ರಾಜಧಾನಿಯಲ್ಲಿ ಸರಣಿ ಶೂಟೌಟ್: ರೌಡಿಗಳಿಗಿಂತ ಖಾಕಿಗಳಿಗೆ ಕಂಟಕ !
ಬೆಂಗಳೂರು, ಫೆಬ್ರವರಿ 11: ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯಾ ? ರೌಡಿಗಳ ಅಟ್ಟಹಾಸ ಪೊಲೀಸರ ಕೈ ಮೀರಿದೆಯಾ ? ಇಲ್ಲಾ ಪೊಲೀಸರು ತಮ್ಮ ಹೆಸರಿನ ಮುಂದೆ "ಶೂಟೌಟ್" ಸ್ಟಾರ್ ಧರಿಸಿ ಸಿಎಂ ಪದಕ ಗಿಟ್ಟಿಸಲು ಪಿಸ್ತೂಲ್ ಗೆ ಕೆಲಸ ಕೊಟ್ಟರಾ ? ರಾಜಧಾನಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಶ್ಯೂಟೌಟ್ ಗಳನ್ನು ನೋಡಿದ್ರೆ ಸಾಮಾನ್ಯವಾಗಿ ಇಂತಹ ಪ್ರಶ್ನೆಗಳು ಉದ್ಭವಿಸುತ್ತವೆ.
ಫೆಬ್ರವರಿ ತಿಂಗಳಲ್ಲಿ ಕಳೆದ ಮೂರು ದಿನದಲ್ಲಿ ಮೂರು ಶೂಟೌಟ್ ಪ್ರಕರಣ ವರದಿಯಾಗಿವೆ. ಜನವರಿ ತಿಂಗಳ ಲೆಕ್ಕ ನೋಡಿದರೆ ಎಂಟು ಶೂಟೌಟ್ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿವೆ. ಅನೇಕ ಅಪರಾಧ ಪ್ರಕರಣಗಳಲ್ಲಿ ಬೇಕಾಗಿರುವ ಕ್ರಿಮಿನಲ್ ಗಳ ಮೊಣಕಾಲು ಕೆಳಗೆ ಪೊಲೀಸ್ ಬುಲೆಟ್ ಇಳಿಯುತ್ತಿವೆ. ಹತ್ತು, ಇಪ್ಪತ್ತು ಅಪರಾಧ ಪ್ರಕರಣಗಳ ಪೈಕಿ ಒಂದು ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಲ್ಲಿ ಅವರು ಮತ್ತೆ ಅಪರಾಧಕ್ಕೆ ಎಂಟ್ರಿ ಕೊಡುವ ಪ್ರಮೇಯವೇ ಇರುವುದಿಲ್ಲ. ಶಿಕ್ಷೆಯಿಂದ ಪರಾಗಿ ಕ್ರಿಮಿನಲ್ ಗಳು ಸಕ್ರಿಯವಾಗಿ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದರೆ ಇಷ್ಟು ರಾಜಾ ರೋಷವಾಗಿ ಅಪರಾಧ ಕೃತ್ಯ ಎಸಗುತ್ತಿದ್ದಾರೆ ಎಂದರೆ ರಾಜಧಾನಿಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆಯಾ ? ರೌಡಿ ಚಟುವಟಿಕೆ, ಅಪರಾಧ ಕೃತ್ಯಗಳು ಹೆಚ್ಚಾಗಿದೆಯೇ ? ಇಲ್ಲವೇ ಇದೆಲ್ಲವೂ ಏನೂ ಇಲ್ಲ, ಶ್ಯೂಟೌಟ್ ಎಂದ ಕೂಡಲೇ ಮಾಧ್ಯಮಗಳಲ್ಲಿ ಆ ಸುದ್ದಿ ರಾರಾಜಿಸುತ್ತದೆ. ಹೀಗಾಗಿ ಪ್ರಚಾರ ಪಡೆಯುವ ಮೂಲಕ ಪೊಲೀಸ್ ಸರ್ವೀಸ್ ರೆಕಾರ್ಡ್ ನಲ್ಲಿ ಶ್ಯೂಟೌಟ್ ಕೀರ್ತಿ ದಾಖಲಿಸಿ ಅಮೂಲ್ಯ ಸೇವೆಗೆ ನೀಡುವ ಪದಕ ಪಡೆಯುವ ಆಕಾಂಕ್ಷೆಗೆ ಬುಲೆಟ್ ಗಳು ಪಿಸ್ತೂಲಿನಿಂದ ಹೊರ ಹಾರುತ್ತಿವೆಯೇ ? ಇಂತಹ ನೂರಾರು ಪ್ರಶ್ನೆಗಳು ಹುಟ್ಟಲು ಕಾರಣ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಶ್ಯೂಟೌಟ್ ಗಳು.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನದಲ್ಲಿ ಮರು ಶೂಟೌಟ್ ವರದಿಯಾಗಿವೆ. ಕಳೆದ ತಿಂಗಳು ಎಂಟು ಕಿರಾತಕರ ಕಾಲುಗಳಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಇದೇ ರೀತಿ ಇಡೀ ರಾಜ್ಯದೆಲ್ಲೆಡೆ ಪೊಲೀರ ಬುಲೆಟ್ ಸದ್ದು ಮಾಡುತ್ತಿವೆ. ಈ ಪೊಲೀಸರ ಬುಲೆಟ್ ಸದ್ದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಪೊಲೀಸ್ ವಲಯದಲ್ಲಂತೂ ಭಾರೀ ಚರ್ಚೆ ಹುಟ್ಟು ಹಾಕಿದೆ.
