ಹವಾಮಾನ ಆಧಾರಿತ ಬೆಳೆ ವಿಮೆ; ಅಡಿಕೆ, ಕಾಳು ಮೆಣಸು ಸೇರಿಸಲು ಒತ್ತಾಯ
ಬೆಂಗಳೂರು, ಜೂನ್ 27; ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಅಡಿಕೆ, ಕಾಳು ಮೆಣಸು ಬೆಳೆಗಳನ್ನು ಸೇರಿಸಬೇಕು ಎಂದು ತೋಟಗಾರಿಕಾ ಇಲಾಖೆಗೆ ಒತ್ತಾಯಿಸಲಾಗಿದೆ. ಈ ಕುರಿತು ಮಾಜಿ ಸಚಿವರು ಇಲಾಖೆಯ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ.
ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಕೋಟ ಶ್ರೀನಿವಾಸ ಪೂಜಾರಿ ತೋಟಗಾರಿಕೆ ಇಲಾಖೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಈ ಕುರಿತು ಒತ್ತಾಯಿಸಿದ್ದಾರೆ. ವಿಮೆ ಯೋಜನೆ ವ್ಯಾಪ್ತಿಗೆ ಅಡಿಕೆ, ಕಾಳು ಮೆಣಸು ಬೆಳೆಗಳನ್ನು ಸೇರಿಸಲು ಆಗ್ರಹಿಸಿದ್ದಾರೆ.

ಒಟ್ಟು ಎರಡು ಮಾದರಿಯ ಬೆಳೆ ವಿಮೆ ಯೋಜನೆಗಳು ಸದ್ಯ ಜಾರಿಯಲ್ಲಿವೆ. ಕೇಂದ್ರ ಸರ್ಕಾರ ಬೆಳೆ ವಿಮೆ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ನಿವಾರಿಸಲು 'ಪ್ರಧಾನ ಮಂತ್ರಿ ಬೆಳೆ ಬೀಮೆ ಯೋಜನೆ' ಮತ್ತು 'ಪುನಾರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ' ಅನ್ನು ಪುನರುಜ್ಜೀವನಗೊಸಲು ಅನುಮೋದನೆ ಕೊಟ್ಟಿತ್ತು.
ಪತ್ರದಲ್ಲಿನ ವಿವರಗಳು; ಕೋಟ ಶ್ರೀನಿವಾಸ ಪೂಜಾರಿ ಅವರು ಆಯುಕ್ತರಿಗೆ ಬರೆದ ಪತ್ರದಲ್ಲಿ ಫಸಲ್ ಭೀಮಾ ಯೋಜನೆಯಡಿ ಹವಾಮಾನ ಆಧಾರಿತ ಬೆಳೆ ವಿಮೆಗೆ ಜೂನ್ 30ರ ದಿನಾಂಕ ನಿಗದಿಗೊಳಿಸಲಾಗಿತ್ತು. ಅರ್ಜಿ ಸ್ವೀಕಾರಕ್ಕೆ ಜೂನ್ 24ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ರೈತರು ದೂರುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೀಗ ಬೆಳೆ ವಿಮೆ ಯೋಜನೆಗೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಕೋರುತ್ತಿದ್ದು ಮತ್ತು ಫಸಲ್ ಭೀಮಾ ಯೋಜನೆಯ ವ್ಯಾಪ್ತಿಯಲ್ಲಿ ಅಡಿಕೆ ಮತ್ತು ಕಾಳು ಮೆಣಸಿನ ಬೆಳೆಗಳನ್ನು ಕೈಬಿಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಿಂದಿನಂತೆ ಅಡಿಕೆ ಮತ್ತು ಕಾಳು ಮೆಣಸಿನ ಬೆಳೆಗಳನ್ನು ಸೇರ್ಪಡೆಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಎರಡೂ ಬೆಳೆಗಳನ್ನು ಸೇರಿಸಿ ಫಸಲ್ ಭೀಮಾ ಯೋಜನೆಯ ಅರ್ಜಿಯ ದಿನಾಂಕವನ್ನು ವಿಸ್ತರಣೆ ಮಾಡಬೇಕು ಎಂದು ಈ ಮೂಲಕ ಕೋರಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬೆಳೆ ವಿಮೆ ಯೋಜನೆಯ ಸಮಸ್ಯೆಗಳ ಬಗ್ಗೆ ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ವಿಟ್ಲ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಮಹಾಭಲೇಶ್ವರ ಭಟ್ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನ ಸೆಳೆದಿದ್ದರು. ಬಳಿಕ ಈ ಪತ್ರವನ್ನು ಬರೆದಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ; ಕೃಷಿ ಇಲಾಖೆ ಈಗಾಗಲೇ ರಾಜ್ಯದ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಲು ಕರೆ ನೀಡಿದೆ. ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ಹೇಳಿದೆ.
