ಶ್ರೀಸಾಮಾನ್ಯ ಕನ್ನಡಿಗನಿಂದ ಮಹದಾಯಿ ನ್ಯಾಯಾಧಿಕರಣ ತೀರ್ಪಿನ ವಿಶ್ಲೇಷಣೆ
ಕೊನೆಗೂ ಮಹದಾಯಿ ಜಲವಿವಾದ ನ್ಯಾಯಮಂಡಳಿಯು ತನ್ನ ಐತೀರ್ಪನ್ನು ನೀಡಿ ಕರ್ನಾಟಕಕ್ಕೆ ಒಟ್ಟು 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ.
ಕಳಸಾ ನಾಲೆಯಿಂದ 1.72 ಟಿಎಂಸಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ, ಮಹದಾಯಿ ಜಲನಯನ ಪ್ರದೇಶದ ವ್ಯಾಪ್ತಿಯಲ್ಲಿ ಬಳಕೆ ಮಾಡಲು 1.50 ಟಿಎಂಸಿ ನೀರು ಹಾಗೂ ವಿದ್ಯುಚ್ಛಕ್ತಿಗೆ ಉತ್ಪಾದನೆಗೆ 8.02 ಟಿಎಂ ನೀರು ಬಳಸಿಕೊಳ್ಳುವಂತೆ ಹಂಚಿಕೆ ಮಾಡಿದೆ.
ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕೇವಲ 5.5 ಟಿಎಂಸಿ ಹಂಚಿಕೆ ಮಾಡಿದೆ. ಈ ಪೈಕಿ ಮಲಪ್ರಭಾ ಡ್ಯಾಂಗೆ 4 ಟಿಎಂಸಿ ನೀರು ಬಿಡಬೇಕು ಎಂದು ಹೇಳಿದೆ.
ಹುಬ್ಬಳ್ಳಿ-ಧಾರವಾಡ ನಗರ ಮತ್ತು ಗದಗ ಜಿಲ್ಲೆಯ ನರಗುಂದ ನವಲಗುಂದ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಹದಾಯಿ ನದಿಯಿಂದ ಮಲಪ್ರಭಾ ನದಿ ಕಣಿವೆಯ ಜಲಾಶಯಕ್ಕೆ ನೀರು ತಿರುಗಿಸುವ ಕರ್ನಾಟಕದ ಪ್ರಸ್ತಾಪಕ್ಕೆ ನ್ಯಾಯ ಮಂಡಳಿ ಒಪ್ಪಿಗೆ ನೀಡಿದೆ.

ಗೋವಾಕ್ಕೆ ತೀರ್ಪಿನಿಂದ ಮುಖಭಂಗ
ಕರ್ನಾಟಕಕ್ಕೆ ಮಹದಾಯಿಯಿಂದ ಒಂದು ಹನಿ ನೀರು ಕೊಡಲ್ಲ ಎಂದ ಗೋವಾ ರಾಜ್ಯಕ್ಕೆ ತೀರ್ಪಿನಿಂದ ಮುಖಭಂಗವಾಗಿದೆ. 1000 ಕ್ಕೂ ಹೆಚ್ಚು ದಿನಗಳು ಮಾಡಿದ ಅಹಿಂಸಾತ್ಮಕ ಹೋರಾಟಕ್ಕೆ ವಿಜಯ ಸಿಕ್ಕಂತಾಗಿದೆ.

ನಮ್ಮ ಮನವಿ ಪೂರ್ಣ ಈಡೇರಿಲ್ಲ
ಕುಡಿಯುವ ಉದ್ದೇಶಕ್ಕಾಗಿ 7.5 ಟಿಎಂಸಿ ನೀರು ಹಂಚಿಕೆ ಮಾಡುವಂತೆ ಕರ್ನಾಟಕ ನ್ಯಾಯಮಂಡಳಿಗೆ ಮನವಿ ಮಾಡಿತ್ತು. ಆದರೆ ಕುಡಿಯುವ ನೀರಿಗಾಗಿ ಸದ್ಯಕ್ಕೆ 5.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿರುವುದು ಸಂಪೂರ್ಣ ತೃಪ್ತಿ ಇಲ್ಲದಿದ್ದರೂ ಸಮಾಧಾನಕರ ತೀರ್ಪಾಗಿದೆ ಎಂದು ಮಹದಾಯಿ ನದಿಯ ನೀರಿಗಾಗಿ ಎಡಬಿಡದೆ ಹೋರಾಡಿದ ನಾಡಿನ ರೈತ ಮುಖಂಡರ ಅನಿಸಿಕೆ.

