ಚಿಕಿತ್ಸೆ ಸಿಗದೆ ಗುಂಡ್ಲುಪೇಟೆಯಲ್ಲಿ ಜ್ವರದಿಂದ ವಿದ್ಯಾರ್ಥಿ ಸಾವು
ಗುಂಡ್ಲುಪೇಟೆ, ಜುಲೈ 21: ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿಯೊಬ್ಬ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.
ಪಟ್ಟಣದ ನಿವಾಸಿ ಕೃಷ್ಣಮೂರ್ತಿ ಎಂಬುವರ ಪುತ್ರ ಸೆಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಹರ್ಷಿತ್ (16) ವಿದ್ಯಾರ್ಥಿಯೇ ಜ್ವರದಿಂದ ಬಳಲಿ ಸಾವನ್ನಪ್ಪಿದ ದುರ್ದೈವಿ.
ಹರ್ಷಿತ್ ಗೆ ಗುರುವಾರ ಮಧ್ಯರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿದೆ. ಆತಂಕಗೊಂಡ ಮನೆಯವರು ಕೂಡಲೇ ಆಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಬಾರದ ಕಾರಣದಿಂದ ಬೇರೆ ವಾಹನವನ್ನು ಪೋಷಕರು ಹುಡಕಿದ್ದಾರೆ. ನಂತರ ಬೇರೆ ವಾಹನದಲ್ಲಿ ಸಾರ್ವಜನಿಕ ಆಸ್ಪತ್ರೆ ಹರ್ಷಿತ್ ನನ್ನು ದಾಖಲಿಸುವಾಗ ತಡವಾಗಿದ್ದು, ಈ ವೇಳೆ ಎದೆನೋವು ಕಾಣಿಸಿಕೊಂಡು ಆತ ದಾರಿ ಮಧ್ಯೆ ಸಾವಿಗೀಡಾಗಿದ್ದಾನೆ.
ಮಾರ್ಗಮಧ್ಯೆ ಬರುವಾಗ ಹರ್ಷಿತ್ ಪ್ರಜ್ಞೆ ತಪ್ಪಿದ್ದಾನೆ ಎಂದು ಪೋಷಕರು ಭಾವಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಿದ ವೇಳೆ ವೈದ್ಯರು ಬಾಲಕನನ್ನು ಪರೀಕ್ಷಿಸಿದಾಗ ಆತ ಮನೆಯಿಂದ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ ಎಂದು ಘೋಷಿಸಿದ್ದಾರೆ.
ಸಕಾಲದಲ್ಲಿ ತುರ್ತು ಚಿಕಿತ್ಸಾ ವಾಹನ ಬಂದಿದ್ದರೆ ವಿದ್ಯಾರ್ಥಿಯ ಜೀವ ಉಳಿಯುತ್ತಿತ್ತು ಎಂದು ವಿದ್ಯಾರ್ಥಿ ಸಂಬಂಧಿಕರು ಹಾಗೂ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಯ ಸಾವಿನ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಿಸಲಾಯಿತು.