ರಜನಿಕಾಂತ್ 'ರಾಜಕೀಯ'ಕ್ಕೆ ಬರುವುದಾದರೆ ಸ್ವಾಗತ: ಅಮಿತ್ ಶಾ
ಮೋದಿ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಜನೀಕಾಂತ್ ರಾಜಕೀಯ ಪ್ರವೇಶಕ್ಕೆ ಸಹಮತ ವ್ಯಕ್ತಪಡಿಸಿದರು.
ನವದೆಹಲಿ, ಮೇ 24: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಬರುವುದಾದರೆ ಬರಲಿ. ಅವರಿಗೆ ನಾನು ಆತ್ಮೀಯ ಸ್ವಾಗತ ಕೋರುತ್ತೇನೆ ಎಂದು ಹೇಳಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅದರ ಬೆನ್ನಲ್ಲೇ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಮೋದಿ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ರಜನಿಯವರಿಗೆ ರಾಜಕೀಯಕ್ಕೆ ಸ್ವಾಗತ ಎಂದು ಹೇಳಿದರಲ್ಲದೆ, ನಾನು 'ರಾಜಕೀಯ' ಪದವನ್ನು ಉಪಯೋಗಿಸಿದ್ದೇನೆ, 'ಬಿಜೆಪಿ' ಎಂಬ ಪದ ಅಲ್ಲ ಎಂದು ಚಟಾಕಿ ಹಾರಿಸಿದರು.
ಆನಂತರ, ಪ್ರಧಾನಿ ಮೋದಿಯವರ ಸರ್ಕಾರದ ಸಾಧನೆಗಳತ್ತ ತಮ್ಮ ಮಾತುಗಳನ್ನು ಹೊರಳಿಸಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಡವರ ಪರವಾಗಿದ್ದು, ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಮೋದಿ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೋದಿ ಸರ್ಕಾರದ ಹಲವಾರು ಸಾಧನೆಗಳನ್ನು ಬಣ್ಣಿಸಿದರು.[ಮೋದಿ ಸರ್ಕಾರಕ್ಕೆ ಮೂರು ವರ್ಷ: ಫಲ ನೀಡಿದ ಟಾಪ್ 20 ಯೋಜನೆಗಳು]
ಕಳೆದ ವರ್ಷಾಂತ್ಯಕ್ಕೆ ಕೈಗೊಂಡಿದ್ದ ಅಪನಗದೀಕರಣದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಕಪ್ಪು ಹಣವನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು.
ಆನಂತರ ತಮ್ಮ ಮಾತು ಮುಂದುವರಿಸಿ, ದೇಶದಲ್ಲಿ ಮೂಲಸೌಕರ್ಯಗಳನ್ನು ಕೇಂದ್ರ ಸರ್ಕಾರ ಒದಗಿಸುವಲ್ಲಿ ಯಶಸ್ವಿಯಾಗಿದೆ. 2016-17ನೇ ವರ್ಷದಲ್ಲಿ ಹಿಂದೆಂದಿಗಿಂತಲೂ ಅನೇಕ ರಸ್ತೆಗಳನ್ನು ನಿರ್ಮಿಸಲಾಗಿದೆ.[ಮೋದಿ ಮನ್ ಕಿ ಬಾತ್ ನ ಮನತಟ್ಟುವ 15 ಹೇಳಿಕೆಗಳು]
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಾಖಲೆ ಪ್ರಮಾಣದಲ್ಲಿ ಯೂರಿಯಾ ಉತ್ಪಾದನೆ ಮಾಡಲಾಗಿದೆ. ದೇಶದ 15 ಸಾವಿರ ಹಳ್ಳಿಗಳ ಪೈಕಿ 13 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ನೀಡಲಾಗಿದೆ ಎಂದರು.
ರಾಜ್ಯಗಳೊಂದಿಗೆ ಉತ್ತಮ ಸಮನ್ವಯತೆ ಸಾಧಿಸಿದ್ದು, ಎಲ್ಲಾ ರಾಜ್ಯಗಳ ಸಹಕಾರ ಪಡೆದೇ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸಲಾಗಿದೆ. ಇನ್ನು ಕೆಂಪು ದೀಪ ತೆಗೆದು ವಿಐಪಿ ಸಂಸ್ಕೃತಿಗೆ ತಡೆ ಹಾಕಲಾಗಿದೆ ಎಂದು ಅಮಿತ್ ಶಾ ಹೇಳಿದರು.[ಅಮಿತ್ ಶಾಗೆ ಬಹಿರಂಗ ಸವಾಲೆಸೆದ ಓವೈಸಿ]
ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಹೆರಿಗೆ ರಜೆ ಹೆಚ್ಚಿಸಲಾಗಿದ್ದು, 2 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ಸೌಲಭ್ಯ ಕಲ್ಪಿಸಲಾಗಿದೆ. 2020ರ ಹೊತ್ತಿಗೆ, 5 ಕೋಟಿ ಕುಟುಂಬಗಳಿಗೆ ಎಲ್ ಪಿಜಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ.
ಬಡ ಜನರಿಗೂ ಬ್ಯಾಂಕಿಂಗ್ ಸೌಲಭ್ಯ ಸಿಗುವಂತೆ ಮಾಡಲು ಜನ ಧನ ಯೋಜನೆ ಜಾರಿಗೊಳಿಸಲಾಗಿದೆ. ಈ ಮೂಲಕ, 28.52 ಕೋಟಿ ಜನರಿಗೆ ಬ್ಯಾಂಕ್ ಖಾತೆ ಸೌಲಭ್ಯ ಸಿಕ್ಕಿದೆ ಎಂದು ತಿಳಿಸಿದರು.