ಮಂಡ್ಯದ ಹೇಮಗಿರಿಯಲ್ಲಿ ಜಲಧಾರೆ: ಪ್ರವಾಸಿಗರು ಭೇಟಿ ನೀಡುವ ಮುನ್ನ ಈ ವಿಚಾರಗಳನ್ನು ನೆನಪಿನಲ್ಲಿಡಿ
ಮಂಡ್ಯ, ಜುಲೈ 28: ಇದೀಗ ಚಿಕ್ಕಮಗಳೂರು ಹಾಸನದಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ಪರಿಣಾಮ ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ಕೆ.ಆರ್.ಪೇಟೆಗೆ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಹೇಮಗಿರಿ ಅಣೆಕಟ್ಟೆಯು ಭರ್ತಿಯಾಗಿ ನೀರು ಜಲಲ ಜಲಧಾರೆಯಾಗಿ ಧುಮ್ಮಿಕ್ಕುವ ದೃಶ್ಯಯ ನಯನಮನೋಹರವಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಹೇಮಾವತಿ ನದಿ ಉಕ್ಕಿ ಹರಿದು ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ನೀರನ್ನು ಹೊರಕ್ಕೆ ಬಿಟ್ಟಾಗ ಅದು ಹೇಮಗಿರಿ ಅಣೆಕಟ್ಟೆಯಲ್ಲಿ ತುಂಬಿ ಹರಿಯುವಾಗ ಕಂಡು ಬರುವ ದೃಶ್ಯಗಳು ಸುಂದರವಾಗಿರುತ್ತವೆ. ಈ ದೃಶ್ಯಗಳನ್ನು ನೋಡುವುದೇ ಒಂಥರಾ ಮಜಾಕೊಡುತ್ತದೆ. ಹೀಗಾಗಿಯೇ ಇಲ್ಲಿನ ನಿಸರ್ಗ ನೋಟವನ್ನು ಸವಿಯಲೆಂದೇ ಪ್ರವಾಸಿಗರು ಇತ್ತ ಬರುವುದು ಮಾಮೂಲಿಯಾಗಿದೆ.

ಹೇಮಗಿರಿ ನಿಸರ್ಗ ಸುಂದರ ತಾಣವಾಗಿರುವುದರಿಂದ ಸಾಮಾನ್ಯವಾಗಿ ಎಲ್ಲ ದಿನಗಳಲ್ಲೂ ಪೇಟೆ, ಪಟ್ಟಣದ ಜನಜಂಗುಳಿಯಲ್ಲಿ ಒತ್ತಡದಿಂದ ಕೆಲಸ ಮಾಡುವ ಜನ ಇಲ್ಲಿಗೆ ಭೇಟಿ ನೀಡಿ ಒಂದಷ್ಟು ಸಮಯವನ್ನು ಕಳೆದು ಹೋಗುವುದು ಮಾಮೂಲಿಯಾಗಿದೆ. ಆದರೆ ಈಗಂತೂ ಅಣೆಕಟ್ಟೆ ಮೇಲಿಂದ ಧುಮ್ಮಿಕ್ಕಿ ಹರಿಯುವ ದೃಶ್ಯವಂತು ವರ್ಣಾತೀತವಾಗಿದೆ.
ಉಲ್ಲಾಸಗೊಳಿಸುವ ಸುಂದರ ನೋಟ
ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಒಂದು ಕ್ಷಣ ನಿಂತು ನಿಸರ್ಗದ ಸುಂದರತೆಯನ್ನು ಸವಿಯುತ್ತಾ ಕಣ್ಣು ಹಾಯಿಸಿದರೆ ಇಲ್ಲಿಂದ ಕಂಡು ಬರುವ ನಿಸರ್ಗ ಸುಂದರ ನೋಟ ಒಂದೇ ಎರಡೇ.. ಧುಮ್ಮಿಕ್ಕುವ ನೀರ ಝರಿ... ಸುತ್ತಲೂ ಹರಡಿ ನಿಂತ ಹಚ್ಚ ಹಸಿರಿನ ಚೆಲುವು... ಅದರಾಚೆಗೆ ಬೀಸಿ ಬರುವ ತಂಗಾಳಿ ನಮ್ಮೆಲ್ಲ ನೋವುಗಳನ್ನು ಮರೆಸಿ ಮನಸ್ಸನ್ನೆಲ್ಲ ಉಲ್ಲಾಸಗೊಳಿಸಿ ಬಿಡುತ್ತದೆ.