ಫೆ. 09 ರಾಜಗೋಪಾಲ ನಗರ:
ಬಿಎಸ್ಪಿ ಮುಖಂಡ ಶ್ರೀನಿವಾಸ ಹತ್ಯೆ ಪ್ರಕರಣ ಆರೋಪಿ ಸಂತೋಷ್ ಕುಮಾರ್ ಅಲಿಯಾಸ್ ಇಲಿಕುಟ್ಟಿ ಎಂಬುವನ ಕಾಲಿಗೆ ಬೆಳಗಿನ ಜಾವ ರಾಜಗೋಪಾಲನಗರ ಪಿಎಸ್ಐ ಹಾದಿಮುನಿ ಬುಲೆಟ್ ಇಳಿಸಿದ್ದರು. ಪೊಲೀಸ್ ಪೇದೆಯೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪೊಲೀಸರು ಹೇಳುವ ಪ್ರಕಾರ ಈತನ ವಿರುದ್ಧ ಹತ್ತು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ. ಹತ್ತನೇ ಪ್ರಕರಣದಲ್ಲಿ ಗುಂಟೇಟು ತಿಂದು ಬಂಧನಕ್ಕೆ ಒಳಗಾಗಿದ್ದ.
ಫೆ. 10, ಜಯನಗರ ಪೊಲೀಸರು:
ಇದು ಮನೆಗಳ್ಳನ ಚೇಸಿಂಗ್ ಶ್ಯೂಟೌಟ್. ಸರಗಳ್ಳನೊಬ್ಬ ಸೆಕ್ಯುರಿಟಿ ಗಾರ್ಡ್ ಗೆ ಮಚ್ಚಿನಲ್ಲಿ ಹಲ್ಲೆ ನಡೆಸಿದ್ದು, ಮನೆಗಳ್ಳತನಕ್ಕೆ ಯತ್ನಿಸಿದ ಇಸ್ಮಾಯಿಲ್ ಎಂಬುವನ ಎಡಗಾಲಿಗೆ ಗುಂಡು ಹೊಡೆದು ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಬಂಧಿಸಿದ್ದರು. ಪೊಲೀಸರ ಪ್ರಕಾರ ಈತನ ವಿರುದ್ಧ 30 ಕ್ಕೂ ಹೆಚ್ಚು ಅಪರಾಧ ಪ್ರಕರಣ ದಾಖಲಾಗಿವೆ. ಈತನ ಎಡಗಾಲಿಗೆ ಪೆಟ್ಟು ಬಿದ್ದಿದೆ. ಮೂರು ಗಂಟೆ ಸಿನಿಮಾ ಮಾದರಿಯಲ್ಲಿ ಆರೋಪಿಗಾಗಿ ಪೊಲೀಸರು ಚೇಸಿಂಗ್ ಮಾಡಿದ್ದರು ಎಂಬುದು ವಿಶೇಷ. ಒಬ್ಬ ಸರಗಳ್ಳ ಮೂವತ್ತು ಪ್ರಕರಣ ದಾಖಲಾದ ಬಳಿಕ ಪೊಲೀಸರ ಗುಂಡೇಟು ತಿಂದು ಬಂಧಿಯಾಗಿದ್ದಾನೆ.
