ಆಷಾಢದಲ್ಲಿ ಪೂಜೆ ಪಡೆಯುವ ಚಾಮುಂಡೇಶ್ವರಿ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ: ವಿಶೇಷತೆ ಏನು?
ಮೈಸೂರು, ಜುಲೈ 16: ಆಷಾಢದಲ್ಲಿ ಶಕ್ತಿ ದೇವತೆಗಳನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರಿ, ಸಂಕಷ್ಟ ದೂರವಾಗಿ ಜೀವನ ಪಾವನವಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಆಷಾಢದಲ್ಲಿ ತಾಯಿ ಚಾಮುಂಡೇಶ್ವರಿಯ ಅವತಾರದ ಶಕ್ತಿದೇವತೆಗಳನ್ನು ಪೂಜಿಸಿ, ದರ್ಶನ ಮಾಡುತ್ತಾರೆ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲಿ ಭಕ್ತರ ದಂಡು ನೆರೆಯುತ್ತದೆ. ಅದರಲ್ಲೂ ಮೈಸೂರಿನ ಚಾಮುಂಡೇಶ್ವರಿ ಸೇರಿದಂತೆ ಆಕೆಯ ಏಳು ಸಹೋದರಿಯರನ್ನು ಪೂಜಿಸುವುದು ನಡೆಯುತ್ತದೆ.
ಇನ್ನು ಮೈಸೂರಿನ ಚಾಮುಂಡೇಶ್ವರಿಯ ಸಹೋದರಿಯರಲ್ಲಿ ಒಬ್ಬಳಾದ ಚಿಕ್ಕದೇವಮ್ಮ ಹೆಚ್.ಡಿ.ಕೋಟೆ ತಾಲೂಕಿನ ಪುರದ ಕಟ್ಟೆ ಬಳಿ ನೆಲೆ ನಿಂತಿದ್ದು, ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಯನ್ನು ದರ್ಶನ ಮಾಡುವಂತೆ ಚಿಕ್ಕದೇವಮ್ಮ ಸನ್ನಿಧಿಗೂ ಭಕ್ತರು ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರುವುದು ನಡೆಯುತ್ತದೆ. ಚಿಕ್ಕದೇವಮ್ಮ ಕೂಡ ನಿಸರ್ಗ ಸುಂದರ ಪರಿಸರದಲ್ಲಿ ನೆಲೆಸಿದ್ದು, ಇಲ್ಲಿಗೆ ಭಕ್ತರು ಮಾತ್ರವಲ್ಲದೆ, ಪ್ರವಾಸಿಗರು ಭೇಟಿ ನೀಡಿ ದೇವರ ದರ್ಶನ ಪಡೆದು, ನಿಸರ್ಗದ ಸುಂದರ ನೋಟವನ್ನು ಅನುಭವಿಸಿ ಹಿಂತಿರುಗುತ್ತಾರೆ.

ಚಿಕ್ಕದೇವಮ್ಮ ತಾಯಿ ಕೂಡ ಬೆಟ್ಟದ ಮೇಲೆಯೇ ನೆಲೆಸಿದ್ದು, ಭಕ್ತಿಯಿಂದ ಬರುವ ಭಕ್ತರನ್ನು ಹರಸಿ ಕಳುಹಿಸುತ್ತಾ ಬಂದಿದ್ದಾಳೆ. ಹೆಚ್.ಡಿ.ಕೋಟೆಗೆ ತೆರಳಿದವರು ಇಲ್ಲಿಗೆ ತೆರಳಿ ತಾಯಿಯ ಆಶೀರ್ವಾದ ಪಡೆದು ಬರಬಹುದಾಗಿದೆ. ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಪ್ರವಾಸಿ ತಾಣ ಹಾಗೂ ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿ ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿರುವುದು ಇಲ್ಲಿನ ವೈಶಿಷ್ಟ್ಯತೆಯಾಗಿದೆ.
ಶಿವನ ಮೊರೆಹೋದ ಋಷಿಮುನಿಗಳು
ಚಿಕ್ಕದೇವಮ್ಮ ತಾಯಿ ಬಗ್ಗೆ ಹೇಳಬೇಕೆಂದರೆ ಪೌರಾಣಿಕ ದಿನಗಳಿಗೆ ಹೋಗಬೇಕಾಗುತ್ತದೆ. ಋಷಿ ಮುನಿಗಳು ಸೇರಿದಂತೆ ಮನುಷ್ಯರಿಗೆ ರಾಕ್ಷಸರು ಹಿಂಸೆ ಕೊಡುತ್ತಿದ್ದ ಕಾಲ ಅದಾಗಿತ್ತು. ಇಂತಹ ಸಂದರ್ಭದಲ್ಲಿ ಮಹಾಬಲಬೆಟ್ಟದಲ್ಲಿ ನೆಲೆಸಿದ್ದ ಮಹಿಷಾಸುರ ರಾಕ್ಷಸ ನೀಡುತ್ತಿದ್ದ ತೊಂದರೆಯಿಂದ ನೊಂದ ಋಷಿಗಳು ಮತ್ತು ಜನರು ಶಿವನ ಮೊರೆ ಹೋದರು. ಆಗ ಪಾರ್ವತಿ ಎಲ್ಲ ದೇವರ ಶಕ್ತಿಯನ್ನು ಪಡೆದು ಬಂದು ಮಹಿಷಾಸುರನನ್ನು ಸಂಹರಿಸಿದಳು ಎನ್ನುವುದು ಪೌರಾಣಿಕ ಕಥೆಯಾಗಿದೆ.