ಇಲ್ಲಿಗೆ ಬರುವ ಪ್ರವಾಸಿಗರು ನಿಸರ್ಗದೊಂದಿಗೆ ಸಮಯ ಕಳೆಯುವುದರ ಜತೆಗೆ ಪಕ್ಕದ ಚಂದಗೋನಹಳ್ಳಿಯಲ್ಲಿರುವ ಅಮ್ಮನವರ ದೇವಸ್ಥಾನಕ್ಕೂ ತೆರಳಿ ವಿವಿಧ ಸೇವೆ ಸಲ್ಲಿಸಲು ಅವಕಾಶವಿದೆ. ಇಲ್ಲಿ ವಾರದ ನಾಲ್ಕು ದಿನಗಳ ಕಾಲ ಪರ, ಬೀಗರ ಔತಣ, ನಾಮಕರಣ, ಸೇರಿದಂತೆ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಇನ್ನು ಈ ತಾಣ ಭೃಗ ಮಹರ್ಷಿಗಳು ತಪಸ್ಸು ಮಾಡಿದ ಪವಿತ್ರ ಸ್ಥಳವೂ ಹೌದು.
ಇದೀಗ ಪ್ರವಾಹ ಪರಿಸ್ಥಿತಿ ನಿರ್ಮಾಣ
ಇದೆಲ್ಲದರ ನಡುವೆ ಹೇಮಗಿರಿ ಬಳಿಯೇ ಹೇಮಾವತಿ, ಕಾವೇರಿ, ಲಕ್ಷ್ಮಣತೀರ್ಥ ನದಿ ಸಂಗಮ ಕ್ಷೇತ್ರವಿದ್ದು, ಈ ಸ್ಥಳಗಳಿಗೆ ಆಗಾಗ್ಗೆ ಪ್ರವಾಸಿಗರು ಬರುತ್ತಿರುತ್ತಾರೆ. ಇದೀಗ ಹೇಮಾವತಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿರುವ ಪರಿಣಾಮ ಕೆ.ಆರ್.ಪೇಟೆ ತಾಲೂಕಿನ ಗದ್ದೆ ಹೊಸೂರು, ಚಿಕ್ಕಮಂದಗೆರೆ, ಶ್ರವಣೂರು, ಬಂಡಿಹೊಳೆ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ನುಗ್ಗಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ನದಿಯು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಎಚ್ಚರವಾಗಿರುವುದರ ಜೊತೆಗೆ ನದಿಗೆ ಬಟ್ಟೆ ಒಗೆಯಲು, ದನಕರುಗಳಿಗೆ ನೀರು ಕುಡಿಸಲು, ಯುವಜನರು ಈಜಲು, ಮೀನು ಹಿಡಿಯಲು ನದಿಗೆ ಇಳಿಯಬಾರದು ಎಂದು ಎಚ್ಚರಿಸಲಾಗಿದೆ. ಜತೆಗೆ ನದಿಯ ಪಾತ್ರದ ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು. ನದಿಗೆ ಇಳಿಯುವುದು, ದನಕರುಗಳನ್ನು ತೊಳೆಯಲು ನದಿಗೆ ಹೋಗುವುದು ಸೇರಿದಂತೆ ಯಾವುದೇ ಕೆಲಸಗಳಿಗೆ ನದಿಯ ಪಾತ್ರದತ್ತ ತೆರಳ ಬಾರದು ಎಂದು ತಿಳಿಸಿ, ಎಚ್ಚರಿಕೆ ಸೂಚನಾ ಫಲಕಗಳನ್ನು ಹಾಕಿಸಲಾಗಿದೆ.
ನೀರಿನಲ್ಲಿ ಹುಚ್ಚಾಟ ನಡೆಸಬೇಡಿ
ಒಟ್ಟಾರೆಯಾಗಿ ಹೇಳಬೇಕೆಂದರೆ ಹೇಮಗಿರಿ ಒಂದೊಳ್ಳೆಯ ಸುಂದರ ತಾಣವಾಗಿದ್ದು, ಇದೀಗ ಪ್ರವಾಹ ಪರಿಸ್ಥಿತಿ ಇರುವ ಕಾರಣ ಅತ್ತ ಹೋಗುವ ಸಾಹಸ ಮಾಡುವುದು ಒಳ್ಳೆಯದಲ್ಲ. ಮಳೆ ಕಡಿಮೆಯಾಗಿ ಪ್ರವಾಹ ಪರಿಸ್ಥಿತಿ ಕಡಿಮೆಯಾದ ಬಳಿಕ ಅತ್ತ ತೆರಳುವುದು ಒಳ್ಳೆಯದು. ಇನ್ನು ಇಲ್ಲಿನ ನೀರಿನಲ್ಲಿ ಹುಚ್ಚಾಟ ನಡೆಸದೆ, ನಿಸರ್ಗ ಸೌಂದರ್ಯವನ್ನು ವೀಕ್ಷಿಸಿ ಹಿಂತಿರುಗುವುದು ಕ್ಷೇಮಕರ ಎಂಬುದನ್ನು ಮರೆಯಬಾರದು.












Click it and Unblock the Notifications