ಮೇಲ್ಮನವಿ ಸಲ್ಲಿಸಬೇಕು
ಆದರೂ ಕರ್ನಾಟಕ ರಾಜ್ಯ ಸರ್ಕಾರ ತೀರ್ಪಿನ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಕರ್ನಾಟಕವನ್ನು ಪ್ರತಿನಿಧಿಸಿದ ವಕೀಲರು, ರೈತ ಮುಖಂಡರು ಹಾಗೂ ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಕರ್ನಾಟಕಕ್ಕೆ ನ್ಯಾಯಯುತವಾಗಿ ಸಿಗಬೇಕಾದ ನೀರನ್ನು ದೊರಕಿಸಲು ನ್ಯಯಾಲಯದಲ್ಲಿ ಹೋರಾಟವನ್ನು ಮುಂದುವರಿಸಬೇಕಿದೆ.

ಕಾಮಗಾರಿಯನ್ನು ಚುರುಕುಗೊಳಿಸಬೇಕು
ಮಹದಾಯಿಯಿಂದ ಮಲಪ್ರಭಾ ಕಣಿವೆಗೆ ನೀರು ಪೂರೈಸುವ ಕಾಲುವೆಗಳನ್ನು ಹಾಗೂ ಇತರ ಕಾಮಗಾರಿಗಳನ್ನು ಇನ್ನು ತಡ ಮಾಡದೆ ಬೇಗ ಮಾಡಿ ಮುಗಿಸಿ ನಮಗೆ ದೊರೆತಿರುವ ನೀರಿನ ಪಾಲನ್ನು ಸದುಪಯೋಗಪಡಿಸಿಕೊಳ್ಳುವ ಇಚ್ಛಾ ಶಕ್ತಿಯನ್ನು ಸರ್ಕಾರ ತೋರಿಸಬೇಕು.

ಮಲಪ್ರಭಾಗೆ ಕೃಷ್ಣಾ ನದಿಯಿಂದ ನೀರು
ಇದರ ಜೊತೆಗೆ ಮಲಪ್ರಭಾ ನದಿ ಕಣಿವೆಗೆ ಕೃಷ್ಣ ನದಿಯಿಂದ ನೀರು ತಿರುಗಿಸಲು ನೀರಾವರಿ ತ್ಯಜ್ಞರೊಡನೆ ಚರ್ಚಿಸಿ ಯೋಜನೆ ಕೈಗೊಳ್ಳುವುದು ಒಳಿತು. ಮಲಪ್ರಭಾ ಕೃಷ್ಣ ನದಿಯ ಉಪನದಿ ಮತ್ತು ಕೃಷ್ಣ ಕಣಿವೆ ವ್ಯಾಪ್ತಿಗೆ ಬರುವುದರಿಂದ ಕೃಷ್ಣ ನದಿಯ ಹೆಚ್ಚುವರಿ ನೀರನ್ನು ಗದಗ ಧಾರವಾಡ ಜಿಲ್ಲೆಗಳ ಹಳ್ಳಿಗಳ ಕುಡಿಯುವ ನೀರು ಪೂರೈಸಲು ಶಾಶ್ವತ ಪರಿಹಾರ ರೂಪಿಸಿದಂತಾಗುತ್ತದೆ. ಆಗ ಮಾತ್ರ ಮಹದಾಯಿ ನದಿಯ ನೀರಿಗಾಗಿ ಪ್ರಾಣ ತೆತ್ತ ರೈತರ ಆತ್ಮಕ್ಕೆ ಶಾಂತಿ ಸಿಗುತ್ತದೆ.












Click it and Unblock the Notifications