Get Updates
Get notified of breaking news, exclusive insights, and must-see stories!

ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ

75th Kannada Sahitya Sammelana President L Basavaraju
ಕನ್ನಡ ಸಾಹಿತ್ಯ ಪರಿಷತ್ ಪರಂಪರೆಯಲ್ಲಿ ಇದುವರೆವಿಗೆ ಕನ್ನಡಿಗರು 74 ಸಮ್ಮೇಳನಾಧ್ಯಕ್ಷರ ಭಾಷಣವನ್ನು ಕೇಳಿದ್ದಾರೆ, ಓದಿದ್ದಾರೆ, ಮರೆತಿದ್ದಾರೆ. ಆದರೆ, ಚಿತ್ರಕಲ್ ದುರ್ಗ ಅಥವಾ ಚಿತ್ರದುರ್ಗದ ಬತೇರಿ ಮೇಲಿಂದ ಕೇಳಿಬರುತ್ತಿರುವ ಪ್ರೊ. ಎಲ್. ಬಸವರಾಜು ಅವರ ಭಾಷಣಕ್ಕೆ ಅಂಥ ದುರ್ಗತಿ ಬರದಿರಲೆಂದು ಆಶಿಸುತ್ತಾ ಅವರ ಸಾಹಿತ್ಯಿಕ ಮತ್ತು ಸಾಮಾಜಿಕ ಕಳಕಳಿಯ ನಿವೇದನೆಯನ್ನು ಕನ್ನಡ ಕುಲಕೋಟಿಯ ಒಡಲಲ್ಲಿ ಹಾಕುತ್ತಿದ್ದೇವೆ. ಸಾಹಿತ್ಯದ ಶಕ್ತಿಗೆ ಮನಸೋತವರು ಹಾಗೂ ಸಾಮಾಜಿಕ ಅಸಮತೋಲನದಿಂದ ಬೇಸತ್ತವರು ಅಗತ್ಯವಾಗಿ ಓದಿ, ಒಂದು ಪ್ರತಿಯನ್ನು ಮುದ್ರಿಸಿ ಇಟ್ಟುಕೊಳ್ಳಬಹುದಾದ ಭಾಷಣವಿದು- ಸಂಪಾದಕ

{75ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಚಿತ್ರದುರ್ಗ 2009 ಫೆಬ್ರವರಿ 4,5,6 ಮತ್ತು 7. ಸಮ್ಮೇಳನಾಧ್ಯಕ್ಷ. ಎಲ್. ಬಸವರಾಜು ಅವರ ಅಧ್ಯಕ್ಷ ಭಾಷಣದ ಪೂರ್ಣಪಾಠ}

ನಮ್ಮ ಕರ್ನಾಟಕದ ಕೆಲವು ಭಾಗಗಳೂ ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತೆಂಬುದನ್ನು ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಮತ್ತು ಕೊಪ್ಪಳದಲ್ಲಿ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ, ಸಿದ್ಧಾಪುರದಲ್ಲಿ ಮತ್ತು ಜಟ್ಟಿಂಗ ರಾಮೇಶ್ವರದಲ್ಲಿ ಸಿಕ್ಕಿರುವ ಅವನ ಬ್ರಾಹ್ಮೀಲಿಪಿಯ ಪ್ರಾಕೃತ ಭಾಷೆಯ ಶಾಸನಗಳು ದೃಢಪಡಿಸುತ್ತಿವೆ. ಮತ್ತು ಆ ಶಾಸನಗಳಲ್ಲಿ ಸ್ವತಃ ಅಶೋಕನೇ ಹೇಳಿಕೊಂಡಿರುವಂತೆ ಹೆಚ್ಚು ಶ್ರಮವಹಿಸಿ ಅವನು ತನ್ನನ್ನು ತಾನೇ ಧರ್ಮಸುಧಾರಣೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ ಜಂಬೂ ದ್ವೀಪದ ಯಾವ ಜನ ಬೌದ್ಧಧರ್ಮದೊಡನೆ ಬೆರೆಯಲಾಗಿರಲಿಲ್ಲವೋ ಅವರೆಲ್ಲಾ ಬೆರೆಯಲು ಸಾಧ್ಯವಾಯಿತೆಂದೂ ಈ ಧಾರ್ಮಿಕ ಸತ್ಫಲಗಳನ್ನು ಕೇವಲ ಉತ್ತಮ ಸ್ಥಿತಿಯಲ್ಲಿರುವವರೇ ಅಲ್ಲ ಕೆಳಸ್ಥಿತಿಯಲ್ಲಿರುವವರೂ ಪಡೆಯುವಂತಾಯಿತೆಂದೂ ಆಶಾದಾಯಕವಾಗಿ ಆ ಅಶೋಕನು ಆಡಿರುವ ಆ ಮಾತಿನಲ್ಲಿ ಕರ್ನಾಟಕದ ಅಸಂಖ್ಯಾತ ದಲಿತ ವರ್ಗದ ಜನರೂ ಬೌದ್ಧರಾಗಿದ್ದರೆಂಬುದನ್ನು ಸೂಚಿಸುತ್ತದೆ.

