ಉತ್ತರ ಕನ್ನಡ; ಕೋವಿಡ್ ಬಳಿಕ ಚೇತರಿಕೆ ಹಾದಿಯಲ್ಲಿ ಪ್ರವಾಸೋದ್ಯಮ; ಪ್ರವಾಸಿಗರ ಒಲವು ಬೀಚ್ಗಳತ್ತ
ಕಾರವಾರ, ಸೆಪ್ಟೆಂಬರ್, 28: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಆರ್ಭಟದಿಂದ ಎರಡು ವರ್ಷಗಳ ಕಾಲ ಪ್ರವಾಸೋದ್ಯಮಕ್ಕೂ ಕರಿನೆರಳು ಬಿದ್ದಂತಾಗಿತ್ತು. ಇದೀಗ ಮಹಾಮಾರಿಯ ಅಟ್ಟಹಾಸ ತಗ್ಗಿದ್ದು, ಪ್ರವಾಸೋದ್ಯಮ ಚಿಗುರೊಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಮಗಳು ಸಡಿಲಗೊಂಡ ಬಳಿಕವೂ ಕೆಲ ತಿಂಗಳುಗಳ ಕಾಲ ಬಿಕೋ ಎನ್ನುತ್ತಿದ್ದ ಪ್ರವಾಸಿ ತಾಣಗಳಲ್ಲಿ ಇದೀಗ ಪ್ರವಾಸಿಗರ ಸಂಖ್ಯೆ ದಿಢೀರ್ ಏರಿಕೆ ಆಗುತ್ತಲೇ ಇದೆ.
ಪ್ರವಾಸಿಗರ ಪಾಲಿಗೆ ತವರೂರು ಅಂತಲೇ ಪ್ರಸಿದ್ಧಿ ಆಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಕಣ್ಣು ಹಾಯಿಸಿದಲೆಲ್ಲ ಪ್ರವಾಸಿ ತಾಣಗಳೇ ಕಾಣಸಿಗುತ್ತವೆ. ವರ್ಷವಿಡಿ ತುಂಬಿ ತುಳುಕುತ್ತಿದ್ದ ಪ್ರವಾಸಿ ತಾಣಗಳಿಗೆ 2019ರಲ್ಲಿ ಏಕಾಏಕಿ ವಕ್ಕರಿಸಿದ್ದ ಮಹಾಮಾರಿ ಆರ್ಭಟಕ್ಕೆ ಎಲ್ಲ ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರಲಾಗಿತ್ತು. ಬಳಿಕ ಸ್ವಲ್ಪ ದಿನಗಳ ಕಾಲ ಅವಕಾಶ ಕಲ್ಪಿಸಲಾಗಿತ್ತು. ಆದರೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿತ್ತು.
ಮೈಸೂರಿನಲ್ಲಿ ಗಮನ ಸೆಳೆದ ವಿಶ್ವ ಪ್ರವಾಸೋದ್ಯಮ ಜಾಥಾ
ಆದರೆ ಇದೀಗ ಎಲ್ಲೆಡೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಅಂಕಿ ಅಂಶದಂತೆ ಈ ವರ್ಷದ ಆಗಸ್ಟ್ ತಿಂಗಳವರೆಗೆ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಮತ್ತು 2019ರ ಕೋವಿಡ್ ಪೂರ್ವದಲ್ಲಿ ಇಡೀ ವರ್ಷ ಬಂದಿರುವ ಪ್ರವಾಸಿಗರ ಸಂಖ್ಯೆಯ ಒಂದೇ ಆದಂತಿದೆ. ಅಲ್ಲದೆ ಈ ವರ್ಷವೂ ದಸರಾ ರಜೆ ಇರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.
