ರಾಜ್ಯದಲ್ಲಿ ಹೆಚ್ಚುತ್ತಿರುವ ಹುಲಿ ಬೇಟೆ: ಆತಂಕದಲ್ಲಿ ಅರಣ್ಯ ಇಲಾಖೆ
ಅರಣ್ಯ ಮತ್ತು ಪರಿಸರ ಇಲಾಖೆ ಸಿದ್ಧಪಡಿಸಿದ ವರದಿಯೊಂದರಲ್ಲಿ ಕರ್ನಾಟಕದಲ್ಲಿ ಹುಲಿ ಬೇಟೆ ಹೆಚ್ಚಾಗುತ್ತಿರುವ ಕುರಿತು ಆತಂಕ ವ್ಯಕ್ತವಾಗಿದೆ.
ದೇಶದಾದ್ಯಂತ ಹುಲಿಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವನ್ಯಜೀವಿ ಪ್ರೇಮಿಗಳು ಎಷ್ಟೇ ಸಂತಸ ವ್ಯಕ್ತಪಡಿಸಿದರೂ, 2016 ರ ಮಟ್ಟಿಗೆ ಇದು ಸಂತಸ ಪಡುವ ವಿಚಾರವೇ ಅಲ್ಲ! ಏಕೆಂದರೆ ಹುಲಿಗಳ ರಾಜಧಾನಿ ಎಂದೇ ಕರೆಯಲ್ಪಡುವ ಕರ್ನಾಟಕದಲ್ಲಿ ಕಳೆದ ವರ್ಷ 12 ಹುಲಿಗಳು ಬೇಟೆಗಾರರಿಗೆ ಬಲಿಯಾಗಿದ್ದು ಆತಂಕದ ಸಂಗತಿಯೆನ್ನಿಸಿದೆ.
ಅರಣ್ಯ ಮತ್ತು ಪರಿಸರ ಇಲಾಖೆ ಸಿದ್ಧಪಡಿಸಿದ ವರದಿಯೊಂದರಲ್ಲಿ ಹುಲಿ ಬೇಟೆ ಹೆಚ್ಚಾಗುತ್ತಿರುವ ಕುರಿತು ಆತಂಕ ವ್ಯಕ್ತವಾಗಿದೆ. ಸಹಜ ಸಾವು ಮತ್ತು ಬೇಟೆಯಿಂದಾಗಿ ಈ ವರ್ಷ ಕರ್ನಾಟಕದಲ್ಲಿ ಹುಲಿ ಸಂಖ್ಯೆ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.[ವಿಧಿ ವಿಜ್ಞಾನ ಪರೀಕ್ಷೆಗೆ 'ಪ್ರಿನ್ಸ್' ಹುಲಿಯ ಅವಶೇಷ]
ಹುಲಿ ರಾಜಧಾನಿ ಎನ್ನಿಸಿಕೊಂಡಿದ್ದ ಕರ್ನಾಟಕವೀಗ ಬೇಟೆಗಾರರ ರಾಜಧಾನಿಯಾಗಿ ಬದಲಾಗುತ್ತಿದೆ. ಉತ್ತರ ಭಾರತದ ಕಡೆಯಿಂದ ಕರ್ನಾಟಕಕ್ಕೆ ಹಲವು ಬೇಟೆಗಾರರು ಹುಲಿ ಬೇಟೆಗಾಗಿ ಬರುತ್ತಿದ್ದಾರೆ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ. ಕರ್ನಾಟಕ ಅರಣ್ಯ ಇಲಾಖೆಯ ಕಠಿಣ ಕ್ರಮ ಮತ್ತು ಜಾಗರೂಕತೆಯಿಂದ ಮಾತ್ರವೇ ಈ ಸಮಸ್ಯೆಗೆ ಪರಿಹಾರ ದೊರಕೀತು.['ಪ್ರಿನ್ಸ್' ಮುಖ ಪತ್ತೆ, ಮುಗಿಯದ ಹುಲಿ ಸಾವಿನ ಗೊಂದಲ]
ಕೇವಲ ಬೇಟೆಯಿಂದಲೇ 2016 ರಲ್ಲಿ ಕರ್ನಾಟಕದ 12 ಹುಲಿಗಳು ಸಾವಿಗೀಡಾಗಿದ್ದು, 2017 ರಲ್ಲಿ ಈಗಾಗಲೇ 12 ಹುಲಿಗಳು ಸಾವಿಗೀಡಾಗಿವೆ. ಮಧ್ಯಪ್ರದೇಶದಲ್ಲಿ 2016 ರಲ್ಲಿ ಒಟ್ಟು 32 ಹುಲಿಗಳು ಸಾವನ್ನಪ್ಪಿದ್ದು, ಹುಲಿಗಳ ಬೇಟೆಯ ವಿಷಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ ಮೊದಲನೇ ಸ್ಥಾನದಲ್ಲಿದೆ.
ಬಂಡೀಪುರದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಿನ್ಸ್ ಹುಲಿ ಪ್ರಕರಣವನ್ನೂ ಇಲ್ಲಿ ಉಲ್ಲೇಖಿಸಬಹುದು. ಒಟ್ಟಿನಲ್ಲಿ ರಾಷ್ಟ್ರ ಪ್ರಾಣಿಯ ಉಳಿವಿಗಾಗಿ ಬೇಟೆಗಾರರನ್ನು ಹತೋಟಿಗೆ ತರುವುದು ಅರಣ್ಯ ಇಲಾಖೆಗೆ ಅನಿವಾರ್ಯವಾಗಿದೆ.