ಯೋಜನೆಯಡಿ ತಿಳಿಸಿರುವ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ) ಹಾಗೂ ಹೋಬಳಿ ಮಟ್ಟದಲ್ಲಿ ತಿಳಿಸಿರುವ ಬೆಳೆಗಳಾದ ಜೋಳ (ನೀರಾವರಿ/ ಮಳೆಯಾಶ್ರಿತ), ರಾಗಿ (ಮಳೆಯಾಶ್ರಿತ), ಸಜ್ಜೆ (ನೀರಾವರಿ/ ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ತೊಗರಿ (ನೀರಾವರಿ/ ಮಳೆಯಾಶ್ರಿತ), ಉರುಳಿ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ/ ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ಹತ್ತಿ (ನೀರಾವರಿ/ ಮಳೆಯಾಶ್ರಿತ), ನೆಲಗಡಲೆ (ನೀರಾವರಿ/ ಮಳೆಯಾಶ್ರಿತ), ಈರುಳ್ಳಿ (ನೀರಾವರಿ), ಕೆಂಪು ಮೆಣಸಿನಕಾಯಿ (ನೀರಾವರಿ) ಇವು ಬಳ್ಳಾರಿ ಜಿಲ್ಲೆಯ ಬೆಳೆಗಳಾಗಿವೆ. ಆಯಾ ಜಿಲ್ಲೆಗಳಲ್ಲಿ ನಿಗದಿಪಡಿಸಿದ ಬೆಳೆಗಳಿಗೆ ವಿಮೆ ಸೌಲಭ್ಯ ಇರುತ್ತದೆ.
ಬೆಳೆ ವಿಮೆಯನ್ನು ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕ ಭತ್ತಕ್ಕೆ (ನೀರಾವರಿ) ಆ.16, ಮುಸುಕಿನ ಜೋಳಕ್ಕೆ (ನೀರಾವರಿ/ ಮಳೆಯಾಶ್ರಿತ) ಜು.31, ಜೋಳಕ್ಕೆ (ನೀರಾವರಿ/ ಮಳೆಯಾಶ್ರಿತ) ಜು.31, ಸೂರ್ಯಕಾಂತಿಗೆ (ನೀರಾವರಿ/ ಮಳೆಯಾಶ್ರಿತ) ಜು.31, ತೊಗರಿಗೆ (ನೀರಾವರಿ) ಜು.31, ತೊಗರಿಗೆ (ಮಳೆಯಾಶ್ರಿತ) ಆ.16, ಹತ್ತಿ ಬೆಳೆಗೆ (ನೀರಾವರಿ/ ಮಳೆಯಾಶ್ರಿತ) ಜು.31, ಕೆಂಪು ಮೆಣಸಿನಕಾಯಿ ಬೆಳೆಗೆ (ನೀರಾವರಿ/ ಮಳೆಯಾಶ್ರಿತ) ಜು.31, ಈರುಳ್ಳಿ (ನೀರಾವರಿ) ಜು.31, ರಾಗಿ (ಮಳೆಯಾಶ್ರಿತ) ಆ.16, ನವಣೆ (ಮಳೆಯಾಶ್ರಿತ) ಆ.16, ಹುರುಳಿ (ಮಳೆಯಾಶ್ರಿತ) ಆ.16, ನೆಲಗಡಲೆ (ನೀರಾವರಿ/ ಮಳೆಯಾಶ್ರಿತ) ಆ.16, ಸಜ್ಜೆ ಬೆಳೆಗೆ (ನೀರಾವರಿ/ ಮಳೆಯಾಶ್ರಿತ) ಆ.16 ಕೊನೆಯ ದಿನಾಂಕವಾಗಿದೆ.












Click it and Unblock the Notifications