ಹೀಗಾಗಿ ದಲಿತರಿಗೆ ಈ ಬೌದ್ಧ ಧರ್ಮವಾದರೂ ಮಾನ್ಯತೆಯನ್ನು ಕೊಟ್ಟು ಅವರ ಆತ್ಮವಿಶ್ವಾಸವನ್ನೂ ಆತ್ಮಗೌರವವನ್ನೂ ಹೆಚ್ಚಿಸಲು ನೆರವಾಯಿತಲ್ಲಾ ಎನ್ನುವಂತಾದರೂ ಅದು ವೈದಿಕರಿಗೆ ಕಿರಿಕಿರಿಯನ್ನೇ ಉಂಟುಮಾಡಿದಂತಾಗಬಹುದು. ಅಶೋಕನು ತನ್ನ ಹಲವು ಶಾಸನಗಳಲ್ಲಿ ತನ್ನನ್ನು "ದೇವಾನಾಂ ಪ್ರಿಯ" ಎಂದು ಕರೆದುಕೊಂಡಿರುವುದನ್ನು ಆ ವೈದಿಕರು ಗೇಲಿ ಮಾಡುವುದು ನಡೆದೇ ಇತ್ತು! ಈಗಲೂ ಸಂಸ್ಕೃತದಲ್ಲಿ "ದೇವಾನಾಂ ಪ್ರಿಯ"ನೆಂದರೆ ಮೂರ್ಖನೆಂಬ ಅರ್ಥವಿದೆಯಂತೆ! ಆದ್ದರಿಂದ ಆ ವೈದಿಕರಿಗೆ ಬೌದ್ಧಧರ್ಮದ ಮೇಲೆ ಮತ್ತು ಅದರ ಪ್ರಚಾರಕರ ಮೇಲೆ ಏನೊಂದು ತಿರಸ್ಕಾರ ದ್ವೇಷವಿತ್ತೆಂಬುದನ್ನು ಊಹಿಸಬಹುದಾಗಿದೆ.

