ಬ್ಯಾಂಕ್ ಖಾತೆ ತೆರೆಯಲು ರಾಮನಗರದಲ್ಲಿ ಇಂದು ನಾಳೆ ಶಿಬಿರ
ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಖಾತೆ ತೆರೆಯಲು ರಾಮನಗರ ಜಿಲ್ಲೆಯಾದ್ಯಂತ ಕಾರ್ಪೊರೇಷನ್ ಬ್ಯಾಂಕ್ ವತಿಯಿಂದ ವಿಶೇಷ ಕ್ಯಾಂಪ್ ಆಯೋಜಿಸಲಾದೆ.
ರಾಮನಗರ, ನವೆಂಬರ್, 29: ನೋಟು ನಿಷೇಧ ಪರಿಣಾಮ ದೇಶದಾದ್ಯಂತ ನಗದು ಸಮಸ್ಯೆ ಹೆಚ್ಚಾಗಿರುವುದರಿಂದ ವ್ಯಾಪಾರ ವಹಿವಾಟಿಗೆ ಹಿನ್ನೆಡೆಯಾಗಿದೆ. ಅಷ್ಟೇ ಅಲ್ಲದೆ ಕೂಲಿ ಕಾರ್ಮಿಕರನ್ನು ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಬಹುತೇಕ ಕೂಲಿ ಕಾರ್ಮಿಕರು ವಾರದ ಸಂಬಳ ಪಡೆಯುವವರಿದ್ದಾರೆ. ಜತೆಗೆ ಅಸಂಘಟಿತ ವಲಯದ ಕಾರ್ಮಿಕಾರು ಸಹ ಹೆಚ್ಚಾಗಿ ಇದ್ದಾರೆ. ಇವರೆಲ್ಲರೂ ಸಾಮಾನ್ಯವಾಗಿ ಯಾವುದೇ ಬ್ಯಾಂಕ್ ಖಾತೆ ಹೊಂದಿರುವುದಿಲ್ಲ. ಆದ್ದರಿಂದ ಮಾಲೀಕರು ಸಹ ಕೂಲಿ ಹಣ ಪಾವತಿಸಲು ನಗದು ಸಮಸ್ಯೆ ಎದುರಿಸುತ್ತಿದ್ದಾರೆ.
ಕೂಲಿ ಕಾರ್ಮಿಕರ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಈ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮನಗರದ ಕಾರ್ಪೋರೇಷನ್ ಲೀಡ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಗಳು ಕೂಲಿಕಾರ್ಮಿಕರಿಗಾಗಿ ಉಳಿತಾಯ ಖಾತೆಗಳನ್ನು ತೆರೆಯಲು ಮಂಗಳವಾರ ಮತ್ತು ಬುಧವಾರ ಜಿಲ್ಲೆಯಾದ್ಯಂತ ಖಾತೆ ತೆರೆಯುವ ಶಿಬಿರಗಳನ್ನು ಏರ್ಪಡಿಸಿವೆ.
ಮಂಗಳವಾರ ರಾಮನಗರದ ಇಎಸ್ಐ ಆಸ್ಪತ್ರೆ, ಚನ್ನಪಟ್ಟಣದ ತಟ್ಟೆಕೆರೆ, ಮತ್ತು ಹಾರೋಹಳ್ಳಿ ಎರಡನೇ ಹಂತದ ಕೆಐಎಡಿಬಿ ಕಾಂಪ್ಲೆಕ್ಸ್ ಬಳಿ ಶಿಬಿರಗಳನ್ನು ಆಯೋಜಿಸಲಾಗಿದೆ, ಎಂದು ಲೀಡ್ ಬ್ಯಾಂಕ್ ನ ಮ್ಯಾನೇಜರ್ ಪ್ರಕಾಶ್ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ಬೀಡಿ ಕಾರ್ಖಾನೆ, ಕಟ್ಟಡ ನಿರ್ಮಾಣ, ರೇಷ್ಮೇ ನೂಲು ತೆಗೆಯುವ ಕಾರ್ಖಾನೆ, ಹೊಟೆಲ್ ನಂತಹ ಹಲವು ಅಂಸಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗಾಗಿ ಈ ಕ್ಯಾಂಪ್ ಆಯೋಜಿಸಲಾಗಿದೆ. ಶೂನ್ಯ ಠೇವಣಿಯಲ್ಲಿ ಕಾರ್ಮಿಕರು ಖಾತೆ ತೆರೆಯಬಹುದಾಗಿದ್ದು, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
ಇನ್ನು ಬುಧವಾರ ಸಹ ರಾಮನಗರ ಜಿಲ್ಲೆಯ ಇತರೆ ಪ್ರದೇಶಗಳಲ್ಲೂ ಖಾತೆ ತೆರೆಯುವ ಕ್ಯಾಂಪ್ ಹಮ್ಮಿಕೊಳ್ಳಲಾಗುವುದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗಾಗಿ ಲೀಡ್ ಬ್ಯಾಂಕ್ ನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ದೂರವಾಣಿ ಸಂಖ್ಯೆ, 080-9686553399