ರಾಯಚೂರು ಜಿಲ್ಲಾ ಸರ್ಕಾರಿ ನೌಕರರ 1 ದಿನದ ವೇತನಕ್ಕೆ ಕತ್ತರಿ
ರಾಯಚೂರಿನಲ್ಲಿ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ 1ದಿನದ ವೇತನವನ್ನು ಕಡಿತಗೊಳಿಸಲಾಗಿದೆ. ಇದರಿಂದ ಕೆಲ ಸರ್ಕಾರಿ ನೌಕರರಲ್ಲಿಯೇ ವಿರೋಧಗಳು ಕೇಳಿಬರುತ್ತಿವೆ.
ರಾಯಚೂರು, ನವೆಂಬರ್. 30 : ಜಿಲ್ಲೆಯ ಎಲ್ಲಾ ರಾಜ್ಯ ಸರ್ಕಾರಿ ನೌಕರರ ತಿಂಗಳ ವೇತನದಲ್ಲಿ ಒಂದು ದಿನದ ವೇತನಕ್ಕೆ ಕತ್ತರಿ ಬೀಳಲಿದೆ. ಡಿಸೆಂಬರ್ 2ರಿಂದ 4 ವರೆಗೆ ಮೂರು ದಿನ ರಾಯಚೂರಿನಲ್ಲಿ ನಡೆಯಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸರ್ಕಾರಿ ನೌಕರರ ಒಂದು ದಿನದ ವೇತನ ಕಟ್ ಆಗಲಿದೆ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಂತಿಗೆಯಾಗಿ ರಾಯಚೂರು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರ ಒಂದು ದಿನದ ವೇತನವನ್ನ ಪಡೆಯಲಾಗಿದೆ. ಒಂದು ದಿನದ ವೇತನದ ಅಂದಾಜು 1 ಕೋಟಿ 25 ಲಕ್ಷ ರೂ ಆಗಲಿದೆ. ಈ ಹಣದಲ್ಲಿ ಶೇಕಡಾ 70 ರಷ್ಟನ್ನು ಮಾತ್ರ ಸಮ್ಮೇಳನಕ್ಕೆ ಬಳಸಲಾಗುತ್ತಿದೆ.[82ನೇ 'ರಾಯಚೂರು' ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ]
ಉಳಿದ 30ರಷ್ಟು ಹಣ ಸರ್ಕಾರೇತರ ಸಂಸ್ಥೆಗೆ ನೀಡುತ್ತಿದೆ ಎಂದು ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿಗಳೇ ಈ ಬಗ್ಗೆ ಆದೇಶ ಹೊರಡಿಸಿದ್ದು, ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.[ಸಾಹಿತ್ಯ ಸಮ್ಮೇಳನಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ರೊಟ್ಟಿ]
ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಒಟ್ಟು 4 ಕೋಟಿ ರೂ. ಹಣ ನೀಡಿದೆ. ಈಗಾಗಲೇ 2 ಕೋಟಿ ರೂ. ಹಣ ಬಿಡುಗಡೆಯೂ ಆಗಿದೆ. ಇನ್ನು ಸಾರ್ವಜನಿಕರಿಂದ ಸುಮಾರು 80 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ.
ಜೊತೆಗೆ ಸರ್ಕಾರಿ ನೌಕರರ ದಿನದ ವೇತನ 1.25 ಕೋಟಿ ರೂ. ಒಟ್ಟು 8 ಕೋಟಿ ರೂಪಾಯಿಗೂ ಹೆಚ್ಚು ಹಣ ಜಮೆಯಾಗಲಿದೆ.
ಇಷ್ಟು ಹಣ ಬೇಕಿತ್ತಾ ಅನ್ನೋ ಶಿಕ್ಷಕರು ಸರ್ಕಾರೇತರ ಸಂಸ್ಥೆಗೆ ಶೇಕಡಾ 30 ರಷ್ಟು ಹಣ ನೀಡುತ್ತಿರುವುದನ್ನು ಸರ್ಕಾರಿ ನೌಕರರೇ ವಿರೋಧಿಸುತ್ತಿದ್ದಾರೆ.