ರೆಡ್ಡಿ ಎಲ್ಲರನ್ನೂ ಎಳೆದುಕೊಂಡೇ ಹಳ್ಳಕ್ಕೆ ಬಿದ್ದ!
ಅದೇ ತರಹದ ಕೆಲಸ ಮಾಡಿ ಕುಮಾರಸ್ವಾಮಿ ಸಿಕ್ಕು ಬಿದ್ದಿರುವುದು ವಿನೋದ್ ಗೋಯಲ್ ನ 'ಜಂತಕಲ್ ಮೈನ್ಸ್ ಪರವಾನಗಿ' ಹಗರಣದಲ್ಲಿ. ಅಕ್ರಮ ಗಣಿಗಾರಿಕೆ ಹಾಗೂ ಅದಿರು ಕಳ್ಳ ಸಾಗಾಣಿಕೆ ಹಗರಣದಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿರುವುದು ಹೌದಾದರೆ, ಆತನ ಪಕ್ಕದ ಬ್ಯಾರಕ್ ಗಳಲ್ಲಿ ಸಾಲುಸಾಲಾಗಿ ಯಡಿಯೂರಪ್ಪ, ಅನಿಲ್ ಲಾಡ್, ಕುಮಾರಸ್ವಾಮಿ, ವಿಜಯೇಂದ್ರ, ರಾಘವೇಂದ್ರ, ಗುಮ್ಮನೂರು ನಾಗೇಂದ್ರ... ಹೀಗೆ ಅನೇಕರು ಹೋಗಿ ಕೂಡುತ್ತಾರೆ. ಕೂಡ ಬೇಕು.
ಗಣಿ ದುಡ್ಡು ಎಂಬುದು ಇಡೀ ರಾಜ್ಯ ರಾಜಕಾರಣವನ್ನೇ ಬದಲಿಸಿತು, ದಿಕ್ಕು ತಪ್ಪಿಸಿತು. ಜನಾರ್ದನ ರೆಡ್ಡಿಯ 'ಸಿರಿವಂತಿಕೆ'ಯಲ್ಲಿ ಪಾಲು ತಿನ್ನಲು ಹೋಗಿ ಅನೇಕರು ಸಿಕ್ಕು ಬಿದ್ದರು. ಗಾಲಿ ಜನಾರ್ದನ ರೆಡ್ಡಿ ಎಲ್ಲರನ್ನೂ ಎಳೆದುಕೊಂಡೇ ಹಳ್ಳಕ್ಕೆ ಬಿದ್ದ. ಇವತ್ತು ಬಳ್ಳಾರಿ ಜಿಲ್ಲೆಯ ಗಣಿ ಮಾಲೀಕರು ಜನಾರ್ದನ ರೆಡ್ಡಿಯನ್ನು ಎಲ್ಲವುದಕ್ಕೂ ಕಾರಣ ಎಂದು ದೂಷಿಸಿ ನಿಟ್ಟುಸಿರಾಗುತ್ತಿದ್ದಾರೆ. ಆತನ ಶಿಷ್ಯರಾದ ಗುಮ್ಮನೂರು ನಾಗೇಂದ್ರ, ಸುರೇಶ್ ಬಾಬು, ಅಲೀಖಾನ್, ಖಾರಪುಡಿ ಮಹೇಶರಂಥವರಿಂದಾಗಿ ಕೆಲವು ಅಮಾಯಕರ ಬಾಯಿಗೂ ಮೊಸರನ್ನ ಮೆತ್ತಿಕೊಂಡಿದೆ.
ರಾಜಕಾರಣ ಬಲ್ಲ ಎಲ್ಲರೂ ಅಂದುಕೊಂಡಿದ್ದೆಂದರೆ, ಸಿಬಿಐ ಎಂಬ ಸಶಕ್ತ ಖಡ್ಗವನ್ನು ಬಳಸುವ ಮೂಲಕ ಸೋನಿಯಾ ಗಾಂಧಿ ಮೊದಲು ಜಗನ್ ಮೋಹನ ರೆಡ್ಡಿಯನ್ನು ಹಣಿಯುತ್ತಾಳೆ, ಆ ನಂತರ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿಯನ್ನು ಮುಟ್ಟುತ್ತಾರೆ. ಹಾಗಂತಲೇ ಬಹುಶಃ ಜನಾರ್ದನ ರೆಡ್ಡಿಯೂ ಅಂದುಕೊಂಡಿದ್ದಿರಬೇಕು. ಆದರೆ ಮೊದಲ ಬೀಸು ಆತನಿಗೇ ಬಿದ್ದಿದೆ. ಇದು ಮುಂದೆ ಜರುಗಲಿರುವ 'ಜಗನ್ ಪರಾಭವ' ಪರ್ವದ ಮುನ್ನುಡಿಯಷ್ಟೇ.
ಇನ್ನು ರೆಡ್ಡಿ ತಂಡ ರಾಜಕೀಯವಾಗಿ, ನೈತಿಕವಾಗಿ, ಕಾನೂನು ರೀತ್ಯಾ ಬಳ್ಳಾರಿಯಲ್ಲಿ ಚೇತರಿಸಿಕೊಳ್ಳುವುದು ಕಷ್ಟವಿದೆ. ಸದ್ಯದಲ್ಲೇ ಚುನಾವಣಾ ನಿಯಮಗಳೂ ಬಿಗಿಯಾಗಿ ಬಿಟ್ಟರೆ ಅಲ್ಲಿಗೆ ಹಣ ಚೆಲ್ಲುವುದೂ ನಿಂತು ಹೋಗಿ ಗಣಿ ಸಾಮ್ರಾಜ್ಯ ಧೂಳು ಪಾಲಾಗಲಿದೆ. ಇಂದು ನಾಳೆಯೊಳಗಾಗಿ ಜನಾರೆಡ್ಡಿ ಜಾಮೀನು ಪಡೆದು ಹೊರಬರುವುದೂ ಅನುಮಾನವೇ. ಇನ್ನು ಬಳ್ಳಾರಿಯಲ್ಲಿ ಹಳೆಯ ಹಂತಕರನ್ನೂ, ಹೊಸ ಕಳ್ಳರನ್ನೂ ವಿರೋಧಿಸುವಂಥ ಮೂರನೆಯ ಶಕ್ತಿಯೊಂದು ಹೊರ ಹೊಮ್ಮಬೇಕಿದೆ. ಅದು ಸಾಧ್ಯವೇ? [ಸ್ನೇಹಸೇತು : ಹಾಯ್ ಬೆಂಗಳೂರು]