Get Updates
Get notified of breaking news, exclusive insights, and must-see stories!

ಗುರ್ಜಿ ಅಲ್ಲಾಡಿ ಬಂದೆ.. ಸುರಿ ಮಳೆಯೇ

Savanur Gurji play
ಸವಣೂರು, ಜು.15: : "ಗುರ್ಜಿ ಗುರ್ಜಿ ಅಲ್ಲಾಡಿ ಬಂದೆ
ಹಳ್ಳ ಕೊಳ್ಳ ಸುತ್ತಾಡಿ ಬಂದೆ,
ಹಳ್ಳ ಕೊಳ್ಳ ಸುತ್ತಾಡಿ ಬಂದೆ,
ಎಲ್ಹೋದ್ಯೋ ಮಳೆರಾಯ"

ಎಂಬ ಸಾಮೂಹಿಕವಾದ ಗಾಯನದೊಂದಿಗೆ ಗುರ್ಜಿ ಹೊತ್ತ ಮಕ್ಕಳ ತಂಡ ಓಣಿಯಲ್ಲಿ ಹೊಂಟರೆ ತಕ್ಷಣಕ್ಕೆ ಮಳೆಯಾಗದಿದ್ದರೂ ರಸ್ತೆ ಮಾತ್ರ ಕೆಸರಾಗುತ್ತದೆ.

ರೈತರ ಪ್ರತಿಯೊಂದು ಮನೆ ಬಾಗಿಲಿಗೂ ಬರುವ ಗುರ್ಜಿಯ ತಲೆಯ ಮೇಲೆ ಕೊಡದಲ್ಲಿ ನೀರು ಸುರಿಯುವ ರೈತರು ತಡವಾದ ಮಳೆ ಇನ್ನಾದರೂ ಸುರಿಯಲಿ ಎಂದು ಮನದಲ್ಲಿಯೇ ಹಾರೈಸುತ್ತಾರೆ. ತಲೆಯ ಮೇಲೆ ತಣ್ಣೀರು ಬೀಳುತ್ತಿದ್ದಂತೆ ತಮ್ಮ ಹಾಡಿನೊಂದಿಗೆ ಗಿರಿಗಿರನೆ ಸುತ್ತುವ ಗುರ್ಜಿ ಹೊತ್ತ ಬಾಲಕ ಮಳೆಯ ಪ್ರತಿರೂಪವನ್ನೇ ಸೃಷ್ಟಿಸುತ್ತಾನೆ.

ಬುಧವಾರ ಸಂಜೆ ಸವಣೂರಿನ ಗೌಡ್ರ ಓಣಿಯಲ್ಲಿ ಆಚರಿಸಲಾದ ಗುರ್ಜಿ ಆಟ ಇತ್ತಿಚಿಗೆ ಅಪರೂಪವಾಗಿದ್ದರೂ, ಮಳೆ ಬೀಳದೆ ಕಂಗಾಲಾಗಿರುವ ರೈತರ ಮನಸ್ಸಿಗೆ ಮಾತ್ರ ತಂಪು ನೀಡಿತು. ಮಳೆಗಾಗಿ ಮಾಡುವ ಕಪ್ಪೆ ಮದುವೆ, ಕತ್ತೆ ಮೆರವಣಿಗೆ, ಮೋಡ ಬಿತ್ತನೆ ಮೊದಲಾದ ಹತ್ತಾರು ಆಚರಣೆ ವಿಧಾನಗಳ ನಡುವೆಯೂ ಗುರ್ಜಿ ಆಟ ಹೊಸತನವನ್ನು ಮೂಡಿಸಿತು.

ಏನಿದು ಗುರ್ಜಿ ? : ಸಕಾಲಿಕವಾದ ಮಳೆ ಬೀಳದ ಸಂದರ್ಭದಲ್ಲಿ ಒಟ್ಟುಗೂಡುವ ರೈತರ ಮಕ್ಕಳು, ಆಕಳ ಸಗಣಿಯಲ್ಲಿ ಗುರ್ಜಿಯನ್ನು (ಗುಪ್ಪೆ) ಸಿದ್ದಪಡಿಸಿಕೊಳ್ಳುತ್ತಾರೆ. ಬಳಿಕ ಕಟ್ಟು ಹಾಕಲಾದ ಬೇವಿನ ಸೊಪ್ಪಿನ ರಾಶಿಯ ಮೇಲೆ ಗುರ್ಜಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಇದಕ್ಕೆ 4-5 ಕಪ್ಪೆಗಳನ್ನೂ ಕಟ್ಟಲಾಗಿರುತ್ತದೆ. ಬಳಿಕ ಗುರ್ಜಿಯನ್ನು ಹೂಗಳಿಂದ ಅಲಂಕರಿಸಿ ಪೂಜೆಯನ್ನೂ ಸಲ್ಲಿಸಲಾಗುತ್ತದೆ. ಬಳಿಕ ಗುರ್ಜಿಯನ್ನು ಸಂಭ್ರಮದಿಂದ ಹೊತ್ತುಕೊಳ್ಳುವ ಮಕ್ಕಳು ಅದನ್ನು ಓಣಿಯಲ್ಲಿನ ಎಲ್ಲ ರೈತರ ಮನೆ ಬಾಗಿಲಿಗೆ ತರುತ್ತಾರೆ.

