ವಿಜಯಪುರದಲ್ಲಿ ಭಾರಿ ಗಾಳಿ ಮಳೆ: 2000 ಬಾಳೆ ಗಿಡ ನಾಶ
ವಿಜಯಪುರ, ಮೇ 7: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಬಾಳೆ ತೋಟ ನಾಶವಾಗಿದೆ.
ನಾಲತವಾಡ ಪಟ್ಟಣದ ರೇವಣಪ್ಪ ಕೆಂಭಾವಿ, ಮಡಿವಾಳಪ್ಪ ಕೆಂಭಾವಿ, ಅಡಿವೆಪ್ಪ ಕೆಂಭಾವಿ, ಶಂಕ್ರಪ್ಪ ಕೆಂಭಾವಿ, ನಾಗಪ್ಪ ಕೆಂಭಾವಿ, ತಿಪ್ಪಣ್ಣ ಕೆಂಭಾವಿ ಎಂಬ ರೈತರ ಎರಡು ಸಾವಿರ ಬಾಳೆ ಗಿಡಗಳು ನೆಲಕ್ಕೆ ಉರುಳಿವೆ.
ಮೊದಲೇ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆಗಿ ಬಾಳೆ ಬೆಳೆಗಾರರಿಗೆ ಮಾರುಕಟ್ಟೆ ಇಲ್ಲದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಾಳೆ ಮಾರಾಟವಾಗದೇ 10 ರುಪಾಯಿ ಡಜನ್ ಮಾರಾಟ ಮಾಡಿದ್ದರು. ಗಾಯದ ಮೇಲೆ ಬರೆ ಎಂಬಂತೆ ಈಗ ಭಾರಿ ಮಳೆ, ಗಾಳಿಗೆ ಬಾಳೆ ಗಿಡಗಳು ನೆಲಕ್ಕೆ ಉರುಳಿ ರೈತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿವೆ.

ರೈತರ ಲಕ್ಷಾಂತರ ರುಪಾಯಿ ಬೆಲೆಯ ಬಾಳೆ ನಾಶವಾಗಿರುವುದರಿಂದ ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಮೊರೆ ಹೋಗಿದ್ದಾರೆ. ಸ್ಥಳಕ್ಕೆ ತೋಟಗಾರಿಕೆ ಅಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications