Vande Bharat Express: ಇನ್ಮುಂದೆ ರಾಜ್ಯದ ಈ ರೈಲು ನಿಲ್ದಾಣದಲ್ಲೂ ವಂದೇ ಭಾರತ್ ಎಕ್ಸ್ಪ್ರೆಸ್ ನಿಲುಗಡೆ
Vande Bharat Express: ದೇಶದಲ್ಲಿ ವಂದೇ ಭಾರತ್ ಆರಂಭವಾಗಿನಿಂದಲೂ ಜನಮನ್ನಣೆ ಪಡೆಯುತ್ತಲೇ ಬಂದಿದೆ. ಅಲ್ಲದೆ, ಕರ್ನಾಟಕದ ಬಹುತೇಕ ನಗರಗಳಲ್ಲಿ ವಂದೇ ಭಾರತ್ ರೈಲು ಓಡುತ್ತಿದ್ದು, ಕೆಲವೆಡೆ ಮಾತ್ರ ನಿಲುಗಡೆಯಿದೆ. ಇನ್ನೂ ಕೆಲವು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ ಎಂದು ಎನ್ನುವ ಆರೋಪಗಳಿವೆ. ಈ ನಡುವೆಯೇ ತುಮಕೂರಿನ ಮಾರ್ಗದಲ್ಲಿ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದೆ.
ವಂದೇ ಭಾರತ್ ರೈಲು ತುಮಕೂರು ರೈಲ್ವೆ ನಿಲ್ದಾಣದಲ್ಲೂ ನಿಲುಗಡೆಗೆ ಆದೇಶ ನೀಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.

ತುಮಕೂರಿನಲ್ಲಿ ನೂತನ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ನಗರದ ರೈಲ್ವೆ ನಿಲ್ದಾಣಕ್ಕೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರು ಹಾಗೂ ಕ್ಯಾತಸಂದ್ರ ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗಾ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಸಂಘ ಸಂಸ್ಥೆಗಳ ಮನವಿ ಬಂದಿವೆ. ಈ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದರು.
ಶ್ರವಣಬೆಳಗೊಳ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಮೇಲ್ದರ್ಜೆಗೇರಿಸಲು ತಲಾ 7 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ತುಮಕೂರಿನಿಂದ ಅರಸೀಕೆರೆವರೆಗೂ 220 ಕೋಟಿ ರೂಪಾಯಿ ವೆಚ್ಚದಲ್ಲಿ ಆಟೋಮೆಟಿಕ್ ಸಿಗ್ನಲ್ ಅಳವಡಿಸಲು ಮಂಜೂರಾತಿ ಮಾಡಲಾಗಿದೆ. ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯನ್ನು 2026ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.
ಅಪಘಾತ ತಪ್ಪಿಸಲು ಸ್ಕೈವಾಕ್ ನಿರ್ಮಾಣ: ನೆಲಮಂಗಲ-ಶಿರಾವರೆಗೂ ಆರು ಪಥದ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ವೇಗ ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಬಳಿ ಜನರು ರಸ್ತೆ ದಾಟಲು ಹಾಗೂ ಅಪಘಾತ ತಪ್ಪಿಸಲು ಸ್ಕೈವಾಕ್ ನಿರ್ಮಾಣ ಮಾಡಲಾಗುವುದು ಎಂದರು.
ಜಲಶಕ್ತಿ ಯೋಜನೆಗೆ ಕೇಂದ್ರದಿಂದ ಶೇಕಡ 49, ರಾಜ್ಯ ಸರ್ಕಾರದಿಂದ ಶೇಕಡ 51ರಷ್ಟು ಹಣ ನೀಡಬೇಕು. ಕೃಷಿ ಸಿಂಚಾಯಿ ಯೋಜನೆಯನ್ನು ರಾಜ್ಯ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಸಮರ್ಪಕವಾಗಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.












Click it and Unblock the Notifications