಾನೂನಿನ ಬಗ್ಗೆ ಚರ್ಚಿಸಲು ಬಯಸುತ್ತಿಲ್ಲ. ಚರ್ಚೆಯ ಬಳಿಕ ನನಗೆ ಅರ್ಥವಾಗಿದ್ದೇನೆಂದರೆ ಅವರು ಕೂಳೆಗಳ ಸುಡುವಿಕೆ ಮತ್ತು ವಿದ್ಯುತ್ ಬಿಲ್ನಂತಹ ಇತರೆ ವಿಚಾರಗಳ ಬಗ್ಗೆ ಚಿಂತೆಗೀಡಾಗಿದ್ದಾರೆ. ಅದರ ಬಗ್ಗೆಯೂ ನಾವು ಚರ್ಚಿಸಲು ಸಿದ್ಧ' ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ತೋಮರ್ ಹೇಳಿದ್ದಾರೆ.












Click it and Unblock the Notifications