ಅದೇನೇ ಇರಲಿ, ಕರ್ನಾಟಕದಲ್ಲಿ ಕ್ರಿ.ಪೂ. ಮೂರನೇ ಶತಮಾನದಿಂದಲೂ ಬೌದ್ಧಧರ್ಮ ಎಲ್ಲ ಹಂತಗಳಲ್ಲಿ ಪ್ರಚುರವಾಗಿದ್ದಿತಾದರೂ ಆ ಧರ್ಮವನ್ನು ಪ್ರಚಾರ ಮಾಡಲು ಕನ್ನಡದಲ್ಲಿ ಆ ಯಾರೂ ಕಾವ್ಯಗಳನ್ನು ಬರೆಯಲಿಲ್ಲವೆಂದರೆ ಅದೊಂದು ಅಸಂಬದ್ಧ ತೀರ್ಮಾನವೇ ಆದೀತು.ಕಾಲಾಂತರದಲ್ಲಿ ಬೌದ್ಧಧರ್ಮವು ಭಾರತದಿಂದಲೇ ಪರದೇಶಿಯಾಗಿ ಹೋಯಿತೆಂದ ಮೇಲೆ ಕರ್ನಾಟಕದಲ್ಲಿಯಾದರೂ ಅದು ಆಗ ಕೇವಲ ಹೆಸರಿಗೆ ಮಾತ್ರ ಉಳಿದಿತ್ತೆಂಬುದರಲ್ಲಿ ಸತ್ಯಾಂಶವಿದೆ ಎನಿಸುವುದಾದರೂ, 9ನೇ ಶತಮಾನದ ಆ ಕವಿರಾಜಮಾರ್ಗ ಗ್ರಂಥದಲ್ಲಿ ಹೇಳಿರುವಂತೆ, ಆ ವೇಳೆಗಾಗಲೇ ವಿಮಲೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮುಂತಾದವರು ಕನ್ನಡ ಚಂಪೂ ಕಾವ್ಯಗಳನ್ನು ಬರೆದು "ಗದ್ಯಾಶ್ರಮ ಗುರುತಾ ಪ್ರತೀತಿ"ಯನ್ನು ಪಡೆದಿದ್ದರು ಎಂಬಲ್ಲಿ ಆ "ನಾಗಾರ್ಜುನ"ನೆಂಬವನಾದರೂ ಬೌದ್ಧಧರ್ಮಕ್ಕೆ ಸೇರಿದ ಒಬ್ಬ ಕನ್ನಡ ಕವಿಯಾಗಿರಲಾರನೇನು ಎಂಬುದೊಂದು ಅತ್ಯಾಶೆ!

ಆದರೇನು. ಹತ್ತನೇ ಶತಮಾನದ ನಮ್ಮ ಮಹಾಕವಿ ಪಂಪನು ಬರೆದ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯವೆಂಬ ಎರಡು ಕಾವ್ಯಗಳು ಅಂದಿನ ಕನ್ನಡ ಸಹೃದಯರಿಗೆ ಅದೆಷ್ಟು ರಸತೃಪ್ತಿಯನ್ನು ತಂದವೆಂದರೆ ಆ ಹಿಂದಿನ ಕನ್ನಡ ಕವಿಗಳ ಯಾವ ಕಾವ್ಯವಾಗಲಿ ನಾಮಾವಶೇಷವಾದ ಹಳಗನ್ನಡ ಗ್ರಂಥಗಳ ಪಟ್ಟಿಯಲ್ಲಿ ತಂತಮ್ಮ ಹೆಸರನ್ನು ಬರೆಸಿ ಹಾಗೇ ಮಂಗಮಾಯವಾಗಿ ಹೋದವು. ಅಸಗ (ಕ್ರಿ.ಶ.853), ಗುಣನಂದಿ (ಕ್ರಿ.ಶ.900), ಒಂದನೇ ಗುಣವರ್ಮ ಎಂದು ಮುಂತಾಗಿ ಆ ಪಟ್ಟಿಯೂ ಬೆಳೆಯುತ್ತಲೇ ಹೋದೀತು!

ಇದುವರೆಗೂ ನಾವು ಪ್ರಸ್ತಾಪಿಸಿದ ಕನ್ನಡ ಸಾಹಿತ್ಯವೆಲ್ಲವೂ ಕ್ರಿ.ಶ. ಹತ್ತನೇ ಶತಮಾನದವರೆಗಿನ ಮಾರ್ಗ ಅಥವಾ ಆ ಮಾರ್ಗ ಮತ್ತು ದೇಶೀ ಮಿಶ್ರವಾದ ಕನ್ನಡ ವಿದ್ವತ್ ಪ್ರಕಾರದವೇ ಆಗಿವೆ. ಅವನ್ನು ರಾಜಾಸ್ಥಾನದಲ್ಲಿ ಮತ್ತು ವಿದ್ವತ್ ಗೋಷ್ಠಿಗಳಲ್ಲಿ ಪಂಡಿತರು ಮಾತ್ರವೇ ಓದಲು ಅಥವಾ ಓದಿ ಹೇಳಲು ಸಾಧ್ಯವಿತ್ತು . ಅಂದರೆ, ಅವು ಜನಸಾಮಾನ್ಯರ ಮತ್ತು ನತದೃಷ್ಟ ದಲಿತರ ಸರಳ ವಲಯದಿಂದ ದೂರವೇ ಉಳಿದಿದ್ದವು.

ಇಷ್ಟೆಲ್ಲ ಸಾರಸ್ವತನಷ್ಟವಾದಾಗಲೂ ಕನ್ನಡ ಜನಸಾಮಾನ್ಯರು ಅದರಲ್ಲೂ ಮುಖ್ಯವಾಗಿ ದಲಿತ ಜನ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ದುರದೃಷ್ಟದ ಪ್ರಮೇಯವಿರಲಿಲ್ಲ! ಯಾಕೆಂದರೆ ಆ ಜನಸಾಮಾನ್ಯರಿಗೆ ಮತ್ತು ದಲಿತರಿಗೆ "ಬೆದಂಡೆ" ಎಂಬ ಒಂದು ದೇಸೀ ಕಾವ್ಯಪ್ರಕಾರವು ಆತ್ಮೀಯವಾಗಿ ಒಗ್ಗಿ ಬಂದಿತ್ತು. ಈ ಜನಪದ ಸಾಹಿತ್ಯ ಪ್ರಕಾರದ ಈ "ಬೆದಂಡೆ"ಯು ಕ್ರಿಸ್ತಪೂರ್ವ ಕಾಲದಲ್ಲಿರಲಿ, ಆಮೇಲೆ ಕ್ರಿಸ್ತಶಕಾರಂಭದಿಂದ ಹಿಡಿದು 7-8ನೇ ಶತಮಾನದವರೆಗಾಗಲೀ ಇರಲಿಲ್ಲವೆಂಬುದು, ಆಗ್ಗೆ ಕನ್ನಡದಲ್ಲಿ ಮಾತಾಡು ಹಾಡುವ ಜನರೇ ಇರಲಿಲ್ಲ, ಇದ್ದರೆಂಬುದಾದರೂ ಅವರು ಕಾವ್ಯಾಸ್ವಾದನೆಯನ್ನೇ ಅರಿಯದವರಾಗಿ ತೀರ ಕಾಡು ಜನರಂತಿದ್ದರೆಂದಂತಾಗುವುದು. ಇದು ಇಡಿಯಾಗಿ ನಮ್ಮ ಭಾರತೀಯ ಸಂಸ್ಕೃತಿ ಚರಿತ್ರೆಯನ್ನೇ ಅರಿಯದವರ ಎಗ್ಗು ಸಿಗ್ಗಿಲ್ಲದ ಮಾತಾದೀತು! ಆದ್ದರಿಂದಲೇ ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಕನ್ನಡ ಜನಕ್ಕೇ ವಿಶಿಷ್ಟವಾದ (ಅಂದರೆ ಅವರ ಮನವನ್ನು ಸಾರಸ್ವತವಾಗಿ ಸೂರೆಗೊಂಡಿದ್ದ) ಕಾವ್ಯಪ್ರಕಾರವೊಂದು "ಬೆದಂಡೆ" ಎಂಬ ಹೆಸರಿನಲ್ಲಿ ಕಾಲದಿಂದಲೂ ಕರ್ನಾಟಕದಲ್ಲಿ ಬಳಕೆಯಲ್ಲಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+