ರಮಾನಾಥ ರೈ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಮಂಗಳೂರು, ಜೂನ್ 19 : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕಲ್ಲಡ್ಕದ ಪ್ರಭಕರ್ ಭಟ್ ಅವರನ್ನು ಬಂಧಿಸುವಂತೆ ಎಸ್ಪಿ ಭೂಷಣ್ ರಾವ್ ಬೋರಸೆ ಅವರಿಗೆ ಸೂಚನೆ ನೀಡಿರುವ ವಿಡಿಯೋ ವೈರಲ್ ಆಗಿದ್ದು, ಸೋಮವಾರ ರೈ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪಿವಿಎಸ್ ವೃತ್ತದ ಬಳಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ, ರಸ್ತೆ ತಡೆ ನಡೆಸಿದರು. ರಾಮನಾಥ ರೈ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡುತ್ತಿದ್ದಾರೆ , ರೈ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪ್ರಭಾಕರ ಭಟ್ ವಿರುದ್ಧ ಕೇಸ್ ಜಡಿದು ಬಂಧಿಸಿ, ರೈ ವಿಡಿಯೋ ವೈರಲ್
ಪ್ರತಿಭಟನೆಯ ತೀವ್ರಗೊಳ್ಳುತ್ತಿದ್ದಂತೆಯೇ ತಕ್ಷಣ ಮಧ್ಯಪ್ರದೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಪ್ರತಿಭಟನೆಯ ನೇತೃತ್ವವನ್ನು ಶರಣ್ ಪಂಪ್ ವೆಲ್, ಜಗದೀಶ್ ಶೇಣವ, ಪುನೀತ್ ಮೊದಲಾದವರು ವಹಿಸಿದ್ದರು
ಘಟನೆಯ ಹಿನ್ನಲೆ : ಶನಿವಾರ ರಾತ್ರಿ ಜಿಲ್ಲಾ ಎಸ್ಪಿಯನ್ನು ಬಂಟ್ವಾಳ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡ ಸಚಿವ ರೈ ಎಸ್ಪಿಯನ್ನು ತರಾಟೆಗೆ ತೆಗೆದುಕೊಂಡು, ಯಾರೇ ದೂರು ಕೊಟ್ಟರು ಕ್ರಮಕೈಗೊಳ್ಳಬೇಕು. ಮಾತ್ರವಲ್ಲ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಯಾರೇ ದೂರು ನೀಡಿದರೂ ಪ್ರಕರಕಣ ದಾಖಲಿಸಿಕೊಂಡು ಆತನನ್ನು ಬಂಧಿಸಬೇಕು.
ಬಂಧನ ಬಳಿಕ ಆತನ ಪವರ್ ಏನೆಂಬುದು ಗೊತ್ತಾಗುತ್ತದೆ. ಇದೇನು ಮಂಡ್ಯ ಅಲ್ಲ ಇದು ಇಂಡಿಯಾ ಎಂದು ಎಸ್ಪಿಯನ್ನು ತರಾಟೆಗೆ ತೆಗೆದುಕೊಂಡಿರುವುದು ವಿಡಿಯೋ ವೈರಲ್ ಆಗಿತ್ತು.