ಹಾಡಿನ ಕೋರಸ್ ಮುಂದುವರೆಸುವ ಮಕ್ಕಳು,
ಬಣ್ಣ ಕೊಡತೀನಿ ಬಾ ಮಳೆಯೇ
ಸುಣ್ಣ ಕೊಡತೀನಿ ಸುರಿ ಮಳೆಯೇ
ಹಗ್ಗಾ ಕೊಡತೀನಿ ಜಗ್ಗ ಮಳೆಯೇ
ಹಿಟ್ಟ ಕೊಡತೀನಿ ಕುಟ್ಟ ಮಳೆಯೇ

ಎನ್ನುತ್ತಿದ್ದಂತೆ ರೈತರ ಮನೆಗಳಲ್ಲಿ ಸಿದ್ದವಾಗಿ ಇಡಲಾಗಿದ್ದ ಬಿಂದಿಗೆ ನೀರನ್ನು ಗುರ್ಜಿಯ ಮೇಲೆ ಸುರಿಯಲಾಗುತ್ತದೆ. ನೀರು ತಲೆಯ ಮೇಲೆ ಬೀಳುತ್ತಿದ್ದಂತೆ ಗುರ್ಜಿ ಸಮೇತವಾಗಿ ಗಿರಗಿರನೇ ಸುತ್ತು ತಿರುಗುವ ಮಕ್ಕಳು, ಮಳೆಯ ಅನುಭವವನ್ನೇ ಹೊಂದುತ್ತಾರೆ.

ಬಳಿಕ ಮನೆಯವರು ನೀಡುವ ದವಸ ಧಾನ್ಯಗಳನ್ನು ಸಂಗ್ರಹಿಸುವ ಮಕ್ಕಳ ತಂಡ ಮುಂದಿನ ಮನೆಗೆ ಸಾಗುತ್ತದೆ. ಪುನಃ ನೀರಿನ ಅಭಿಷೇಕದೊಂದಿಗೆ ಹಾಡು, ಗಿರಿಗಿರಿ ಸುತ್ತುವಿಕೆ ಮುಂದುವರೆಯುತ್ತದೆ. ಹಲವು ಮನೆಗಳಲ್ಲಿ ಆಗುವ ಅಭಿಷೇಕದ ಬಳಿಕ ಗುರ್ಜಿ ಮತ್ತೊಬ್ಬನ ತಲೆಗೆ ಸ್ಥಳಾಂತರವಾಗುತ್ತದೆ.

ರೈತರ ಓಣಿಗಳಲ್ಲಿ ಮಾತ್ರ ನಡೆಯುವ ಈ ಆಟದ ಬಳಿಕ ಸಂಗ್ರಹಗೊಂಡ ಎಲ್ಲ ಧಾನ್ಯಗಳನ್ನು ಓಣಿಯಲ್ಲಿನ ಗುಡಿಗೆ ತರಲಾಗುತ್ತದೆ. ಅದರಿಂದ ಪ್ರಸಾದ ತಯಾರಿಸಿ ದೇವರಿಗೆ ಸಮರ್ಪಿಸಲಾಗುತ್ತದೆ. ಬಳಿಕ ದೇವರ ಪ್ರಸಾದವನ್ನು ಮನೆ ಮನೆಗೆ ತೆರಳಿ ಹಂಚಲಾಗುತ್ತದೆ. ಇದರೊಂದಿಗೆ ಗುರ್ಜಿ ಆಚರಣೆ ಪೂರ್ಣಗೊಳ್ಳುತ್ತದೆ.

ಕಳೆದ ಮೂರು ನಾಲ್ಕು ವರ್ಷಗಳಿಂದ ಅತಿವೃಷ್ಟಿ ಕಂಡಿರುವ ರೈತ ಸಮೂಹ ಈ ಬಾರಿ ಅನಾವೃಷ್ಟಿಯ ಭೀತಿಯಲ್ಲಿದೆ. ಮಾಡಲಾಗಿರುವ ಬಿತ್ತನೆಯೂ ಮೊಳಕೆಯೊಡೆದಿದ್ದು, ಪ್ರತಿನಿತ್ಯವೂ ಬಿರು ಬಿಸಿಲನ್ನು ಕಾಣುವಂತಾಗಿದೆ.

ಈ ಹಂತದಲ್ಲಿ ಮಳೆ ಸುರಿಯದಿದ್ದಲ್ಲಿ ರೈತ ಸಮೂಹ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಮುನಿಸಿಕೊಂಡಿರುವ ಮಳೆರಾಯ ಮಕ್ಕಳ ಕೂಗಿಗೂ ಬರುವನೇ ಎಂಬ ನಿರೀಕ್ಷೆ ರೈತ ಸಮುದಾಯದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+