ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟಿ ತಿಂದವರೇ ರೆಡ್ಡಿಯನ್ನು ಹೂತು ಹಾಕಿದರು

By * ರವಿ ಬೆಳಗೆರೆ
|
Google Oneindia Kannada News

Reddy brothers
ಸಿಬಿಐ ಎಂಬುದು ಕೆಲವು ಅಪರೂಪದ ಬುದ್ದಿವಂತರ, ಹಣಕಾಸಿನ ವಿಚಾರದಲ್ಲಿ ನಿಷ್ಠಾವಂತರಾದ ಅಧಿಕಾರಿಗಳನ್ನು ಹೊಂದಿರುವ ಅತ್ಯಂತ ಚುರುಕಾದ ಸಂಸ್ಥೆ. ಒಂದು ರೇಡ್ ಮಾಡಿದರೆ ಕನಿಷ್ಠ ಮುನ್ನೂರು ಜನರನ್ನು ಅದಕ್ಕಾಗಿ ಕಣಕ್ಕಿಳಿಸುವ, ಚಿಕ್ಕದೊಂದು ಕಲ್ಲನ್ನೂ ತಿರುಗಿಸದೇ ಬಿಡದ, ಎಲ್ಲಿಂದ ಬೇಕಾದರೂ ಎವಿಡೆನ್ಸು ಕಲೆಹಾಕಬಲ್ಲ, ಯಾವ ಆಳವನ್ನೂ ಅಗೆದು ತಲಾಷು ಮಾಡಬಲ್ಲ ಸಮರ್ಥ ಸಂಘಟನೆ. ಅಂಥ ಸಂಸ್ಥೆಯೊಂದಿಗೆ ಜನಾರ್ಧನ ರೆಡ್ಡಿಯೇ ಮೊದಲಬಾರಿಗೆ ಚಲಗಾಟ ಆರಂಭಸಿದ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ನೂರೈವತ್ತು ಕೋಟಿ ಗಣಿ ಕಪ್ಪದ ಆರಂಭದೊಂದಿಗೇ ರೆಡ್ಡಿ ಸೋದರರ ಅಸಲಿ ಚಲಗಾಟ ಆರಂಭವಾಯಿತು. ರೆಡ್ಡಿಗಳಿಂದ ಈ ಕೆಲಸ ಮಾಡಿಸಿದ್ದು, ಅಂದು ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ. ಇಪ್ಪತ್ತು ತಿಂಗಳನಂತರ ಅಧಿಕಾರ ಬಿಟ್ಟುಕೊಡದೆ ಬಹುದೊಡ್ಡ ರಾಜಕೀಯ ತಪ್ಪು ಮಾಡಿದ ಕುಮಾರಸ್ವಾಮಿ ಕೈಲಿ ಆ ಕೆಲಸ ಮಾಡಿಸಿದ್ದು ದೇವೇಗೌಡರು.