ಈ ಕಥೆಯ ಬಗ್ಗೆ ಹೇಳುವುದಾದರೆ ಇಂದಿನ ಚಾಮುಂಡಿಬೆಟ್ಟವು ಅಂದು ಮಹಾಬಲಬೆಟ್ಟವಾಗಿತ್ತು. ಇಲ್ಲಿ ಮಹಿಷಾಸುರ ಎಂಬ ರಾಕ್ಷಸ ರಾಜ್ಯಭಾರ ಮಾಡುತ್ತಿದ್ದನು. ಈತ ಯಾವ ಗಂಡಸಿಂದಾಗಲೀ, ಯಾವ ಪ್ರಾಣಿಯಿಂದಾಗಲೀ ತನಗೆ ಮರಣ ಬಾರದಂತೆ ಸಾಕ್ಷಾತ್ ಪರಶಿವನಿಂದಲೇ ವರಪಡೆದಿದ್ದನು.
ಈ ವರ ಪಡೆದ ಮೇಲೆ ತನಗೆ ಯಾವುದೇ ಸಾವು ಬರಲ್ಲ ಎಂದು ನಂಬಿದ್ದ ಆತ ಅಹಂಕಾರದಿಂದ ಮೆರೆಯುತ್ತಿದ್ದನಲ್ಲದೆ, ಅದೇ ಮದದಲ್ಲಿ ಜನ ಹಾಗೂ ಋಷಿ ಮುನಿಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಾ ಯಜ್ಞಯಾಗಾದಿಗಳಿಗೆ ಅಡ್ಡಿಪಡಿಸುತ್ತಿದ್ದನು. ಈ ವೇಳೆ ಅವರೆಲ್ಲರೂ ದುಷ್ಟ ರಾಕ್ಷಸ ಮಹಿಷಾಸುರನಿಂದ ತಮ್ಮನ್ನು ಪಾರು ಮಾಡುವಂತೆ ಶಿವನ ಮೂಲಕ ಪಾರ್ವತಿಗೆ ಮೊರೆಹೋದರು.

ಮಹಿಷಾಸುರನ ಸಂಹರಿಸಿದ ಚಾಮುಂಡೇಶ್ವರಿ
ಈ ವೇಳೆ ಚಾಮುಂಡೇಶ್ವರಿ ತನ್ನ ಹದಿನೆಂಟು ಕರಗಳಲ್ಲೂ ಎಲ್ಲಾ ದೇವತೆಗಳಿಂದ ಪಡೆದ ಹದಿನೆಂಟು ಆಯುಧಗಳನ್ನು ಹಿಡಿದು ಕಮಲ, ಅಕ್ಷರಮಾಲೆ, ಬಾಣ, ಖಡ್ಗ, ವಜ್ರ, ಗದೆ, ತ್ರಿಶೂಲ, ಚಕ್ರ, ಪರಶು, ಘಂಟೆ, ಪಾಶ, ಶಕ್ತಿ, ದಂಡ, ಚರ್ಮ, ಧನಸ್ಸು, ಪಾನಪಾತ್ರೆ, ಕಮಂಡಲಗಳೊಡನೆ ದಿವ್ಯಾಭರಣಗಳಿಂದ ಅಲಂಕೃತಳಾಗಿ ಹಿಮವಂತ ನೀಡಿದ ಸಿಂಹವನ್ನೇರಿ ಉಗ್ರಸ್ವರೂಪಿಣಿಯಾಗಿ ಬಂದು ಲೋಕಕಂಟಕನಾಗಿದ್ದ ದುಷ್ಟ ಮಹಿಷಾಸುರವನ್ನು ಸಂಹಾರ ಮಾಡಿದಳು.
ಈ ವೇಳೆ ಅವಳಿಗೆ ಯುದ್ಧದಲ್ಲಿ ಅವಳ ಏಳು ಸಹೋದರಿಯರು ಸಹಕಾರ ನೀಡಿದ್ದಲ್ಲದೆ, ಎಲ್ಲರೂ ಒಂದೊಂದು ಬೆಟ್ಟದಲ್ಲಿ ನೆಲೆಸಿದರಂತೆ. ಅದರಂತೆ ಚಾಮುಂಡಿ ಮೈಸೂರಿನ ಮಹಾಬಲಬೆಟ್ಟದಲ್ಲಿ ನೆಲೆನಿಂತರೆ, ಚಿಕ್ಕದೇವಮ್ಮ ಹೆಚ್.ಡಿ.ಕೋಟೆ ತಾಲೂಕಿನ ಪುರದ ಕಟ್ಟೆ ಬಳಿ ನೆಲೆ ನಿಂತಿದ್ದು ವಿಶೇಷವಾಗಿದೆ.