ಫೆ. 11 ಯಲಹಂಕ ಪೊಲೀಸರು :
ಇಂದು ಬೆಳಗ್ಗೆ ಯಲಹಂಕ ಪೊಲೀಸರು ದರೋಡೆಕೋರ ಕಂ ರೌಡಿ ಶೀಟರ್ ಶಬರೀಶ್ ಅಲಿಯಾಸ್ ಅಬ್ಬಿ ಎಂಬುವನ ಎಡಗಾಲಿಗೆ ಗುಂಡು ಇಳಿಸಿ ಬಂಧಿಸಿದ್ದಾರೆ. ಆರೋಪಿ ಗ್ಯಾಂಗ್ ಜೈಲಿನಿಂದ ಬಂದ ಬಳಿಕ ಜನರಿಗೆ ಉಪಟಳ ನೀಡುತ್ತಿತ್ತು. ಬೈಕ್ ಮತ್ತು ಕಾರು ಕದಿಯುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಇಷ್ಟು ವರ್ಷ ಶಬರೀಶ್ ರಾಜಾರೋಷವಾಗಿ ಅಪರಾಧ ಕೃತ್ಯ ಎಸಗುತ್ತಿದ್ದ. ಇದರಲ್ಲೂ ಸಹ ಒಬ್ಬ ಪೊಲೀಸ್ ಪೇದೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರಿಮಿನಲ್ ಗಳಿಗೆ ಬುಲೆಟ್ ಮೂಲಕ ಪಾಠ ಕಲಿಸುವ ಹಂತಕ್ಕೆ ರಾಜಧಾನಿಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆಯಾ ? ಎಂಬ ಪ್ರಶ್ನೆ ಮೂಡುತ್ತದೆ.
ಜನವರಿಯಲ್ಲಿ ಎಂಟು ಪ್ರಕರಣ:
ಫೆಬ್ರವರಿಯಲ್ಲಿ ಮೂರು ದಿನದಲ್ಲಿ ಮೂರು ಶ್ಯೂಟೌಟ್ ವರದಿಯಾದರೆ, ಜನವರಿ ತಿಂಗಳದ್ದು ಬೇರೆಯದ್ದೇ ಕಥೆ. ಬರೋಬ್ಬರಿ ಒಂದೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಎಂಟು ಶ್ಯೂಟೌಟ್ ಪ್ರಕರಣ ದಾಖಲಾಗಿವೆ. ಬಹುತೇಕ ಪಾತಕಿಗಳ ಮೊಣಕಾಲು ಕೆಳಗೆ ಇಲ್ಲಾ ಎಡ, ಇಲ್ಲಾ ಬಲ ಕಾಲಿಗೆ ಬುಲೆಟ್ ಗಳು ಹಾರಿವೆ. ಗುಂಡೇಟು ತಿಂದು ಒಬ್ಬ ಜೀವ ಬಿಟ್ಟ ಎನ್ನುವ ಮಟ್ಟಿಗೆಯೂ ಒಂದು ಶ್ಯೂಟೌಟ್ ಸದ್ದು ಮಾಡಿಲ್ಲ. ಪಾತಕ ಲೋಕವನ್ನು ಅಡಗಿಸಲು ಪೊಲೀಸರು ಬುಲೆಟ್ ಗಳು ಮಾತನಾಡುತ್ತಿವೆ ಎಂಬ ಭಾವನೆ ಬಂದರೂ ಮೂಲದಲ್ಲಿ ನಾನಾ ಸಮಸ್ಯೆಗೆ ಎಡೆ ಮಾಡಿಕೊಡುತ್ತವೆ. ಈ ಪರಿಯ ಶ್ಯೂಟೌಟ್ ಆಗುತ್ತಿರುವುದು ನೋಡಿದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಟಾರ್ಗೆಟ್ ಮಾಡಿದ್ದಾರಾ ಎಂಬ ಅನುಮಾನ ಕೂಡ ಮೂಡದೇ ಇರದು !
ಪಾತಕ ಲೋಕ ನಿಗ್ರಹ ಎಲ್ಲಿ ?