ಪ್ರವಾಸಿಗರ ಒಲವು ಪ್ರವಾಸಿ ತಾಣಗಳತ್ತ
ಇನ್ನು ಜಿಲ್ಲೆಯಲ್ಲಿ ಪ್ರಮುಖವಾಗಿ ಗೋಕರ್ಣ, ಮುರುಡೇಶ್ವರ, ಹೊನ್ನಾವರ, ಕಾರವಾರದ ಕಡಲ ತೀರಗಳಲ್ಲಿ, ಯಲ್ಲಾಪುರ, ಸಿದ್ದಾಪುರ ಭಾಗದ ಜಲಪಾತಗಳಿಗೆ, ದಾಂಡೇಲಿ, ಜೊಯಿಡಾ ಭಾಗದ ಹೋಮ್ ಸ್ಟೇಗಳಿಗೆ ಮತ್ತು ರೆಸಾರ್ಟ್ಗಳಿಗೆ, ಜಲಸಾಹಸಿ ಕ್ರೀಡೆಗಳತ್ತ ಭೇಟಿ ನೀಡು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಮತ್ತೆ ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆಗಳು
ಪ್ರವಾಸೋದ್ಯಮ ಇಲಾಖೆ ಅಂಕಿ ಅಂಶದ ಪ್ರಕಾರ ಈ ವರ್ಷದ ಆಗಸ್ಟ್ ತಿಂಗಳ ವರೆಗೆ ಜಿಲ್ಲೆಗೆ 58.58 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. 2021ರಲ್ಲಿ 34.20 ಲಕ್ಷ, 2020ರಲ್ಲಿ 22.74 ಲಕ್ಷ ಹಾಗೂ 2019ರಲ್ಲಿ 48.93 ಲಕ್ಷ ಜನರು ಭೇಟಿ ನೀಡಿದ್ದರು. ಆದರೆ ಕಳೆದ ಕೋವಿಡ್ ವರ್ಷಗಳಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಜಿಲ್ಲೆಯ ಪ್ರವಾಸೋದ್ಯಮ ಕೂಡ ಚೇತರಿಕೆ ಹಾದಿಯತ್ತ ಸಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ. ಮುರುಡೇಶ್ವರದಲ್ಲಿ ಜಲಸಾಹಸಿ ಕ್ರೀಡೆಗಳು ಆರಂಭವಾಗಿದ್ದು, ಕಾರವಾರ ಸೇರಿದಂತೆ ಇತರೆ ಭಾಗಗಳಲ್ಲಿ ಇದೀಗ ಆರಂಭವಾಗಬೇಕಿದೆ.
ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ
ಜಿಲ್ಲೆಯ ಪ್ರವಾಸಿ ತಾಣಗಳ ಪೈಕಿ ಅತಿ ಹೆಚ್ಚು ಪ್ರವಾಸಿಗರು ಗೋಕರ್ಣದ ಕಡಲ ತೀರಗಳಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ದೇಶ, ವಿದೇಶದಿಂದ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗೆ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬೀಚ್ಗಳಲ್ಲಿ ಸರಿಯಾದ ಸ್ನಾನ ಗೃಹ, ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇನ್ನು ಗೋಕರ್ಣದಲ್ಲಿ ಪ್ರವಾಸೋದ್ಯಮದ ಮೂಲಕ ಅದೆಷ್ಟೊ ಜನರು ಬದುಕು ಕಟ್ಟಿಕೊಂಡಿದ್ದಾರೆ. ಸ್ವದೇಶಿ ಪ್ರವಾಸಿಗರ ಜೊತೆಗೆ ವಿದೇಶಿ ಪ್ರವಾಸಿಗರು ಆಗಮಿಸುವುದರಿಂದ ಸೌಲಭ್ಯಗಳ ಕೊರತೆಯಿಂದ ವಿದೇಶ ಮಟ್ಟದಲ್ಲಿ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೂಡಲೇ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಕೆಲಸವನ್ನು ಮಾಡಬೇಕು ಎಂದು ಇಲ್ಲಿನ ಸ್ಥಳೀಯರಾದ ಗಣೇಶ ಭಟ್ ಆಗ್ರಹಿಸಿದ್ದಾರೆ.
ಇದೀಗ ಪ್ರವಾಸೋದ್ಯಮ ಚೇತರಿಕೆ
ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಪ್ರವಾಸೋದ್ಯಮ ಕಳೆಗುಂದಿತ್ತು. ಇದೀಗ ನಿಧಾನವಾಗಿ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದ್ದು, ಇದನ್ನೇ ನಂಬಿ ಬದುಕುತ್ತಿದ್ದವರ ಆರ್ಥಿಕ ಚಟುವಟಿಕೆ ಕೂಡ ಸುಧಾರಿಕೊಂಡಂತಾಗಿದೆ. ಆದರೆ ಸರ್ಕಾರ ಪ್ರವಾಸಿ ತಾಣಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಪ್ರವಾಸಿಗರಿಗೆ ಹೆಚ್ಚು ಅನುಕೂಲ ಮಾಡಿಕೊಡಬೇಕು ಎಂಬುದು ಪ್ರವಾಸಿಗರ ಆಗ್ರಹವಾಗಿದೆ.