ಎಂಥ ಪರಿಸ್ಥಿತಿ ನಿರ್ಮಾಣವಾಯಿತೆಂದರೆ, ರಾಜ್ಯದ ಇಡೀ ಲಿಂಗಾಯತ ಸಮೂಹ ಬಿಜಿಪಿಗೆ ಅಧಿಕಾರ ಕೈಯೆತ್ತಿ ಕೊಡಲು ಸಿದ್ಧವಾಗಿತ್ತು. ಧಾರಾಳವಾಗಿ ದುಡ್ಡು ಚೆಲ್ಲಲು ರೆಡ್ಡಿಗಳು ಸಿದ್ಧವಾಗಿದ್ದರು. ಅವರಿಂದ ಸಾವಿರಾರು ಕೋಟಿ ತಂದುಕೊಂಡು ಸಿಂಹಾಸನವೇರಲು ಯಡಿಯೂರಪ್ಪ ತಹತಹಿಸುತ್ತಿದ್ದ. ಅದೆಲ್ಲದರ ಅಂತಿಮ ಪರಿಣಾಮವೆಂದರೆ-ಯಡಿಯೂರಪ್ಪನಿಗೆ ಕುರ್ಚಿ, ಕುಮಾರಸ್ವಾಮಿಗೆ ಕಸದ ಬುಟ್ಟಿ, ಕಾಂಗ್ರೆಸ್ಸಿಗೆ ದೈನೇಸಿ ಸ್ಥಿತಿ ಮತ್ತು ರೆಡ್ಡಿಗೆ ಕುಬೇರನ ತಿಜೋರಿಯ ಕೀಲಿ ಕೈ ಸಂದಾಯವಾದವು. ಬಳ್ಳಾರಿ ಜಿಲ್ಲೆಯನ್ನು ತುಂಡು ಗುತ್ತಿಗೆ ಆಧಾರದ ಮೇಲೆ ಜನಾರ್ದನ ರೆಡ್ಡಿಯ ಕೈಗೆ ಬಿಟ್ಟು ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅದರಿಂದ ಕೋಟ್ಯಾಂತರ ರೂಪಾಯಿ ಗೋರಿಕೊಂಡ. ಅಷ್ಟೇ ಅಲ್ಲ; ಆತ ರೆಡ್ಡಿಗಳಿಂದ ಹೊಸ ರಾಜಕೀಯ ಪಾಠ ಕಲಿತುಕೊಂಡ. ಪಾಠದ ಹೆಸರೇ ದುಡ್ಡು. ದುಡ್ಡಿದ್ದರೆ ಮಾತ್ರ ರಾಜಕಾರಣ ಮಾಡಬಹುದು ಮತ್ತು ದುಡ್ಡೊಂದಿದ್ದರೆ ಏನು ಬೇಕಾದರೂ ಮಾಡಬಹುದು! ಹಾಗಂತ ರೆಡ್ಡಿಗಳೇ ತೋರಿಸಿ ಕೊಟ್ಟಿದ್ದರು.

ತಮಾಷೆ ಕೇಳಿ : ಇವತ್ತು ಲೋಕಾಯುಕ್ತರು ಯು.ವಿ.ಸಿಂಗ್ ಅಥವಾ ಸಿ.ಬಿ.ಐ ಅಧಿಕಾರಿಗಳು ಏನೇನು ಸಾಕ್ಷ್ಯ ಸಂಗ್ರಹಿಸಿದ್ದೇವೆ ಅಂತ ಹೇಳಿಕೊಳ್ಳುತ್ತಿದ್ದಾರೋ, ಅವೆಲ್ಲವನ್ನೂ ಮೊದಲಬಾರಿಗೆ ಸಂಪಾದಿಸಿದ್ದು ಇನ್ ಕಮ್ ಟ್ಯಾಕ್ಸ್ ಇಂಟಲಿಜೆನ್ಸ್ ವಿಭಾಗದ ಒಬ್ಬ ನಿಸ್ಪೃಹ ಅಧಿಕಾರಿ ಗುರುಪ್ರಸಾದ್ ಎಂಬವರು. ರೆಡ್ಡಿ ಮತ್ತು ಅವರ ಆಸುಪಾಸಿನವರ ವಿರುದ್ಧ ಈ ತನಕ ನಡೆಯುತ್ತಿರುವ ತನಿಖೆಯ ಬೇರುಗಳಿರುವುದೇ ಟ್ಯಾಕ್ಸ್ ಅಧಿಕಾರಿ ಗುರುಪ್ರಸಾದ್ ನಡೆಸಿದ ದಾಳಿ ಮತ್ತು ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ. ಜನಾರ್ದನ ರೆಡ್ಡಿಯನ್ನು ಹಣಿಯಲಿಕ್ಕಾಗಿ ಸಲೀಸಾಗಿ ಸಿಕ್ಕಿರುವ ಎರಡು ಆಯುಧಗಳೆಂದರೆ ರೆಡ್ಡಿಯ ಆಪ್ತ ಸಿಬ್ಬಂದಿಯವನೇ ಆದ ಅಲೀಖಾನ್ ಮತ್ತು ಹೊಸಪೇಟೆಯ ಪರಮ ಕುಖ್ಯಾತ ಟ್ರಾನ್ಸ್ ಪೋರ್ಟರ್ ಖಾರಪುಡಿ ಮಹೇಶ. ಇವರಿಬ್ಬರವೂ ಕಂತೆ ಕಂತೆ ದಾಖಲೆಗಳು, ಹಣದ ವಹಿವಾಟಿನ ವಿವರಗಳು ಸಿಕ್ಕುಬಿದ್ದಿವೆ. ಇವರಿಗಿಂತ ದೊಡ್ಡಮಟ್ಟದಲ್ಲಿ ಗಾಲಿ ಜನಾರ್ದನ ರೆಡ್ಡಿಯ ವಿರುದ್ಧ ಸಾಕ್ಷ್ಯ ದೊರಕಿರುವುದು ಕೂಡ್ಲಗಿಯ ಶಾಸಕ ಗುಮ್ಮನೂರು ನಾಗೇಂದ್ರನ ಬ್ಯಾಂಕ್ ವಹಿವಾಟಿನಲ್ಲಿ. ಕೊನೆಯದಾಗಿ ಜನಾರ್ದನ ರೆಡ್ಡಿಯನ್ನು ಸಿಕ್ಕಿ ಹಾಕಿಸಬಲ್ಲ ಹುಡುಗನೆಂದರೆ, ಕಂಪ್ಲಿಯ ಶಾಸಕ ಸುರೇಶ್ ಬಾಬು. ಬೆರಳೆಣಿಕೆಯಷ್ಟೇ ಜನರಿರುವ ಒಂದು ಪಟಾಲಂ ಜನಾರ್ದನ ರೆಡ್ಡಿಯನ್ನು ಕಾನೂನಿನ ಚಕ್ರಸುಳಿಗೆ ಸಿಲುಕಿಸಿ ಮುಳುಗಿಸಲಿದೆ.

