ಮದ್ಯ ಪ್ರಿಯರಿಗಾಗಿ ಎಂಎಸ್ಐಎಲ್ ನಿಂದ 900 ಮಳಿಗೆ ಪ್ರಾರಂಭ
ಬೆಳಗಾವಿ,ನವೆಂಬರ್.22: ಅಕ್ರಮ ಮದ್ಯಮಾರಾಟವನ್ನು ತಡೆಯಲು ಎಂಎಸ್ಐಲ್ ನಿಂದ 900 ಹೊಸ ಸಗಟ ಮಳಿಗೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ಎಚ್.ವೈ. ಮೇಟಿ ತಿಳಿಸಿದರು.
ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ನ ಹಿರಿಯ ಶಾಸಕ ಎಚ್.ಡಿ.ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2014-15ನೇ ಸಾಲಿನಲ್ಲಿ 16, 2015-16ನೇ ಸಾಲಿನಲ್ಲಿ 6 ಮಾರಾಟ ಮಳಿಗೆ ತೆರೆಯಲಾಗಿತ್ತು. ಜಿಲ್ಲಾಧಿಕಾರಿಗಳು ಮತ್ತು ಅಬಕಾರಿ ಇಲಾಖೆ ಮೂಲಕ ಸರ್ವೆ ಮಾಡಿಸಿ ಅಗತ್ಯವೆಂದು ಕಂಡು ಬಂದ ಜಾಗಗಳನ್ನು ಗುರುತಿಸಿ ಹೊಸದಾಗಿ 900 ಸಗಟು ಮಾರಾಟ ಮಳಿಗೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷ 464 ಮಾರಾಟ ಮಳಿಗೆಗಳನ್ನು ಮಂಜೂರು ಮಾಡಲಾಗಿತ್ತು ಆದರೆ 40 ಸಹ ಪ್ರಾರಂಭವಾಗಿಲ್ಲ ಎಂದರು.[ಈ ವಿಷಯದಲ್ಲಿ ಕರ್ನಾಟಕಕ್ಕಿಂತ ಬಿಹಾರವೇ ಉತ್ತಮ!]
ಮರು ಪ್ರಶ್ನೆ ಹಾಕಿದ ಎಚ್.ಡಿ.ರೇವಣ್ಣ ಅವರು, ರಾಜ್ಯದಲ್ಲಿ 9ಸಾವಿರ ಮದ್ಯದಂಗಡಿಗಳಿವೆ ಸರ್ಕಾರದ ಎಂಎಸ್ಐಎಲ್ ಕೇವಲ 600 ಮಳಿಗೆಗಳನ್ನು ಒಳಗೊಂಡಿದೆ. ಹೊಸ ಮಳಿಗೆಗಳನ್ನು ಸ್ಥಾಪಿಸಲು ಮುಂದಾದರೆ ಖಾಸಗಿ ಮದ್ಯ ಮಾರಾಟಗಾರರು ಅಡ್ಡಿಪಡಿಸುತ್ತಾರೆ ಎಂದರು.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಧ್ಯ ಪ್ರವೇಶಿಸಿ, ರಾಜ್ಯದಲ್ಲಿ ಗಂಭೀರ ಬರ ಪರಿಸ್ಥಿತಿ ಇದೆ. ಜನರಿಗೆ ಕುಡಿಯಲು ನೀರಿಲ್ಲ. ಆದರೆ, ಸರ್ಕಾರ ಮದ್ಯ ಕುಡಿಸಿ ವ್ಯಾಪಾರ ಹೆಚ್ಚು ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಜೆಡಿಎಸ್ ನ ವೈ.ಎಸ್.ವಿ.ದತ್ತ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಎಂಎಸ್ಐಎಲ್ ಮಳಿಗೆ ಮಂಜೂರಾಗಿ ಐದು ವರ್ಷ ಕಳೆದಿದೆ ಈವರೆಗೂ ಆರಂಭಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.[ಬೆಂಗಳೂರು ಸಭ್ಯ ಕುಡುಕರ ರಾಜಧಾನಿ ಎಂದ ಅಬಕಾರಿ ಸಚಿವ]
ಶಾಸಕರ ಆಕ್ಷೇಪಗಳಿಗೆ ಉತ್ತರ ನೀಡಿದ ಸಚಿವರು, ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಮದ್ಯವನ್ನು ತಡೆಗಟ್ಟುವ ಸಲುವಾಗಿ ಎಂಎಸ್ಐಎಲ್ ಮದ್ಯದಂಗಡಿಗಳನ್ನು ಹೆಚ್ಚಿಸಲಾಗುತ್ತಿದೆಯೇ ಹೊರತು ಸಾರಾಯಿ ಕುಡಿಯುವುದು ಹೆಚ್ಚು ಮಾಡುವುದಕ್ಕಲ್ಲ ಎಂದು ಸ್ಪಷ್ಟಪಡಿಸಿದರು.