ಜೇನು ಸಾಕಣೆ : ದೊಡ್ಡಬಳ್ಳಾಪುರದ ರೈತನ ಸಾಧನೆ!
ದೊಡ್ಡಬಳ್ಳಾಪುರ, ಫೆಬ್ರವರಿ 4 : ಓದಿರುವುದು ಕೇವಲ 4ನೇ ಕ್ಲಾಸ್. ಪಾಠ ಮಾಡುವುದು ಪದವಿ, ಪಿಎಚ್ಡಿ ವಿದ್ಯಾರ್ಥಿಗಳಿಗೆ. ಜೇನು ಸಾಕಣಿಕೆಯ ಪ್ರೊಫೆಸರ್ ಎಂದು ಇವರನ್ನು ಕರೆಯಲಾಗುತ್ತದೆ. ಇವರ ಮಾತು ಕೇಳುವುದಕ್ಕೆ ವಿದೇಶದಿಂದಲೂ ವಿದ್ಯಾರ್ಥಿಗಳು ಬರುತ್ತಾರೆ.
ಮರದ ಕೊಂಬೆ, ಪಾಳು ಬಿದ್ದ ಮಡಿಕೆ, ಮರದ ಪೊಟರೆ ಹೀಗೆ ಅನೇಕ ಕಡೆ ಜೇನುಗೂಡು ಕಾಣಸಿಗುತ್ತದೆ. ಜೇನು ಕಂಡರೇ ದೂರ ಹೋಗುವ ಜನರೇ ಹೆಚ್ಚು. ಆದರೆ, ಈ ಮನೆಯ ಸುತ್ತಮುತ್ತ ಜೇನು ಲೋಕ ಅನಾವರಣಗೊಂಡಿದೆ. ಬಯಲು ಸೀಮೆಯಲ್ಲಿ ಜೇನು ಸಾಕಾಣಿಕೆ ಮಾಡಿ ಲಕ್ಷ್ಮೇಗೌಡ ಇತರರಿಗೆ ಮಾದರಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕುಂಟನಹಳ್ಳಿಯ ಲಕ್ಷ್ಮೇಗೌಡ ಅವರು ಹವ್ಯಾಸಕ್ಕಾಗಿ ಜೇನು ಸಾಕಾಣಿಕೆ ಕಲಿತರು. ಇಂದು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಾಠ ಮಾಡುವಷ್ಟು ಪ್ರವೀಣ್ಯತೆ ಪಡೆದಿದ್ದಾರೆ.

ಜೇನು ಹುಳು ಹಿಡಿಯುವುದು, ಸಾಕಾಣಿಕೆ ಮಾಡುವುದು, ಹುಳುಗಳನ್ನು ಮತ್ತೊಂದು ಕಡೆಗೆ ಸಾಗಿಸುವುದು ಸೇರಿದಂತೆ ಜೇನು ಸಾಕಾಣಿಕೆಯ ಬಗ್ಗೆ ಇವರು ಪಾಠ ಮಾಡುತ್ತಾರೆ. ಪ್ರಾಯೋಗಿಕ ಪಾಠವನ್ನು ಕೇಳಲು ಬೆಂಗಳೂರು ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ಮಾತ್ರವಲ್ಲ ಜರ್ಮನಿ, ಥಾಯ್ಲೆಂಡ್, ಶ್ರೀಲಂಕಾ ಸೇರಿದಂತೆ ವಿವಿಧ ದೇಶದ ವಿದ್ಯಾರ್ಥಿಗಳು ಆಗಮಿಸುತ್ತಾರೆ.
ಲಕ್ಷ್ಮೇಗೌಡರ ಜೇನು ಸಾಕಾಣಿಕೆಗೆ ಅವರ ತಾಯಿಯೇ ಪ್ರೇರಣೆ. ಚಿಕ್ಕ ವಯಸ್ಸಿನಲ್ಲಿ ತಾಯಿ ಮಾಡುತ್ತಿದ್ದ ಜೇನು ಸಾಕಾಣಿಯನ್ನು ನೋಡುತ್ತಿದ್ದ ಗೌಡರು ಮುಂದೆ ಅದನ್ನೇ ಕಾಯಕ ಮಾಡಿಕೊಂಡರು. ಕಳೆದ 35 ವರ್ಷಗಳಿಂದ ಜೇನು ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದು ವರ್ಷಕ್ಕೆ 40ರಿಂದ 50 ಕೆ.ಜಿ. ಜೇನುತುಪ್ಪವನ್ನು ತೆಗೆಯುತ್ತಾರೆ.

ಲಕ್ಷಕ್ಕೂ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ. ತಮಗೆ ಸೇರಿದ 4 ಎಕರೆಯ ಜಮೀನಿನಲ್ಲಿ ವ್ಯವಸಾಯ ಮಾಡುವುದರ ಜೊತೆಗೆ ಬಿಡುವು ಸಿಕ್ಕಾಗ ಜೇನು ಸಾಕಾಣಿಕೆಯಲ್ಲಿ ತೊಡಗುತ್ತಾರೆ.
'ಎರೆ ಹುಳು ಹೇಗೆ ರೈತನ ಮಿತ್ರನಾಗಿ ಕೆಲಸ ಮಾಡುತ್ತವೆಯೋ ಹಾಗೆಯೇ ಜೇನು ಹುಳುಗಳು ಕೂಡ ರೈತನ ಆಪ್ತಮಿತ್ರ. ಯಾವುದೇ ಬೆಳೆಯನ್ನು ಬೆಳೆದರೂ ಅದು ಹೂ ಬಿಟ್ಟು, ಕಾಯಿ ಕಟ್ಟಿ ಫಸಲು ಬರಲು ಜೇನು ಹುಳಗಳ ಅಗತ್ಯವಿದೆ. ಜೇನು ಹುಳುಗಳು ಪ್ರಕೃತಿ ಸಹಜವಾಗಿ ಪರಾಗಸ್ವರ್ಶ ಮಾಡುವುದರಿಂದ ಹೊಲ ಮತ್ತು ತೋಟದಲ್ಲಿ ಫಸಲು ಬರುತ್ತದೆ' ಎನ್ನುತ್ತಾರೆ.

ಮಳೆ ಬರದೆ ಬೆಳೆ ಕೈ ಕೊಟ್ಟಾಗ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿದ್ದಾಗ ಕೃಷಿಗೆ ಸಹವಾಸ ಬೇಡ ಎನ್ನುವ ರೈತರೇ ಹೆಚ್ಚು. ಆದರೆ, ಕೃಷಿಯ ಜೊತೆಯಲ್ಲಿಯೇ ಜೇನು ಸಾಕಾಣಿಕೆ. ಕುರಿ, ಮೇಕೆ, ಮೊಲ ಸಾಕಾಣಿಕೆಯಂತಹ ಉಪ ಕಸುಬನ್ನು ಮಾಡುವುದರಿಂದ ನಷ್ಟ ಉಂಟಾಗುವುದನ್ನು ತಡೆಯಬಹುದು.












Click it and Unblock the Notifications