ನಿಮಗೆ ಆಶ್ಚರ್ಯವೆನ್ನಿಸಬಹುದು. ಗಣಿಗಾರಿಕೆಯ ವ್ಯವಹಾರದಲ್ಲಿ ಜನಾರ್ದನ ರೆಡ್ಡಿ ತುಂಬ ಹಿಂದೆಯೇ ತನ್ನ ಸೋದರರಾದ ಸೋಮಶೇಖರ ರೆಡ್ಡಿ ಹಾಗೂ ಕರುಣಾಕರ ರೆಡ್ಡಿಯನ್ನು ದೂರವಿರಿಸಿದ್ದ. ಈ ಸೋದರರು ಅಕ್ಷರಶಃ ಕುಟುಂಬದ ಆಸ್ತಿ ಪಾಲುಮಾಡಿಕೊಂಡು ವ್ಯವಹಾರಿಕವಾಗಿ ದೂರವಾಗಿದ್ದಾರೆ. ರಾಜಕೀಯದ ವಿಷಯಕ್ಕೆ ಬಂದರೆ ಶ್ರೀರಾಮುಲುವೂ ಸೇರಿದಂತೆ ಎಲ್ಲರೂ ಬಳ್ಳಾರಿ ಬ್ರದರ್ಸ್ ಅಥವಾ ರೆಡ್ಡಿ ಬ್ರದರ್ಸ್ ಅಂತಲೇ ಗುರುತಿಸಲ್ಪಡುತ್ತಾರೆ. ಮಾನಸಿಕವಾಗಿ ಅವರು ಒಟ್ಟಿಗಿದ್ದಾರೆಯೇ ಗೊತ್ತಿಲ್ಲ. ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ ಎಂಬುದಂತೂ ನಿಜ.

English summary
Janardhana Reddy's arrest by CBI under Prevention of Corruption Act has opened pandora's box. All the people who benefited from Jana Reddy are exposing him before CBI. Is it the end of Reddy's era in Karnataka? Or is it the beginning of new political game? Ravi Belagere writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X