Vande Bharat Express: ಕೊಚುವೇಲಿ-ಮಂಗಳೂರು ವಿಶೇಷ ರೈಲು, ವೇಳಾಪಟ್ಟಿ
ಮಂಗಳೂರು, ಜೂನ್ 30: ದಕ್ಷಿಣ ರೈಲ್ವೆ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಕೊಚುವೇಲಿ-ಮಂಗಳೂರು ಸೆಂಟ್ರಲ್ ನಿಲ್ದಾಣದ ನಡುವೆ ವಿಶೇಷ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲಿದೆ. ಈ ರೈಲಿನಲ್ಲಿ ಸಂಚಾರ ನಡೆಸಲು ಮುಂಗಡ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.
ಕೊಚುವೇಲಿ-ಮಂಗಳೂರು ಸೆಂಟ್ರಲ್ ನಡುವೆ ಒಂದು ಟ್ರಿಪ್ ವಿಶೇಷ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ಜುಲೈ 1ರ ಸೋಮವಾರ ಈ ರೈಲು ಸಂಚಾರ ನಡೆಸಲಿದೆ. ಈ ಮಾರ್ಗದಲ್ಲಿ ರೈಲು ನಂಬರ್ 06001 ಸಂಚಾರ ನಡೆಸಲಿದೆ. 8 ಬೋಗಿಯ ರೈಲು ಇದಾಗಿದೆ.

ರೈಲಿನ ವೇಳಾಪಟ್ಟಿ: ದಕ್ಷಿಣ ರೈಲ್ವೆ ಕೊಚುವೇಲಿ-ಮಂಗಳೂರು ಸೆಂಟ್ರಲ್ ನಡುವಿನ ಒಂದು ಟ್ರಿಪ್ ವಿಶೇಷ ವಂದೇ ಭಾರತ್ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ರೈಲು ಸಂಖ್ಯೆ 06001 ಕೊಚುವೇಲಿ ನಿಲ್ದಾಣದಿಂದ ಬೆಳಗ್ಗೆ 10.45ಕ್ಕೆ ಹೊರಟು, ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ 22 ಗಂಟೆಗೆ (ಅದೇ ದಿನ) ಆಗಮಿಸಲಿದೆ.
ಕೊಚುವೇಲಿ ನಿಲ್ದಾಣದಿಂದ ಹೊರಡುವ ರೈಲು ಕೊಲ್ಲಂ (11.40/11.43), ಕೊಟ್ಟಾಯಂ (12.55/ 12.58), ಎರ್ನಾಕುಲಂ ಟೌನ್ (14.02/ 14.05), ತ್ರಿಶೂರ್ (15.20/ 15.23), ಶೋರ್ನೂರ್ (16.15/ 16.20), ತಿರೂರು (16.50/ 16.52), ಕೊಯಿಕ್ಕೋಡ್ ಮೈನ್ (17.32/ 17.35), ಕಣ್ಣೂರು (18.47/ 18.50), ಕಾಸರಗೋಡು (20.32/20.34) ಮೂಲಕ ಮಂಗಳೂರು ಸೆಂಟ್ರಲ್ ತಲುಪಲಿದೆ.
ತಿರುವನಂತಪುರಂ-ಮಂಗಳೂರು ಸೆಂಟ್ರಲ್, ಮಂಗಳೂರು-ಮಡಗಾಂವ್ ನಡುವೆ ಈಗಾಗಲೇ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಈ ಕೊಚುವೇಲಿ-ಮಂಗಳೂರು ಸೆಂಟ್ರಲ್ ನಡುವಿನ ರೈಲು ಒಂದು ಟ್ರಿಪ್ ಮಾತ್ರ ಸಂಚಾರ ನಡೆಸುವ ವಿಶೇಷ ರೈಲಾಗಿದೆ.
ಈಗಾಗಲೇ ಭಾರತೀಯ ರೈಲ್ವೆ ಹಲವು ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ವಿಶೇಷ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಿದೆ. ಇದೇ ಮಾದರಿಯಲ್ಲಿ ಕೊಚುವೇಲಿ-ಮಂಗಳೂರು ಸೆಂಟ್ರಲ್ ಮಾರ್ಗದಲ್ಲಿ ಜುಲೈ 1ರಂದು ಮಾತ್ರ ವಿಶೇಷ ರೈಲು ಓಡಿಸುತ್ತಿದೆ.
ರಾಜಧಾನಿ ಬೆಂಗಳೂರು ಮತ್ತು ಕರ್ನಾಟಕದ ಕರಾವಳಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸಲು ವಂದೇ ಭಾರತ್ ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ. ಈ ಮಾರ್ಗದಲ್ಲಿ ರೈಲು ಓಡಿಸಲು ಭಾರತೀಯ ರೈಲ್ವೆ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಶೀಘ್ರದಲ್ಲಿಯೇ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿ, ಬೆಂಗಳೂರಿನ ವಿವಿಧ ರೈಲ್ವೆ ಯೋಜನೆಗಳನ್ನು ಪರಿಶೀಲಿಸಿದರು. ಆಗ ವಂದೇ ಭಾರತ್ ರೈಲಿನ ದರದ ಬಗ್ಗೆ ಸಹ ಪ್ರಸ್ತಾಪವಿದೆ.
ಸಚಿವ ವಿ. ಸೋಮಣ್ಣ ಮಾತನಾಡಿ, "ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲುಗಳ ದರಗಳ ಪರಿಷ್ಕರಣೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಕುರಿತು ಹಲವು ಸುತ್ತಿನ ಚರ್ಚೆಗಳು ನಡೆದಿವೆ" ಎಂದು ಹೇಳಿದರು.
"ವಂದೇ ಭಾರತ್ ರೈಲಿನ ದರಗಳು ಅಧಿಕ ಎಂಬ ಹಲವು ದೂರುಗಳು ಬಂದಿವೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕ್ರಮವನ್ನು ಕೈಗೊಳ್ಳಲಾಗುತ್ತದೆ" ಎಂದು ವಿ. ಸೋಮಣ್ಣ ಭರವಸೆ ನೀಡಿದ್ದಾರೆ.











Click it and Unblock the Notifications