ರಾಜಧಾನಿ ಅಂದಮೇಲೆ ರೌಡಿಸಂ, ಸರಗಳ್ಳತನ, ಮನೆಗಳ್ಳತನ ಇದ್ದೇ ಇರುತ್ತದೆ. ವರದಿಯಾದ ಕೂಡಲೇ ಅಂತಹ ಪ್ರಕರಣಗಳಿಗೆ ಪೊಲೀಸರು ತನಿಖೆಯಿಂದ ಹಿಡಿದು ಶಿಕ್ಷೆಯಾಗುವ ವರೆಗೂ ಸಮರ್ಥವಾಗಿ ನಿಬಾಯಿಸಿದರೆ, ಆರೋಪಿಗಳ ಸುಳಿವು ಇರಲಿಕ್ಕೆ ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಪೊಲೀಸರ ಶ್ಯೂಟೌಟ್ ಎಂದರೆ ಜನ ಸಾಮಾನ್ಯರೇ ಬೆಚ್ಚಿ ಬೀಳಿಸುತ್ತಿದ್ದರು. ಇಂದು ಶ್ಯೂಟೌಟ್ ಎಂಬುದು ದಿನ ನಿತ್ಯ ಸಾಮಾನ್ಯವಾಗಿ ಬಿಟ್ಟಿದೆ.
ಅಪಾಯಕಾರಿ ಬೆಳವಣಿಗೆ :
ಪೊಲೀಸರ ಆತ್ಮರಕ್ಷಣೆ ಹೆಸರಿನಲ್ಲಿ ಮಾಡುತ್ತಿರುವ ಶ್ಯೂಟೌಟ್ ಗಳು ತುಂಬಾ ಅಪಾಯಕಾರಿ. ಹಿರಿಯ ಅಧಿಕಾರಿಗಳು ಸೂಚನೆ ನೀಡಬಹುದು, ಅವರು ಹೇಳಿದರೆಂದು ಮೊಣಕಾಲು ಕೆಳಗೆ ಬುಲೆಟ್ ಹಾರಿಸಿ ಪೊಲೀಸ್ ಸ್ಟಾರ್ ಪಕ್ಕದಲ್ಲಿ ಶ್ಯೂಟೌಟ್ ಕೀರ್ತಿ ಹಾಕಿಕೊಳ್ಳುವ ಹಿಂದಿನ ಕಾನೂನು ತೊಡಕ ಸಮಸ್ಯೆಗಳ ಬಗ್ಗೆ ಯಾರೂ ಸಹ ಅರ್ಥ ಮಾಡಿಕೊಳ್ಳುತ್ತಿಲ್ಲ. ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳು ಹತ್ತು ದಿನದಲ್ಲಿ ಹದಿಮೂರು ಶ್ಯೂಟೌಟ್ ಆಗಿದೆ. ಹದಿಮೂರು ಪಾತಕಿಗಳ ಪೈಕಿ ಎಲ್ಲರೂ ಜೀವಂತವಾಗಿದ್ದಾರೆ. ಬಹುತೇಕ ಎಲ್ಲರ ಎಡ ಇಲ್ಲ ಬಲ ಗಾಲಿನ ಮೊಣಕಾಲಿಗೆ ಗುಂಡೇಟುಗಳು ಬಿದ್ದಿವೆ. ಪ್ರತಿ ಶ್ಯೂಟೌಟ್ ನಲ್ಲಿ ಒಬ್ಬ ಇಲ್ಲವೇ ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ. ಇಷ್ಟು ಶ್ಯೂಟೌಟ್ ಪ್ರಕರಣಗಳಲ್ಲಿ ಎಲ್ಲರೂ ಒಂದೇ ಜಾಗಕ್ಕೆ ಹೇಗೆ ಗುಂಡು ಹಾರಿಸಲು ಸಾಧ್ಯ ? ಆರೋಪಿ ತಪ್ಪಿಸಿಕೊಂಡು ಹೋಗಬೇಕಾದರೆ ಮೊಣಕಾಲಿನ ಕೆಳಗೆ ಹೇಗೆ ಗುಂಡು ಬೀತ್ತು. ಅದೂ ಎಲ್ಲಾ ಪ್ರಕರಣಗಳಲ್ಲಿ ? ಎಂಬ ಮೂಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ಮಾನವ ಹಕ್ಕುಗಳ ಸಂಸ್ಥೆಗಳು ಮುಂದಾದರೆ, ಗುಂಡು ಹಾರಿಸಿದವರೇ ಬಲಿಪಶುಗಳಾಗಬೇಕಾಗುತ್ತದೆ. ಯಾರೂ ಪ್ರಶ್ನಿಸಿಲ್ಲ ಎಂದರೆ ಸರಿ, ಈ ಪರಿಯ ಶ್ಯೂಟೌಟ್ ಗಳ ಬಗ್ಗೆ ಯಾವುದಾದರೂ ಮಾನವ ಹಕ್ಕು ಸಂಘಟನೆ ಮಾಹಿತಿ ಕಲೆ ಹಾಕಿದರೆ, ಶ್ಯೂಟೌಟ್ ಹೆಸರಿನ ಮುಂದೆ ಹೆಸರು ಹಾಕಿಕೊಂಡಿರುವರ ಸ್ಥಿತಿ ಏನಾಗಬೇಕು ? ಪೊಲೀಸರಿಗೆ ಹಾಗಿರುವ ಗಾಯಗಳು, ಸಾಕ್ಷಿ ಸಾರಬಲ್ಲವೇ ? ಇಲ್ಲವೇ ಕಿರಾತಕರ ಮೊಣ ಕಾಲು ಗಾಯಗಳು ಸಮರ್ಥಿಸಿಕೊಳ್ಳಬಲ್ಲವೇ ? ಇದ್ಯಾವುದರ ಅರಿವೇ ಇಲ್ಲದೇ ಶ್ಯೂಟೌಟ್ ಮಾಡುತ್ತಿರುವುದು ಅಪರಾಧಿಗಳಿಗೆ ಅಲ್ಲ, ಶ್ಯೂಟೌಟ್ ಮಾಡಿದವರಿಗೆ ಸಂಕಷ್ಟ ತಂದಿಡುವ ಸ್ಥಿತಿ. ಅಪರಾಧ ಆಗದಂತೆ ಕ್ರಮ ಜರುಗಿಸುವ ಪೊಲೀಸಿಂಗ್ ಸಮಾಜ ಬಯಸುತ್ತದೆ. ಅಪರಾಧ ಕೃತ್ಯ ಆದಲ್ಲಿ ಅದನ್ನು ಕಾನೂನು ರೀತಿ ಹೇಗೆ ಶಿಕ್ಷಿಸಬೇಕು ಎಂಬುದನ್ನು ಕಾನೂನು ಹೇಳುತ್ತೆ. ಯಾವ ಕ್ಯಾಟರಿಗೂ ಸೇರದ ಶ್ಯೂಟೌಟ್ ಗಳು ವಾಸ್ತವ ಅರಿಯದೇ ಕಿರಿಯ ಪೊಲೀಸ್ ಅಧಿಕಾರಿಗಳು ಬುಲೆಟ್ ಹಾರಿಸಿ ಸಮಸ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.
ಅಪರಾಧ ಕೃತ್ಯ ಜರುಗಿದ ಕೂಡಲೇ ಆರೋಪಿಗಳನ್ನು ಬಂಧಿಸುವ ಕ್ಷಣದಲ್ಲಿ ಶ್ಯೂಟೌಟ್ ಆಗಬಹುದು ಎನ್ಕೌಂಟರ್ ಆಗಬಹುದು ಇಲ್ಲವೇ ಪೊಲೀಸರೇ ಗಾಯ ಮಾಡಿಕೊಳ್ಳಬಹುದು. ಆದರೆ ಇವತ್ತಿನ ಶ್ಯೂಟೌಟ್ ಹೆಸರಿನಲ್ಲಿ ಹಾರುತ್ತಿರುವ ಬುಲೆಟ್ ಗಳ ಬಗ್ಗೆ ನೋಡಿದರೆ ಅಚ್ಚರಿ ಮೂಡಿಸುತ್ತದೆ. ಇದು ಕ್ರಿಮಿನಲ್ ಗಳನ್ನು ರಕ್ಷಿಸಬೇಕು ಎಂಬ ಕಾಳಜಿ ಮಾತಲ್ಲ, ಬದಲಿಗೆ ಶ್ಯೂಟೌಟ್ ಹೆಸರಿನಲ್ಲಿ ಪೊಲೀಸರೇ ಮೈಮೇಲೆ ಸಮಸ್ಯೆ ಎಳೆದುಕೊಳ್ಳಲು ಮುಂದಾಗಿದ್ದಾರಾ ಎಂಬ ಮೂಲ ಪ್ರಶ್ನೆ ಅಷ್ಟೇ !