ಇಂದಿಗೂ ಶಕ್ತಿದೇವತೆಯಾಗಿರುವ ಚಿಕ್ಕದೇವಮ್ಮನ ದರ್ಶನ ಮಾಡಿ ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಜನತೆಯಲ್ಲಿದೆ. ಹೀಗಾಗಿಯೇ ಜನ ಕಷ್ಟ ಬಂದಾಗ ತಾಯಿಗೆ ಹರಕೆ ಹೊತ್ತು ಬಳಿಕ ಶ್ರೀ ಚಿಕ್ಕದೇವಮ್ಮದೇವಿಯ ಸನ್ನಿಧಿಗೆ ಆಗಮಿಸಿ ತೀರಿಸುತ್ತಾರೆ. ಚಾಮುಂಡೇಶ್ವರಿಯನ್ನು ಹೇಗೆ ಪೂಜಿಸುತ್ತಾರೆಯೋ ಹಾಗೆಯೇ ಹಿಂದೆ ಯದುವಂಶದ ಮಹಾರಾಜರು ಚಿಕ್ಕಮ್ಮದೇವಿಯನ್ನು ಪೂಜಿಸುತ್ತಿದ್ದರಂತೆ. ಪರಿವಾರ ಸಹಿತ ಬಂದು ದೇವಿಗೆ ಪೂಜಾಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಚಿಕ್ಕದೇವಮ್ಮ ಸುತ್ತಮುತ್ತಲ ಜನರ ಆರಾಧ್ಯ ದೇವತೆ
ಇತ್ತೀಚಿಗಿನ ವರ್ಷಗಳಲ್ಲಿ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ದಿನಗಳಲ್ಲದೆ, ವಾರದ ಏಳು ದಿನವೂ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಹಿರಿಯರು ಹೇಳುವ ಪ್ರಕಾರ ಶ್ರೀ ಚಿಕ್ಕದೇವಮ್ಮತಾಯಿ ಬೆಟ್ಟಕ್ಕೂ ಮೈಸೂರಿನ ಚಾಮುಂಡಿಬೆಟ್ಟಕ್ಕೂ ಸುರಂಗ ಮಾರ್ಗವಿದೆಯಂತೆ ಇದಕ್ಕೆ ಸಾಕ್ಷಿ ಎನ್ನುವಂತೆ ಸುರಂಗ ಮಾರ್ಗ ಈಗಲೂ ಕಾಣಿಸುತ್ತಿದ್ದು, ಗಿಡಗಂಟಿಗಳು ಆವರಿಸಿ ಮುಚ್ಚಿ ಹೋಗಿದೆ. ಈ ಸುರಂಗದಲ್ಲಿ ಸರ್ಪ ನೆಲೆನಿಂತಿದೆ ಎಂದು ಹೇಳಲಾಗುತ್ತಿದ್ದು, ಆ ಕಡೆ ಹೋಗಲು ಯಾರೂ ಪ್ರಯತ್ನ ಮಾಡುತ್ತಿಲ್ಲ.
ಚಿಕ್ಕದೇವಮ್ಮತಾಯಿ ಕ್ಷೇತ್ರ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಬೆಟ್ಟಗುಡ್ಡಗಳ ಹಸಿರು ಹಚ್ಚಡದ ಸುಂದರ ಪರಿಸರದಲ್ಲಿ ನೆಲೆನಿಂತಿದ್ದು, ಸುತ್ತಮುತ್ತಲ ಊರಿನವರಿಗೆ ಆರಾಧ್ಯದೇವತೆ ಪೂಜಿಸಲ್ಪಡುತ್ತಿದ್ದಾಳೆ. ಸ್ಥಳೀಯರು ಮತ್ತು ದೂರದ ಭಕ್ತರು ಆಗಾಗ್ಗೆ ಬೆಟ್ಟವನ್ನೇರಿ ಬಂದು ದೇವಿಯ ದರ್ಶನ ಪಡೆದು ಹಿಂತಿರುಗುತ್ತಾರೆ. ದಿನನಿತ್ಯವೂ ಪೂಜಾ ಕೈಂಕರ್ಯ ನಡೆಯುತ್ತಿದ್ದು, ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈಗ ಆಷಾಢವಾದುದರಿಂದ ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆದು ಹಿಂತಿರುಗುವುದು ಹೆಚ್ಚು ಹೆಚ್ಚಾಗಿ ಕಂಡು ಬರುತ್ತದೆ.












Click it and Unblock the Notifications